

ಕುಮಟಾ: 2024ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮೂರನೇ ಬಾರಿಗೆ ಟಿಕೆಟ್ ಸಿಗದೇ ಇದ್ದಾಗ ಡಿ.ಕೆ. ಶಿವಕುಮಾರ್ ಅವರು ಕುಣಿಗಲ್ ಶಾಸಕ ರಂಗನಾಥ್ ಅವರ ಮೊಬೈಲ್ ನಿಂದ ಕರೆ ಮಾಡಿ ಕಾಂಗ್ರೆಸ್ಗೆ ಬಂದುಬಿಡು, ನಿನಗೆ ಟಿಕೆಟ್ ಕೊಡುತ್ತೇವೆ ಎಂದರು.
ನಮ್ಮಪ್ಪನೇ ಆರ್ ಎಸ್ ಎಸ್ , ನಮಗೂ ನಿಮಗೂ ಸಿದ್ಧಾಂತ ಆಗಿಬರಲ್ಲ, ಆಗಲ್ಲ ಎಂದು ತಿರಸ್ಕರಿಸಿದ್ದೆ. 5 ವರ್ಷ ಬಿಟ್ಮೇಲೆ ವಾಪಾಸ್ ಹೋಗು ಬೇಕಾದರೆ, ಆದರೆ ಈಗ ಸರ್ವೈವಲ್ ಮುಖ್ಯ. ಇದಕ್ಕೆ ಒಪ್ಪದೇ ತಿರಸ್ಕರಿಸಿದ್ದೇನೆ, ನಂತರ 4 ಮಂದಿ ಕಾಂಗ್ರೆಸ್ ಶಾಸಕರು ಕೂಡ ನನ್ನ ಬೆನ್ನತ್ತಿದ್ದರು, ಆದರೆ ನಾನು ಯಾರ ಮಾತಿಗೂ ಪ್ರಭಾವಿತನಾಗದೆ ಬಿಜೆಪಿಯಲ್ಲಿಯೇ ಮುಂದುವರಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರ ಮುಂದೆ ಬರಲ್ಲ ಎಂದು ಹೇಳಲು ಸರಿ ಆಗಲಿಲ್ಲ, ಆದರೆ ನನ್ನ ಬರವಣಿಗೆ, ಕೆಲಸ ನಂಬಿ ಬಂದ ಲಕ್ಷಾಂತರ ಯುವಕರು ನನ್ನ ಬೆನ್ನ ಹಿಂದೆ ಇದ್ದಾರೆ, ನನ್ನ ಬಗ್ಗೆ ಬೇರೆ ರೀತಿ ಯೋಚನೆ ಮಾಡಿದ್ದಾರೆ, ನನ್ನನ್ನು ಕಾಂಗ್ರೆಸ್ ನಲ್ಲಿ ಗೌರವಯುತವಾಗಿ ಕರೆದುಕೊಳ್ಳುತ್ತಿದ್ದರು ಎಂದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2024ರಲ್ಲಿ ಕಾಂಗ್ರೆಸ್ ನಿಂದ ನಿಲ್ಲುತ್ತಿದ್ದರೆ ನಾನೇ ಗೆಲ್ಲುತ್ತಿದ್ದೆ, ಏಕೆಂದರೆ ನನಗೆ ಜನರ ಬೆಂಬಲ ಇತ್ತು, ಕ್ಷೇತ್ರಕ್ಕೆ ಅಷ್ಟು ಕೆಲಸ ಮಾಡಿದ್ದೆ, ಜನಕೈಹಿಡಿಯುತ್ತಿದ್ದರು ಎಂದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ವಿಶ್ವಾಸ ಗಳಿಸಿ ವಿಧಾನಸೌಧ ಪ್ರವೇಶ ಮಾಡುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ತಾನು ಬಡತನದಿಂದ ಮೇಲೆ ಬಂದವನು. ಹೊಟೇಲ್ ಗೆ ಹಾಲು ಹಾಕುತ್ತಿದ್ದ ಬಾಲಕನಾಗಿದ್ದ ನಾನು ಇಂದು ಪತ್ರಕರ್ತನಾಗಿ, ರಾಜಕೀಯದಲ್ಲೂ ಗುರುತಿಸಿಕೊಂಡಿದ್ದೇನೆ, ಸಾಮಾನ್ಯ ಯುವಕನಾಗಿದ್ದ ನಾನು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಬಡ, ಸಾಮಾನ್ಯ ಹುಡುಗರು ಮುಂದೆ ಬರಬಹುದು ಎಂದರು.
Advertisement