
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ನ್ಯಾ.ನಾಗಮೋಹನ ದಾಸ್ ವರದಿ, ನ್ಯಾ.ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಎಲ್ಲವನ್ನೂ ಕೈ ಬಿಟ್ಟು ರಾಜಕೀಯ ಪಂಚಾಯಿತಿ ಮಾಡುವ ರೀತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಶನಿವಾರ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಆಂತರಿಕ ಮೀಸಲಾತಿ ನೀತಿಯನ್ನು ತಿರುಚುತ್ತಿದ್ದು, ಪ್ರಮುಖ ಆಯೋಗದ ವರದಿಗಳು ಮತ್ತು ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ನಿರ್ಲಕ್ಷಿಸುವ ಮೂಲಕ ಅನ್ಯಾಯ ಎಸಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಒಳ ಮೀಸಲಾತಿಯಲ್ಲೂ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ಪರಿಶಿಷ್ಟರ ಮಧ್ಯೆಯೇ ಒಳಜಗಳ ಸಷ್ಟಿಸಿದೆ. ರಾಜಕೀಯ ಪಂಚಾಯಿತಿ ಮೂಲಕ 6-6-5 ಹಂಚಿಕೆ ಸೂತ್ರ ಸಿದ್ಧಪಡಿಸಿದೆ. ನ್ಯಾಯಮೂರ್ತಿ ನಾಗಮೋಹನದಾಸ್, ನ್ಯಾಯಮೂರ್ತಿ ಸದಾಶಿವ ಆಯೋಗ ಹಾಗೂ ಮಾಧುಸ್ವಾಮಿ ಅವರ ವರದಿಗಳನ್ನು ಕಡೆಗಣಿಸಿ, ರಾಜಕೀಯ ನಿರ್ಣಯದ ಮೂಲಕ ಮೀಸಲಾತಿ ನಿಗದಿ ಮಾಡುವುದಾದರೆ ಆಯೋಗಗಳನ್ನು ಏಕೆ ನೇಮಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಹಿಂದೆ ತಮ್ಮ ನೇತೃತ್ವದ ಬಿಜೆಪಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಶೇ 17ಕ್ಕೆ ಹೆಚ್ಚಿಸಿ, ಒಳ ಮೀಸಲು ಘೋಷಣೆ ಮಾಡಿದ್ದೆವು. ಆಗ, ಇದೇ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದರು. ನಮ್ಮ ನಿರ್ಧಾರವನ್ನು ಈಗ ಅವರೇ ಒಪ್ಪಿಕೊಂಡಂತೆ ಆಗಿದೆ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಅವಕಾಶ ವಂಚಿತ ಅಲೆಮಾರಿ ಸಮುದಾಯಗಳಿಗಾಗಿ ಶೇ.1ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು. ಅಲೆಮಾರಿಗಳಿಗೆ ಪ್ಯಾಕೇಜ್ ನೀಡುತ್ತೇವೆ ಎನ್ನುವುದಕ್ಕೆ ಅದೇನು ಒಪ್ಪಂದವೇ? ಬೋವಿ, ಲಂಬಾಣಿಯವರಿಗೆ ನೀಡಿರುವ ಮೀಸಲಾತಿಯನ್ನು ಇನ್ನೊಮ್ಮೆ ಪರಿಷ್ಕರಿಸಿ, ಎಕೆ, ಎಡಿ, ಎಎ ಸಮುದಾಯಗಳಿಗೆ ನ್ಯಾಯ ಕೊಡಬೇಕು.
ಶಿಕ್ಷಣ ನೇಮಕಾತಿ ಹಾಗೂ ಭಡ್ತಿಯಲ್ಲಿ ಎಲ್ಲದರಲ್ಲೂ ಒಳ ಮೀಸಲಾತಿ ಪಾಲನೆಯಾಗಬೇಕು. ನಾವು ಬಿಜೆಪಿಯಿಂದ ಎಲ್ಲ ಸಮುದಾಯಗಳ ಜತೆಗೆ ನಿಲ್ಲುತ್ತೇವೆ. ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ. ಸರಕಾರದ ಮಟ್ಟದಲ್ಲಿ ಬಗೆಹರಿಸಲು ಅವಕಾಶವಿದ್ದು, ಅದನ್ನು ಬಗೆಹರಿಸದಿದ್ದರೆ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Advertisement