

ನವದೆಹಲಿ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವಿಚಾರವಾಗಿ ಭುಗಿಲೆದ್ದಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ರಾಜೀನಾಮೆ ನೀಡುವ ವಿಚಾರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಈ ವೇಳೆ, 'ಮುಸ್ಲಿಂ ನಾಯಕರಿಗೆ ಕಾಂಗ್ರೆಸ್ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಜಮೀರ್ ರಾಜೀನಾಮೆ ಬಗ್ಗೆ ಗೊತ್ತಿಲ್ಲ
ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆ ವಿಚಾರವಾಗಿ ಹಬ್ಬಿರುವ ವದಂತಿಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ಈ ವಿಚಾರವನ್ನು ಪತ್ರಿಕೆಗಳಲ್ಲಿ ಮಾತ್ರ ನೋಡಿದ್ದೇನೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ವೈಯಕ್ತಿಕ ಕೆಲಸಗಳ ನಿಮಿತ್ತ ಸಭೆಯ ನಂತರ ನಾನು ಅಲ್ಲಿಂದ ಹೊರಟಿದ್ದೆ, ಹೀಗಾಗಿ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಏನೇ ಇದ್ದರೂ ಹೈಕಮಾಂಡ್ ಮತ್ತು ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ,' ಎಂದು ತಿಳಿಸಿದರು.
ಮುಸ್ಲಿಂ ನಾಯಕರ ಟಾರ್ಗೆಟ್ ಇಲ್ಲ
ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ನಾಯಕರು ಟಾರ್ಗೆಟ್ ಆಗುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ಕಾಂಗ್ರೆಸ್ ಪ್ರತಿ ಹಂತದಲ್ಲೂ ಮುಸ್ಲಿಂ ನಾಯಕರಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು. ಅಂತೆಯೇ ಮುಸ್ಲಿಂ ನಾಯಕರು ಟಾರ್ಗೆಟ್ ಆಗಿಲ್ಲ. ಅವರಿಗೆ ಕಾಂಗ್ರೆಸ್ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ. ಪ್ರತಿ ಹಂತದಲ್ಲಿ ಬೆನ್ನೆಲುಬಾಗಿ ನಿಂತಿದ್ದೇವೆ. ಹಿಂದೆಯೂ ಮಾಡಿಲ್ಲ, ಮುಂದೆ ಯಾರೂ ಮಾಡಲೂ ಸಾಧ್ಯವಿಲ್ಲ ಎಂದು ಹೇಳಿದರು.
ಅದು ಅವರ ಸೀಟ್ ಅಲ್ಲ..
ದಾವಣಗೆರೆ ದಕ್ಷಿಣ ಅದು ಅಲ್ಪಸಂಖ್ಯಾತರ ಸೀಟ್ ಅಲ್ಲ. ಅಲ್ಲಿ ಶಾಮನೂರು ಶಿವಶಂಕರಪ್ಪ 40 ವರ್ಷಗಳಿಂದ ಕ್ಷೇತ್ರವನ್ನ ಕಾಪಾಡಿಕೊಂಡು ಬಂದಿದ್ದಾರೆ. ಅವರ ಜನಸಂಖ್ಯೆ ಇತ್ತು ನಿಜ.. ಅವರು ಕೇಳಿದ್ದು ತಪ್ಪಿಲ್ಲ. ಅಲ್ಪಸಂಖ್ಯಾತ ಕೆಲವು ನಾಯಕರು ಟಿಕೆಟ್ ಕೇಳಿದ್ದರು. ಆದರೆ ಬಳಿಕ ನಡೆದ ಚರ್ಚೆಯಲ್ಲಿ ಅವರು ಒಪ್ಪಿದ ಮೇಲೆಯೇ ಸಮರ್ಥ್ ಗೆ ಟಿಕೆಟ್ ನೀಡಿದೆ. ಕೆಲವು ರಿಪೊರ್ಟ್ ಗಳ ಆಧಾರದ ಮೇಲೆ ಪಕ್ಷ ಕ್ರಮ ತೆಗೆದುಕೊಂಡಿದೆ ಅಷ್ಟೇ ಎಂದು ಡಿಕಿ ಶಿವಕುಮಾರ್ ಹೇಳಿದರು.
Advertisement