
ಬೆಂಗಳೂರು: ಸೌಜನ್ಯಾ ತಾಯಿ ಮಾತು ಬಳಿಕ 'ಧರ್ಮಸ್ಥಳ ಚಲೋ ಬದಲು' “ಧರ್ಮಸ್ಥಳದಿಂದ ವಾಪಸ್ ಚಲೋ“ ಕಾರ್ಯಕ್ರಮ ಮಾಡಬೇಕಿತ್ತು ಎಂದು ಬಿಜೆಪಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆಯವರು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ, ಷಡ್ಯಂತ್ರ ನಡೆಯುತ್ತಿದೆ ಎಂದು ಧರ್ಮಸ್ಥಳ ಚಲೋ ಮಾಡಿದ ಬಿಜೆಪಿ ನಾಯಕರು ಸೌಜನ್ಯ ತಾಯಿ ಕುಸುಮಾವತಿಯವರು ತಮ್ಮೆದುರು ಹೇಳಿದ ನೈಜ ಸಂಗತಿಯನ್ನು ಜಗತ್ತಿಗೆ ತಿಳಿಸು ಧೈರ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಸೌಜನ್ಯ ಹೆಸರು ಹೇಳಿಕೊಂಡು ಹಣ ಮಾಡಿದ್ದಾರೆ, ಇಷ್ಟು ದೊಡ್ಡ ಮನೆ ಕಟ್ಟಿಸಿದ್ದಾರೆ ಎಂದು ನಿಮ್ಮದೇ ಪಕ್ಷದವರು ಹೇಳುತ್ತಿದ್ದಾರೆ ಎಂಬ ಕುಸುಮಾವತಿಯವರ ಮಾತಿಗೆ ಬಿಜೆಪಿ ನಾಯಕರು ಉತ್ತರ ನೀಡದೆ ಮೌನವಹಿಸಿದ್ದೇಕೆ? ವಿಜಯೇಂದ್ರ ಅವರೇ, ಮೊದಲು ಸೌಜನ್ಯ ಕುಟುಂಬಕ್ಕೆ ನಿಮ್ಮ ಪಕ್ಷ ನೀಡಿದ ಕಿರುಕುಳಕ್ಕೆ ನ್ಯಾಯ ಸಿಗಬೇಕಲ್ಲವೇ? ಆ ನೊಂದ ಕುಟುಂಬಕ್ಕೆ ಬಿಜೆಪಿ ನೀಡುತ್ತಿರುವ ಕಿರುಕುಳದ ಬಗ್ಗೆ ಉತ್ತರ ಸಿಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಯಾರ ಪರವಾಗಿ ಧರ್ಮಸ್ಥಳಕ್ಕೆ ಹೋಗಿದ್ದರೋ ಅವರ ವಿರುದ್ಧವೇ ಕುಸುಮಾವತಿ ದೂರು ಹೇಳಿದ್ದಾರೆ. ಬಿಜೆಪಿ ನಾಯಕರು ಕುಸುಮಾವತಿಯವರ ಮಾತು ಕೇಳಿಸಿಕೊಂಡ ನಂತರವೂ ಕಾರ್ಯಕ್ರಮದ ವೇದಿಕೆ ಹತ್ತಿ ಕೂರುವುದಕ್ಕೆ ಹೇಗೆ ಮನಸಾಯಿತು? ಬಿಜೆಪಿಯವರು ಸೌಜನ್ಯ ಪರವೋ, ವಿರುದ್ಧವೋ ಎನ್ನುವುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ.
ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದ ಬಿಜೆಪಿಗೆ ಯಾರಿಂದ ನ್ಯಾಯ ಸಿಗಬೇಕು ಎನ್ನುವುದನ್ನು ಸೌಜನ್ಯ ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ, ನ್ಯಾಯ ಕೊಡಿಸುವರೇ? ಸೌಜನ್ಯ ತಾಯಿಯವರ ಕಾನೂನು ಹೋರಾಟಕ್ಕೆ ಬಿಜೆಪಿ ಪಕ್ಷವೇ ಹಣದ ನೆರವನ್ನು ನೀಡಲಿದೆ ಎಂದು ಘೋಷಿದ್ದಾರೆ. ಆ ಕಾನೂನು ಹೋರಾಟ ಯಾರ ವಿರುದ್ಧವಾಗಿರುತ್ತದೆ ಎಂಬ ಪ್ರಜ್ಞೆ ಬಿಜೆಪಿಗಿದೆಯೇ? ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದರಲ್ಲಿ ಬಿಜೆಪಿಗೆ ನೈಜ ಬದ್ಧತೆ ಇದ್ದಿದ್ದೇ ಆಗಿದ್ದರೆ ಕುಸುಮಾವತಿಯವರ ಮಾತು ಕೇಳಿದ ನಂತರ ಧರ್ಮಸ್ಥಳ ಚಲೋ ಮಾಡುವ ಬದಲು “ಧರ್ಮಸ್ಥಳದಿಂದ ವಾಪಸ್ ಚಲೋ“ ಕಾರ್ಯಕ್ರಮ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.
Advertisement