
ಮೈಸೂರು: ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ. ಯತೀಂದ್ರ ವರ್ಗಾವಣೆ ಸಚಿವರಾಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಮಿನೀಟ್ ಕಾಟ ಹೆಚ್ಚಾಗಿದೆ. ಯಾವುದೇ ವರ್ಗಾವಣೆ ಆಗ ಬೇಕಾದರೆ ಸಿಎಂ ಪುತ್ರನಿಗೆ ತೆರಿಗೆ ಕಟ್ಟ ಬೇಕು. ಕಲೆಕ್ಷನ್ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪೈಪೋಟಿಗೆ ಇಳಿದಿದ್ದಾರೆ. ಯಾರು ಜಾಸ್ತಿ ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡುತ್ತೇವೆ ಎಂದು ಪೈಪೋಟಿಗೆ ಇಳದಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಹೃದಯ ಕಲ್ಲಾಗಿದೆ. ಯಾವ ಜಾತಿಯವನೂ ಆರೋಪಿ ಎಂದು ನೋಡಿ ನಂತರ ಅವನನ್ನು ಹಿಡಿಯ ಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ. ಮೈಸೂರು ಪೊಲೀಸರಿಗೆ ಮಿನೀಟ್ ಕಾಟ, ವರ್ಗಾವಣೆ ಕಾಟ, ಜಾತಿ ಕಾಟ ಜಾಸ್ತಿ ಆಗಿದೆ ಎಂದು ಅವರು ದೂರಿದರು.
ಮೈಸೂರಿನಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಅದರ ಮೇಲೂ ಪೊಲೀಸರ ರೈಡ್ ಮಾಡಲು ಹೆದರುತ್ತಿದ್ದಾರೆ. ಯಾವ ಸಚಿವನ, ಶಾಸಕನ ಫೋನ್ ಬರುತ್ತದೆ ಎಂದು ಪೊಲೀಸರಿಗೆ ಭಯ ಆಗಿದೆ. ಮಿನೀಟ್ ಗೆ ದುಡ್ಡು ತೆಗೆದುಕೊಂಡು ಪೊಲೀಸರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯ ಕುರ್ಚಿ ಖಾಲಿಯಾದರೆ ತನಗೆ ಸಿಗುತ್ತೆ ಅಂತಾ ಗೃಹ ಸಚಿವರು ಇಲಾಖೆಯನ್ನೇ ಮೆರೆತಿದ್ದಾರೆ. ಸಿಎಂ ಅವರೇ ನಿಮ್ಮ ಮಗನಿಗೆ ಹೇಳಿ ವರ್ಗಾವಣೆ ದಂಧೆ ನಿಲ್ಲಿಸಲು. ಶಾಸಕರಿಗೆ ವಸೂಲಿ ನಿಲ್ಲಿಸಲು ಹೇಳಿ. ಇಲ್ಲ ನೀವೇ ವಸೂಲಿ ಮಾಡಲು ಬಿಟ್ಟಿದ್ದೀರಾ ಎಂದು ಅವರು ಪ್ರಶ್ನಿಸಿದರು.
ಮೈಸೂರಿನಲ್ಲಿ ಅತ್ಯಾಚಾರವೆಸಗಿ 9 ವರ್ಷದ ಬಾಲಕಿ ಕೊಲೆ ಪ್ರಕರಣ ಸಂಬಂಧವೂ ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಕಾಮೆಂಟ್ ಮಾಡುವ, ಡೊನಾಲ್ಡ್ ಟ್ರಂಪ್ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಯಾರೊಬ್ಬರೂ ಬಾಲಕಿ ಕೊಲೆ ವಿಚಾರವಾಗಿ ಮಾತನಾಡುತ್ತಿಲ್ಲ.
ಪ್ರಿಯಾಂಕ್, ಲಾಡ್ ಒಬ್ಬನಾದರೂ ಬಾಯಿ ತೆರೆಯುತ್ತಿದ್ದಾರಾ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಏಕೆ ಈ ಬಗ್ಗೆ ಮಾತಾಡ್ತಿಲ್ಲ? ಸಿದ್ದರಾಮಯ್ಯ ಅವರೇ ಯಾವ ಪುರುಷಾರ್ಥಕ್ಕೆ ಸಿಎಂ ಆಗಿದ್ದೀರಾ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
Advertisement