
ಬೆಂಗಳೂರು: ಗೃಹ ಸಚಿವ ಜಿ. ಪರಮೇಶ್ವರ ಅವರನ್ನು 'ನಾಲಾಯಕ್ (ಅಸಮರ್ಥ) ಗೃಹಮಂತ್ರಿ' ಎಂದು ಕರೆದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಸೋಮವಾರ ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಸಚಿವರು ಮತ್ತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಿಂದೆ, ಬಿಹಾರದಲ್ಲಿ ಪ್ರತಿನಿತ್ಯ ಅಪರಾಧ ನಡೆಯುತ್ತಿದೆ ಎಂದು ದಕ್ಷಿಣದಲ್ಲಿ ನಾವು ಕುಳಿತು ಮಾತನಾಡುತ್ತಿದ್ದೆವು. ಈಗ ಬಿಹಾರದಲ್ಲಿ ಶಾಂತಿ ನೆಲೆಸಿದೆ. ಕರ್ನಾಟಕದಲ್ಲಿ ಪ್ರತಿನಿತ್ಯ ಒಂದು- ಎರಡು, ಮೂರು ನಾಲ್ಕು ಎಂಬ ರೀತಿಯಲ್ಲಿ ಕೊಲೆ ನಡೆಯುತ್ತಿದೆ. ಕರ್ನಾಟಕದಲ್ಲಿ ರಾಜ್ಯ ಸರಕಾರ ಬದುಕಿದೆಯೇ ಅಥವಾ ಸತ್ತಿದೆಯೇ ಎಂಬ ಸಂಶಯ ಕೇವಲ ನಮ್ಮ ರಾಜ್ಯದ ಜನರಿಗೆ ಅಲ್ಲ, ನಾವು ಯಾವ ರಾಜ್ಯಕ್ಕೆ ಹೋದರೂ ಕೂಡ ‘ನಿಮ್ಮ ರಾಜ್ಯಕ್ಕೆ ಏನಾಗಿದೆ?’ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಸರಕಾರ ಯಾವಾಗ ಆಡಳಿತಕ್ಕೆ ಬರುತ್ತದೋ, ಕರ್ನಾಟಕ ರಾಜ್ಯದಲ್ಲಿ ಅಪರಾಧಿಗಳ ಕೈ ಮೇಲಾಗುತ್ತದೆ ಎಂದು ಟೀಕಿಸಿದರು.
2013ರಲ್ಲಿ ಸಿದ್ದರಾಮಯ್ಯನವರ ಸರಕಾರ ಆಡಳಿತ ಮಾಡಿತ್ತು. ಅವತ್ತು ಅಪರಾಧಿಗಳ ಕೈ ಮೇಲಾಗಿತ್ತು. ಅವತ್ತು ಇದ್ದ ಪಿಎಫ್ಐ, ಕೆಎಫ್ಡಿ- ಹೀಗೆ ಬೇರೆಬೇರೆ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಭಯೋತ್ಪಾದಕರನ್ನು, ಸಮಾಜಘಾತುಕರನ್ನು, ರುದ್ರೇಶ್ ಅವರ ಕೊಲೆ ಸೇರಿ ಬೇರೆ ಬೇರೆ ಕೇಸಿನಲ್ಲಿ ಬಂಧನಕ್ಕೆ ಒಳಗಾದವರ ಮೊಕದ್ದಮೆಗಳನ್ನು ಕ್ಯಾಬಿನೆಟ್ ಸಭೆಯಲ್ಲಿ ಹಿಂದಕ್ಕೆ ಪಡೆದಿದ್ದರು ಎಂದು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮೊನ್ನೆ ಪೊಲೀಸ್ ಠಾಣೆ ಸುಡುವ ಘಟನೆ ನಡೆಯಿತು. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗುವ ಕೆಲಸ ಮಾಡಿದರು. ಪೊಲೀಸರಿಗೆ ಹೊಡೆದರು. ಅಂತಹ 43 ಕೇಸುಗಳನ್ನು ಮತ್ತೆ ಹಿಂಪಡೆಯುವ ಒಂದು ಪ್ರಸ್ತಾಪವನ್ನು ಸಂಪುಟ ಸಭೆಗೆ ಸಿದ್ದರಾಮಯ್ಯನವರು ತಂದರು. ರಾಜ್ಯದಲ್ಲಿರುವ ಸಮಾಜಘಾತುಕರನ್ನು, ಭಯೋತ್ಪಾದಕರನ್ನು ರಸ್ತೆಯಲ್ಲಿ ಬಿಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ಯಾರು ಜೈಲಿನಲ್ಲಿ ಇರಬೇಕೋ ಅವರನ್ನು ಬೀದಿಗೆ ಬಿಟ್ಟರು. ಅವರನ್ನು ರಾಜಾರೋಷವಾಗಿ ತಿರುಗಲು ಬಿಟ್ಟಿದ್ದಾರೆ. ಅಲ್ಲದೆ ಅವರು ಅಪರಾಧ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂದು ಟೀಕಿಸಿದರು.
ಇದರ ಪರಿಣಾಮವಾಗಿ ಕಳೆದ ಅವರ ಸರಕಾರದಲ್ಲಿ 23 ಹಿಂದೂ ಯುವಕರನ್ನು, ಕಾರ್ಯಕರ್ತರನ್ನು ನಾವು ಕಳೆದುಕೊಂಡೆವು. ಎನ್ಐಎ, ಅಮಿತ್ ಶಾ ಅವರಿಗೆ ಪತ್ರ ಬರೆದ ಪರಿಣಾಮವಾಗಿ ರುದ್ರೇಶ್ ಕೇಸ್, ಪ್ರವೀಣ್ ನೆಟ್ಟಾರು ಅವರ ಕೇಸನ್ನು ತನಿಖೆ ಮಾಡಲಾಯಿತು. ಎನ್ಐಎ ತನಿಖೆ ಮೂಲಕ ರಾಜ್ಯದಲ್ಲಿ ಯಾರ್ಯಾರು ಬೇರೆಬೇರೆ ದೇಶಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರೋ, ಬೇರೆಬೇರೆ ದೇಶಗಳಲ್ಲಿ ತರಬೇತಿ ಪಡೆದಿದ್ದರೋ, ಬೇರೆಬೇರೆ ರಾಜ್ಯಗಳಲ್ಲಿ ಕೊಲೆ ಮಾಡಿ ಅವಿತುಕೊಂಡಿದ್ದರೋ ಅವರು ಸಿಕ್ಕಿ ಹಾಕಿಕೊಂಡರು ಎಂದು ವಿವರಿಸಿದರು.
ಮಂಗಳೂರು, ಮೈಸೂರು, ಪುತ್ತೂರು, ಸುಳ್ಯ ಇಂತಹ ಭಾಗಗಳಲ್ಲಿ ಯಾರು ಭಯೋತ್ಪಾದಕರು, ಸಮಾಜದ್ರೋಹಿ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದರೋ, ಹಣಕಾಸಿನ ನೆರವು ನೀಡುತ್ತಿದ್ದವರು ಸಿಕ್ಕಿ ಹಾಕಿಕೊಂಡರು. ಅವರೀಗ ಜೈಲಿನಲ್ಲಿ ಇದ್ದಾರೆ. ಇದರ ಪರಿಣಾಮವಾಗಿ ಕೇಂದ್ರ ಸರಕಾರಕ್ಕೆ ಒಂದು ಬಲವಾದ ಆಧಾರ ಸಿಕ್ಕಿದೆ. ಪಿಎಫ್ಐ ನಿಷೇಧದ ಕೋರಿಕೆ ಮುಂದಿಟ್ಟಿದ್ದೆವು. ಸರಿಯಾದ ಸಬೂಬು, ಸಮರ್ಪಕ ಮಾಹಿತಿ, ಸರಿಯಾದ ಕೇಸುಗಳು ಕೇಂದ್ರ ಸರಕಾರಕ್ಕೆ ಸಿಕ್ಕಿರಲಿಲ್ಲ. ಪ್ರವೀಣ್ ನೆಟ್ಟಾರು ಕೇಸಿನಲ್ಲಿ ಪಿಎಫ್ಐ ಕೈವಾಡ ಗೊತ್ತಾಯಿತು. ಇದರ ಪರಿಣಾಮವಾಗಿ ಕೇಂದ್ರ ಸರಕಾರವು ಪಿಎಫ್ಐ ನಿಷೇಧಿಸಿದೆ ಎಂದು ತಿಳಿಸಿದರು.
ಪಿಎಫ್ಐ ಕಾರ್ಯಕರ್ತರು ಎಲ್ಲಿ ಹೋದರು? ಅವರು ಇನ್ನೂ ಕಾರ್ಯಾಚರಣೆಯಲ್ಲಿ ಇದ್ದಾರೆ. ಅವರೆಲ್ಲ ರಾಜಕೀಯ ಸಂಸ್ಥೆ ಎಸ್ಡಿಪಿಐ ಸೇರಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಕುಮ್ಮಕ್ಕಿನ ಕಾರಣಕ್ಕಾಗಿ, ಸಿದ್ದರಾಮಯ್ಯನವರು ಕೇಸನ್ನು ಹಿಂಪಡೆದ ಪರಿಣಾಮವಾಗಿ ಅಲ್ಲಿರುವ ಎಲ್ಲ ಅಪರಾಧಿಗಳು ಮತ್ತೆ ಕೊಲೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
2014ರಿಂದ ಸಿದ್ದರಾಮಯ್ಯ ಮಾನಸಿಕವಾಗಿ ಟಿಪ್ಪು ಸುಲ್ತಾನ್ ಆಗಿ ಬದಲಾಗುತ್ತಿದ್ದಾರೆ. ಇದರ ಪರಿಣಾಮ ಹಿಂದೂ ಯುವಕರ ಹತ್ಯೆ ಆಗುತ್ತಿದೆ. ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್ ಅಂತ ಸರ್ಕಾರ ಬಿಂಬಿಸಿದೆ. ಸುಹಾಸ್ ಹತ್ಯೆ ಆಗೋದು ಬಜ್ಪೆ ಠಾಣೆ ಪೊಲೀಸರಿಗೆ ಗೊತ್ತಿದ್ದರೂ ಕ್ರಮ ತೆಗೊಳ್ಳಲಿಲ್ಲ. ಪರಿಣಾಮ ಸುಹಾಸ್ ಶೆಟ್ಟಿಯನ್ನು ಕೊಚ್ಚಿ ಕೊಚ್ಚಿ ಕೊಂದರು ಎಂದು ಕಿಡಿಕಾರಿದರು.
ಪರಮೇಶ್ವರ ಒಬ್ಬ ನಾಲಾಯಕ್ ಗೃಹ ಸಚಿವ. ಅವರಿಗೆ ಇಲಾಖೆ ನಿಭಾಯಿಸಲು ಶಕ್ತಿ ಇಲ್ಲ. ರಾಜ್ಯದಲ್ಲಿ ನಿಜವಾಗಿಯೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಎಂ ಬಯಸಿದ್ದೇ ಆದರೆ, ಮೊದಲು ಪರಮೇಶ್ವರ ಅವರನ್ನು ವಜಾಗೊಳಿಸಿ ಗೃಹ ಸಚಿವಾಲಯದ ನಿಯಂತ್ರಣವನ್ನು ತೆಗೆದುಕೊಳ್ಳಬೇಕು. ಎಲ್ಲರನ್ನೂ ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಆದರೆ, ನಿಮ್ಮ ಮೇಲೆ ಭರವಸೆ ಇಲ್ಲದಂತಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಪೀಕರ್ ಖಾದರ್ ಹಾಗೂ ಬಜ್ಪೆ ಪೊಲೀಸ್ ಠಾಣೆ ಸಿಬಂದಿ ರಶೀದ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸ ಬೇಕು ಎಂದು ಆಗ್ರಹಿಸಿದರು.
ಸ್ಪೀಕರ್ ಪೀಠದಲ್ಲಿ ಕುಳಿತುಕೊಳ್ಳುವುದಕ್ಕೆ ಖಾದರ್ಗೆ ನೈತಿಕತೆ ಇಲ್ಲ. ಸ್ಪೀಕರ್ ಆಗಿ ಅವರು ಈ ಪ್ರಕರಣದ ಬಗ್ಗೆ ಯಾಕೆ ಮಾತನಾಡಿದರು? ಫಾಝಿಲ್ ಮನೆಯವರು ನಿರಪರಾಧಿಗಳೆಂದು ಅವರು ಪ್ರತಿಪಾದಿಸಿದ್ದಾರೆ. ಆದರೆ ಪೊಲೀಸ್ ತನಿಖೆಯಲ್ಲಿ ಫಾಝಿಲ್ ಸೋದರನೇ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಸಂಪೂರ್ಣವಾಗಿ ದಾರಿತಪ್ಪಿಸುವ ಕೆಲಸವನ್ನು ಖಾದರ್ ಮಾಡಿದ್ದಾರೆ.
ಬಜ್ಪೆ ಪೊಲೀಸ್ ಠಾಣೆ ಸಿಬಂದಿ ರಶೀದ್ಗೆ ಸುಹಾಸ್ ಕೊಲೆಯಾಗುವ ಬಗ್ಗೆ ಮೊದಲೇ ಗೊತ್ತಿತ್ತು. ಅವನನ್ನು ಮೊದಲು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಉಳ್ಳಾಲದಿಂದ ಕೇರಳದಿಂದ ಮಂಗಳೂರಿಗೆ ಬರುವ ದುಷ್ಕರ್ಮಿಗಳಿಗೆ ಖಾದರ್ ದಾರಿ ಮಾಡಿಕೊಡುತ್ತಾರೆ. ಹಲವು ವರ್ಷಗಳಿಂದ ಆಗುತ್ತಿರುವ ಕೊಲೆಗೆ ಇವರೆಲ್ಲರ ಸಹಕಾರ ಇದೆ. ಹೊರ ದೇಶದಿಂದ ಹಣದ ಸಹಕಾರ ಇದೆ. ವಿದೇಶದಿಂದ ಹಣ ಬಂದಿದೆ. ಕೋಟ್ಯಂತರ ರೂ. ವಹಿವಾಟು ಆಗಿದೆ. ಆ ಹಣ ಯಾರ ಖಾತೆಗೆ ಬಂದಿದೆ ಎಂಬುದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಬಳಿಕ ರೌಡಿಶೀಟರ್ಗಳು ಹಿಂದೂ ಸಂಘಟನೆ ಸೇರುತ್ತಿದ್ದಾರೆ ಎಂದು ಸಚಿವ ದಿನೇಶ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾನು ಹಿಂದೂ ಸಂಘಟನೆಯಿಂದ ಬಂದಿದ್ದೇನೆ. ನನ್ನ ಮೇಲೆ ಕೇಸ್ ಹಾಕುವ ತಾಕತ್ ನಿಮಗಿದೆಯಾ? ನಾನು ಆರೆಸ್ಸೆಸ್, ವಿಎಚ್ಪಿ ಹಿಂದೂ ಸಂಘಟನೆಯವಳು. ಆಮೇಲೆ ನಾನು ಬಿಜೆಪಿ. ಹಾಗಾದರೆ ಕೇಸ್ ಹಾಕಿ ನೋಡೋಣ ಎಂದರು.
ವಸತಿ ಸಚಿವ ಜಮೀರ್ ಅವರು ಅತ್ಮಾಹುತಿ ಬಾಂಬರ್ ಆಗಿ ಪಾಕಿಸ್ತಾನಕ್ಕೆ ಯುದ್ಧಕ್ಕೆ ಹೋಗುತ್ತೇನೆಂಬ ಹೇಳಿಕೆಗೆ ಪ್ರತಿಕ್ರಿಯಿಸಲಿ, ಇದು ಸಾರ್ವಜನಿಕರ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆ ಸೆಳೆಯಲು ಮಾಡಿದ ಗಿಮಿಕ್ ಆಗಿದೆ ಎಂದು ಟೀಕಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಾಂಬ್ ಕಟ್ಟಿಕೊಂಡು ಪಾಕಿಸ್ಥಾನಕ್ಕೆ ಹೋಗುವುದು ಬೇಡ. ಸಂಸಾರ ಸಮೇತ 2 ವರ್ಷ ಪಾಕಿಸ್ತಾನದಲ್ಲಿ ಇರಲಿ ಟಾಂಗ್ ನೀಡಿದರು.
Advertisement