

ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಕುರಿತಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದ್ದು, ಬಿಜೆಪಿ ನಾಯಕ ಅನುರಾಗ್ ಸಿಂಗ್ ಠಾಕೂರ್ ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳನ್ನು “ಕುಟುಂಬ ಆಧಾರಿತ ಹಾಗೂ ಕುಟುಂಬದಿಂದಲೇ ನಡೆಸಲ್ಪಡುವ ಪಕ್ಷಗಳು (FOFO)” ಎಂದು ಕರೆದಿರುವ ಅವರು, ದೇಶದ ಮಹಿಳೆಯರು ಈ ಪಕ್ಷಗಳಿಗೆ ಶೀಘ್ರದಲ್ಲೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವುದು ಎಂದರೆ ಭಾರತದಲ್ಲಿ “ಮಾತೃಶಕ್ತಿ”ಗೆ ವಿರುದ್ಧವಾಗಿ ನಿಲ್ಲುವುದಾಗಿದೆ. ಮಹಿಳೆಯರಿಗೆ ಕಿರುಕುಳ ನೀಡಿದವರು ಇತಿಹಾಸದಲ್ಲಿ ಉಳಿಯಲಿಲ್ಲ. ರಾವಣ, ಕೌರವ, ಕಂಸನಂತೆ ನಾಶವಾಗುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಮಹಿಳಾ ವಿರೋಧಿ ರಾಜಕೀಯದಲ್ಲಿ ಕಾಂಗ್ರೆಸ್ ಚಿನ್ನದ ಪದಕ ಗೆಲ್ಲುತ್ತದೆ. ಮಹಿಳೆಯರ ಪರ ಎಂದಿಗೂ ನಿಂತಿರದವರು ಈಗ ತಮ್ಮನ್ನು ರಕ್ಷಕರಂತೆ ತೋರಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಐದನೇ ಬಾರಿ ಮಹಿಳಾ ಮೀಸಲಾತಿಯನ್ನು ಅಡ್ಡಿಪಡಿಸುತ್ತಿವೆ. “ಈ ದೇಶದ ತಾಯಂದಿರು ಮತ್ತು ಸಹೋದರಿಯರು ಇದನ್ನು ಎಂದಿಗೂ ಕ್ಷಮಿಸುವುದಿಲ್ಲ. ಇವರಿಗೆ ಅಧಿಕಾರ ಮುಖ್ಯ, ಮಹಿಳಾ ಸಬಲೀಕರಣ ಮುಖ್ಯವಲ್ಲ” ಎಂದು ಕಿಡಿಕಾರಿದರು.
ಇದೇ ವೇಳೆ ಕ್ಷೇತ್ರ ಮರುವಿಂಗಡಣೆ (delimitation) ವಿಚಾರದಲ್ಲೂ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದ ಅವರು, “ದಕ್ಷಿಣ ರಾಜ್ಯಗಳಿಗೆ ಯಾವುದೇ ನಷ್ಟವಾಗುವುದಿಲ್ಲ, ಎಲ್ಲ ರಾಜ್ಯಗಳಿಗೂ ಲಾಭವಾಗಲಿದೆ” ಎಂದು ಹೇಳಿದರು.
ದಕ್ಷಿಣ ರಾಜ್ಯಗಳ ವಿರುದ್ಧ ಅನ್ಯಾಯವಾಗುತ್ತದೆ ಎಂಬುದು ಕೇವಲ ರಾಜಕೀಯವಾಗಿ ಸೃಷ್ಟಿಸಿರುವ ಭೀತಿಯಷ್ಟೇ ಎಂದೂ ತಿಳಿಸಿದರು.
2010ರಲ್ಲಿ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸದೇ ಕಾಲಹರಣ ಮಾಡಿತ್ತು ಎಂದು ಹೇಳಿದ ಠಾಕೂರ್, ನಂತರ 2023ರಲ್ಲಿ ಮಸೂದೆ ಅಂಗೀಕೃತವಾದರೂ ಅದರ ಜಾರಿಗೆ ಅಡ್ಡಿಯಾಗಿದ್ದ ಅಂಶಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
2026ರಲ್ಲಿ ತರಲಾದ ತಿದ್ದುಪಡಿ ಮೂಲಕ ಮೀಸಲಾತಿ ಜಾರಿಗೆ ಮಾರ್ಗ ಸುಗಮಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದರು.
ಆದರೆ, ಇದೇ ತಿದ್ದುಪಡಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ವಿಳಂಬ ವಿಚಾರವನ್ನು ಪ್ರಸ್ತಾಪಿಸಿ ಜಾರಿಗೆ ವಿರೋಧಿಸುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಇನ್ನೊಂದೆಡೆ, ಬಿಜೆಪಿ ಸಂಸದ ತೇಜಸ್ವಿ ಕೂಡ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, “ಮಹಿಳಾ ಮೀಸಲಾತಿ ಜಾರಿಗೆ ಬಂದರೆ ಪ್ರಧಾನಿ ಮೋದಿಯವರಿಗೆ ರಾಜಕೀಯ ಲಾಭವಾಗುತ್ತದೆ ಎಂಬ ಭಯದಿಂದ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ಆದಾಯ ಮತ್ತು ಜಿಡಿಪಿ ಹೊಂದಿರುವವರಿಗೆ ಹೆಚ್ಚಿನ ಸ್ಥಾನಗಳು ಮತ್ತು ಮತಗಳನ್ನು ನೀಡಿದರೆ, ಮುಖೇಶ್ ಅಂಬಾನಿ ಪ್ರಧಾನಿಯಾಗಬೇಕಾಗುತ್ತದೆ. ನಂತರ ಚುನಾವಣಾ ಆಯೋಗದ ಬದಲು ಹಣಕಾಸು ಸಚಿವಾಲಯವು ಮತಗಳನ್ನು ನಿರ್ಧರಿಸಬೇಕಾಗುತ್ತದೆ" ಎಂದು ಲೇವಡಿ ಮಾಡಿದ್ದಾರೆ.
Advertisement