

ಬೆಂಗಳೂರು: ಧರ್ಮಗುರುಗಳ ಜೊತೆ ಶುಕ್ರವಾರ ನಮಾಜ್ ಬಳಿಕ ಮಾತನಾಡಿ, ಗೊಂದಲಗಳನ್ನು ಬಗೆಹರಿಸುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಯಾರೂ ಗುರಿ ಮಾಡಿಲ್ಲ. ನಾನೊಬ್ಬನೇನಾ ಮುಸ್ಲಿಂ ನಾಯಕ ಇರೋದಾ? ನಾನು ನಾಯಕನೇ ಅಲ್ಲ, ನಾನೊಬ್ಬ ಜನಸೇವಕ. ಪಕ್ಷದಲ್ಲಿ ಆರೋಪ ಮಾಡಿದವರು ಯಾರೂ ನನ್ನ ಹೆಸರು ಹೇಳಿಲ್ಲ. ಧರ್ಮಗುರುಗಳು ಹೇಳಿದ್ದನ್ನು ನೀವು ಅವರ ಬಳಿಯೇ ಕೇಳಬೇಕು. ಯಾರೂ ನನ್ನ ಹೆಸರನ್ನು ಹೇಳಲಿಲ್ಲ ಎಂದರು.
ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ಜಮೀರ್ ಕೂಡ ಪಕ್ಷ ಕ್ಕಿಂತ ದೊಡ್ಡವನಲ್ಲ. ಪಕ್ಷ ವಿರೋಧಿ ಕೆಲಸ ನಾನು ಮಾಡಿದರೂ ಶಿಸ್ತು ಕ್ರಮ ಆಗಬೇಕು. ಆದರೆ, ಅದಕ್ಕೊಂದು ರೀತಿ, ನೀತಿ ಇದೆಯಲ್ಲವೇ ಎಂದು ಜಮೀರ್ ಪ್ರಶ್ನಿಸಿದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಮೊದಲು ನೋಟಿಸ್ ನೀಡಬೇಕು. ಆಮೇಲೆ ಕ್ರಮ ಕೈಗೊಳ್ಳಬೇಕು ಎಂದರು. ಆ ಮೂಲಕ, ನಸೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ವಿರುದ್ಧದ ಕ್ರಮಕ್ಕೆ ಜಮೀರ್ ಅಸಮಾಧಾನ ವ್ಯಕ್ತಪಡಿಸಿದರು.
ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ಸಲೀಂಅಹಮದ್ ಕೂಡ ಕರೆ ಮಾಡಿ ಮಾತಾಡಿ ದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಕೊಟ್ಟಿಲ್ಲ ಎಂದು ಸಮುದಾಯಕ್ಕೆ ಬೇಸರ ಆಗಿರುವುದು ನಿಜ. ಧರ್ಮಗುರುಗಳಿಗೂ ಅಸಮಾಧಾನ ಆಗಿದೆ ಎಂದರು. ಅದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವ ಭರವಸೆ ನೀಡಲಾಗಿದೆ ಎಂದರು.
Advertisement