

ಬೆಂಗಳೂರು: ಲೋಕಸಭೆ ಮತ್ತು ವಿಧಾಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ನೀಡುವ ಸಂಬಂಧ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳ ವಾದಗಳು ಭಯ ಹುಟ್ಟಿಸುವ ರೀತಿಯಲ್ಲಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತ ಪಡಿಸಿದ್ದಾರೆ.
ಲೋಕಸಭೆಯಲ್ಲಿ ಶುಕ್ರವಾರ ಮಹಿಳಾ ಮೀಸಲು ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸುಧಾರಣೆಗಳಿಗೆ ವ್ಯವಸ್ಥಿತವಾಗಿ ತಡೆಯೊಡ್ಡುತ್ತಿದೆ. ಈ ಮಸೂದೆಯನ್ನು ಬೆಂಬಲಿಸುವುದನ್ನು ಬಿಟ್ಟು ಜನರನ್ನು ದಾರಿತಪ್ಪಿಸುವ ಸಂಕಥನಗಳನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್ ಸೃಷ್ಟಿಸುತ್ತಿರುವ ಗೊಂದಲಗಳಿಗೆ ಅರ್ಥವಿಲ್ಲ. ಅವುಗಳನ್ನು ಜನರು ನಂಬುವುದಿಲ್ಲ ಎಂದರು.
ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡಿರುವ, ತನ್ನದೇ ಆದ ವಾದಗಳನ್ನು ಮಂಡಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದು ಈಗ ಡಿಎಂಕೆಯ ನಿರೂಪಣೆಯಿಂದ ಮುನ್ನಡೆಸಲ್ಪಡುತ್ತಿದೆ" ಎಂದು ಅವರು ಆರೋಪಿಸಿದರು.
ಮಸೂದೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೆಗೆದುಕೊಂಡ ನಿಲುವು ಎಲ್ಲ ದಕ್ಷಿಣದ ರಾಜ್ಯಗಳ ಅಭಿಪ್ರಾಯವಲ್ಲ ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಅವರು ಕೆಲ ದಿನಗಳ ಹಿಂದೆ, ತಾವು ಸ್ಟಾಲಿನ್ ಅವರ ಕಿರಿಯ ಸಹೋದರ ಎಂದು ಹೇಳಿಕೊಂಡಿದ್ದರು. ಆದರೆ, ವಿಧಾನಸಭೆ ಕ್ಷೇತ್ರಗಳ ಹಂಚಿಕೆ ನಂತರ ಹಿರಿಯ ಸಹೋದರ ಕಿರಿಯ ಸಹೋದರನ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ. ಆದರೂ ಕಿರಿಯ ಸಹೋದರ ಈಗಲೂ ಹಿರಿಯ ಸಹೋದರನಿಂದ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿರುವಂತೆ ತೋರುತ್ತಿದೆ ಎಂದು ವ್ಯಂಗ್ಯವಾಡಿದರು.
1995ರಲ್ಲಿ ಎಚ್.ಡಿ. ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಆಶಯವನ್ನು ಪ್ರಪ್ರಥಮ ಬಾರಿಗೆ ಪ್ರಸ್ತಾಪಿಸಿದ್ದರು ಎಂಬುದನ್ನು ಸ್ಮರಿಸಿದ ಅವರು, ದೇವೇಗೌಡರು ಆ ನಂತರ 1996ರಲ್ಲಿ ಪ್ರಧಾನಿಯಾಗಿ ಸಂಸತ್ತಿನಲ್ಲಿ ಈ ಮಹಿಳಾ ಮೀಸಲು ಮಸೂದೆಯನ್ನು ಮಂಡಿಸಿದ್ದರು. ಆದರೆ, ರಾಜಕೀಯ ಬೆಂಬಲದ ಕೊರತೆಯಿಂದಾಗಿ ಮಸೂದೆಗೆ ಅಂಗೀಕಾರ ಸಿಗಲಿಲ್ಲ’ ಎಂದರು.
ಜಾತಿ ಆಧಾರಿತ ಮೀಸಲಾತಿಯ ತಲೆ ಅಥವಾ ಬಾಲವನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಒಂದು ಕಾಲದಲ್ಲಿ ಮೀಸಲಾತಿಯು ಜಾತಿ ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿರಬೇಕು ಎಂದು ವಾದಿಸಿದ್ದರು ಆದರೆ ಅದೇ ವಾದವನ್ನು ಸಂಸತ್ತಿನ ಪ್ರಾತಿನಿಧ್ಯಕ್ಕೂ ವಿಸ್ತರಿಸಲು ಅವರು ಬಯಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
Advertisement