

ಬೆಂಗಳೂರು: 2023 ರಲ್ಲಿ ಮಂಡನೆಯಾದ 'ನಾರಿ ಶಕ್ತಿ' ಬಿಲ್ಗೆ ಎಲ್ಲಾ ಪಕ್ಷಗಳು ಸಹಮತ ಸೂಚಿಸಿದ್ದವು. 30 ತಿಂಗಳು ಕಳೆದರೂ ಅಧಿಸೂಚನೆ ಹೊರಡಿಸಲಿಲ್ಲವೇಕೆ? ಇದನ್ನು ಜಾರಿಗೆ ತರಲು ಏಕೆ ಮುಂಚೂಣಿ ವಹಿಸಲಿಲ್ಲ?" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವನ್ನು ತೀವ್ರವಾಗಿ ಟೀಕಿಸಿದರು.
“2023ರಲ್ಲಿ ಎಲ್ಲಾ ಪಕ್ಷಗಳ ಸಹಮತದಿಂದ ಮಹಿಳಾ ಮೀಸಲಾತಿ ಮಸೂದೆ ಅಂಗೀಕೃತವಾಯಿತು. ಸ್ವತಃ ಮೋದಿ ಅವರು ಸಹ ಅದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಆದರೆ, 30 ತಿಂಗಳುಗಳಾದರೂ ಜಾರಿಗೆ ತರಲಾಗಿಲ್ಲವೇಕೆ?” ಎಂದು ಪ್ರಶ್ನಿಸಿದರು.
ಕ್ಷೇತ್ರ ಮರುವಿಂಗಡಣೆ (delimitation) ಮಸೂದೆ ಸೋಲಿನ ವಿಚಾರ ಕುರಿತು ಮಾತನಾಡಿ, ಕ್ಷೇತ್ರ ಮರುವಿಂಗಡಣೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗೆ ಅನ್ಯಾಯ ಆಗಲಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಇದು ವಿರುದ್ಧವಾಗಿದೆ. ಹಾಗಾಗಿ ಇದನ್ನು ನಾವು ವಿರೋಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ. ಆದರೆ, ಮೋದಿ ಅವರ ಹೇಳಿಕೆಯನ್ನು ವಿರೋಧಿಸುತ್ತೇವೆ. 2010ರಲ್ಲಿ ನಾವು ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡಿದ್ದೆವು. ಬಹುಮತ ಇಲ್ಲದ್ದರಿಂದ ಈ ವಿಧೆಯಕ ಅಂಗೀಕಾರ ಆಗಲಿಲ್ಲ. ಬಿಜೆಪಿಯವರ ತತ್ತ್ವ-ಸಿದ್ಧಾಂತ ಭಯಂಕರವಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಕಾಂಗ್ರೆಸ್ ಸದಾ ಆದ್ಯತೆ ನೀಡಿದೆ. ನೆಹರು ಕಾಲದಿಂದಲೂ ಈ ಪ್ರಯತ್ನ ನಡೆದಿದೆ. ಸರೋಜಿನಿ ನಾಯ್ಡು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಂತಹ ನಾಯಕಿಯರು ಪಕ್ಷ ಮತ್ತು ದೇಶವನ್ನು ಮುನ್ನಡೆಸಿದ್ದಾರೆ. 2010 ರಲ್ಲಿ ರಾಜ್ಯಸಭೆಯಲ್ಲಿ ನಾವು ಈ ಬಿಲ್ ಮಂಡಿಸಿದ್ದೆವು, ಆದರೆ ಬಹುಮತದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ನೆನಪಿಸಿದರು.
ಬಿಜೆಪಿ ಮಹಿಳೆಯರನ್ನು ಗೌರವಿಸುವ ಪಕ್ಷವಲ್ಲ. ಮಹಿಳೆಯರನ್ನು ರಾಜಕೀಯ ಹಾಗೂ ಆರ್ಥಿಕ ಶಕ್ತಿಯಿಂದ ದೂರ ಇಡಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದರು.
Advertisement