
ಬೆಂಗಳೂರು: ಮಂಗಳೂರಿನ ಹಿಂದೂ ಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂಬ ಬಿಜೆಪಿಯ ಬೇಡಿಕೆಯನ್ನು ಗೃಹ ಸಚಿವ ಜಿ ಪರಮೇಶ್ವರ ಅವರು ಭಾನುವಾರ ತಿರಸ್ಕರಿಸಿದ್ದಾರೆ.
ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಹಾಗೂ ಹಿಂದುತ್ವವಾದಿ ಸುಹಾಸ್ ಶೆಟ್ಟಿಯನ್ನು ಗುರುವಾರ ತಡರಾತ್ರಿ ಅಪರಿಚಿತ ತಂಡವೊಂದು ಹತ್ಯೆ ಮಾಡಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, NIA ತನಿಖೆ ನಡೆಯಬೇಕು ಎಂಬುದು ಬಿಜೆಪಿ ಅಭಿಪ್ರಾಯ.ನಮ್ಮ ಪೋಲೀಸರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾರೆ ಎಂಬುದು ನಮ್ಮ ಅಭಿಪ್ರಾಯ. ಈ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ಅಗತ್ಯವಿಲ್ಲ ಎಂದರು.
ಸರ್ಕಾರದಿಂದ ಯಾರೊಬ್ಬರೂ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಶೆಟ್ಟಿ ಅವರ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳಿವೆ. ದಯವಿಟ್ಟು ಇದೊಂದು ಕೊಲೆ ಪ್ರಕರಣ ಎಂದು ತಿಳಿಯಿರಿ. ಆತನ ವಿರುದ್ಧ ಐದು ಕ್ರಿಮಿನಲ್ ಮೊಕದ್ದಮೆಗಳಿದ್ದವು. ಆ ಕಾರಣಕ್ಕೆ ಸರ್ಕಾರದಿಂದ ಯಾರೊಬ್ಬರೂ, ನಾನಾಗಲಿ, ಬೇರೆ ಯಾರೇ ಆಗಲಿ ಅವರನ್ನು ಭೇಟಿ ಮಾಡಿಲ್ಲ ಎಂದು ಸಚಿವರು ಹೇಳಿದರು.
ಆದರೂ ಕುಟುಂಬಕ್ಕೆ ನ್ಯಾಯ ಸಿಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ. ಈಗಾಗಲೇ ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ ಮತ್ತು ನಾವು ಎಂಟು ಜನರನ್ನು ಬಂಧಿಸಿದ್ದೇವೆ. ಕೋಮು ಸೂಕ್ಷ್ಮ ಕರಾವಳಿ ಕರ್ನಾಟಕ ಭಾಗದಲ್ಲಿ ಶಾಶ್ವತವಾಗಿ ಕೋಮು ವಿರೋಧಿ ಕಾರ್ಯಪಡೆ ರಚಿಸಲಾಗುವುದು ಎಂದು ಪರಮೇಶ್ವರ ಹೇಳಿದರು.
Advertisement