

ಗದಗ: ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, ಎಂಜಿನಿಯರ್ ಮಗ ಎಂಜಿನಿಯರ್ ಆಗ್ತಾನೆ, ಹಾಗಿದ್ದಾಗ MLA ಮಗ MLA ಆಗೋದ್ರಲ್ಲಿ ತಪ್ಪೇನು ಸಚಿವ ಎಂ.ಬಿ. ಪಾಟೀಲ್ ಅವರು ಗುರುವಾರ ಪ್ರಶ್ನಿಸಿದ್ದು, ಈ ಮೂಲಕ ಕುಟುಂಬ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, ಎಂಜಿನಿಯರ್ ಮಗ ಎಂಜಿನಿಯರ್ ಆಗ್ತಾನೆ, ಹಾಗಿದ್ದಾಗ MLA ಮಗ MLA ಆಗೋದ್ರಲ್ಲಿ ತಪ್ಪೇನು? ಇದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು. ಇದೇ ವೇಳೆ ತಮ್ಮದೇ ಉದಾಹರಣೆ ನೀಡಿದ ಅವರು, ನಾನು ನನ್ನ ತಂದೆಯ ನಿಧನದ ಬಳಿಕ MLA ಆಗಿದ್ದೇನೆ. ಆದರೆ, ಟಿಕೆಟ್ ಸಿಕ್ಕ ಮೇಲೆ ನಮ್ಮ ಸಾಮರ್ಥ್ಯ ಮತ್ತು ಬಲವನ್ನು ತೋರಿಸಬೇಕಾಗುತ್ತದೆ ಎಂದು ಹೇಳಿದರು.
ಮೃತ ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪಕ್ಷದ ಪರಂಪರೆಯಾಗಿದೆ. “ಇದರಲ್ಲೇನು ತಪ್ಪಿಲ್ಲ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಉತ್ತಮ ವಾತಾವರಣ ಇದೆ. ಹಿಂದಿನ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಈ ಬಾರಿಯೂ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಾದಿಕ್ ಪೈಲ್ವಾನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪಕ್ಷದ ಅಭ್ಯರ್ಥಿಗಾಗಿ ಜಮೀರ್ ಅಹ್ಮದ್ ಪ್ರಚಾರ ನಡೆಸಲಿದ್ದಾರೆ. ಅವರು ಶಾಮನೂರು ಕುಟುಂಬದ ಒಳ್ಳೆಯ ಸ್ನೇಹಿತರು” ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ‘ಸೂಟ್ಕೇಸ್’ ಹೇಳಿಕೆಗೆ ತಿರುಗೇಟು ನೀಡಿದ ಅಕತವರು, “ವಿಜಯೇಂದ್ರ ಅವರಿಗೆ ಸೂಟ್ಕೇಸ್ ತೆಗೆದುಕೊಂಡು ಹೋಗುವ ಅಭ್ಯಾಸ ಇದೆ. ಅವರ ತಂದೆ ಮುಖ್ಯಮಂತ್ರಿ ಆಗಿದ್ದಾಗಲೂ ಅವರೂ ಇದೇ ಮಾಡುತ್ತಿದ್ದರು ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ಟ್ಯಾಕ್ಸ್ ಟೆರರಿಸಂ’ ಆರೋಪಕ್ಕೆ ಪ್ರತಿಕ್ರಿಯಿಸಿ, “ಬೊಮ್ಮಾಯಿ ಅವಧಿಯಲ್ಲಿ ಗುತ್ತಿಗೆದಾರರ ಬಾಕಿ ಬಿಲ್ಲುಗಳು ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಇವೆ. ನಾವು ಆ ಹೊರೆ ಹೊರುತ್ತಿದ್ದೇವೆ ಎಂದು ಆರೋಪಿಸಿದ್ದಾರೆ.
ಎಲ್ಪಿಜಿ ಕೊರತೆ ಕುರಿತು ಮಾತನಾಡಿ, “ಪ್ರಧಾನಮಂತ್ರಿ ನರೇಂದ್ರ ಮೋದಿ ಗಟಾರದಲ್ಲಿ ಗ್ಯಾಸ್ ಸಿಗುತ್ತದೆ ಎಂದಿದ್ದರು, ಅವರನ್ನೇ ಕೇಳಿ. ಮೋದಿ ಬಂದ ಬಳಿಕ ಡಾಲರ್ ಮೌಲ್ಯ 100 ರೂಪಾಯಿಗೆ ಏರಿದೆ. ಇದೇ ಅವರ ಸಾಧನೆ” ಎಂದು ವಾಗ್ದಾಳಿ ನಡೆಸಿದರು.
Advertisement