'ನಾನು ಕಾಂಗ್ರೆಸ್ಸಿಗ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ’: ಸಚಿವ ಸ್ಥಾನ ಕೈತಪ್ಪಿಕ್ಕೆ T B ಜಯಚಂದ್ರ ಆಕ್ರೋಶ, ಹಲವು ನಾಯಕರ ಅಸಮಾಧಾನ

ಜಯಚಂದ್ರ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಿರಿಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣ (ಮೊಳಕಾಲ್ಮೂರು) ಹಾಗೂ ಸಿ. ಎಸ್. ನಾಡಗೌಡ (ಮುದ್ದೇಬಿಹಾಳ) ಭಾಗವಹಿಸಿದ್ದರು.
T B Jayachandra
ಟಿ ಬಿ ಜಯಚಂದ್ರ
Updated on

ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ನಿರಾಕರಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಹಿರಿಯ ಕಾಂಗ್ರೆಸ್ ಶಾಸಕರು ಮಾಜಿ ಸಚಿವ ಟಿ. ಬಿ. ಜಯಚಂದ್ರ ಅವರ ನಿವಾಸದಲ್ಲಿ ಸಭೆ ಸೇರಿ, ಪಕ್ಷದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ ಅವರು, ಅಗತ್ಯವಿದ್ದರೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನೂ ನೀಡಿದರು.

ಸಚಿವ ಸಂಪುಟ ವಿಸ್ತರಣೆ ನಡೆದ ರೀತಿಯನ್ನು ನೋಡಿದರೆ, ನಾನು ಕಾಂಗ್ರೆಸ್ ಪಕ್ಷದವನಾಗಿರುವುದಕ್ಕೇ ನಾಚಿಕೆಯಾಗುತ್ತಿದೆ. ನನ್ನ ಕ್ಷೇತ್ರದ ಜನರು ನನಗೆ ರಾಜೀನಾಮೆ ನೀಡುವಂತೆ ಕೇಳಿದ್ದಾರೆ ಎಂದು ಏಳು ಬಾರಿ ಶಾಸಕರಾಗಿರುವ ಟಿ. ಬಿ. ಜಯಚಂದ್ರ ಹೇಳಿದರು.

ಜಯಚಂದ್ರ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಿರಿಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣ (ಮೊಳಕಾಲ್ಮೂರು) ಹಾಗೂ ಸಿ. ಎಸ್. ನಾಡಗೌಡ (ಮುದ್ದೇಬಿಹಾಳ) ಭಾಗವಹಿಸಿದ್ದರು.

T B Jayachandra
ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆ ನೀಡಬೇಡಿ: ಪಕ್ಷ ನಿಮ್ಮ ಸೇವೆ ಮರೆಯಲ್ಲ; ಅಸಮಾಧಾನಿತ ಶಾಸಕರಿಗೆ ಬಿ.ಕೆ ಹರಿಪ್ರಸಾದ್ ಮನವಿ

ಈ ಸಚಿವರ ಪಟ್ಟಿಯನ್ನು ನೋಡಿದಾಗ ಏನು ಹೇಳಬೇಕು? ಇವರನ್ನು ನಮ್ಮ ಸಚಿವರು ಎಂದು ಹೇಳಲು ಸಾಧ್ಯವೇ? ನಾವು ಶಾಸಕರು ಪರಸ್ಪರ ಚರ್ಚಿಸುತ್ತಿದ್ದೇವೆ. ಈಗ ಯಾವುದೋ ಒಂದು ನಿರ್ಧಾರಕ್ಕೆ ಬರಲೇಬೇಕಾಗಿದೆ ಎಂದು ಜಯಚಂದ್ರ ಹೇಳಿದರು.

ಆರು ಬಾರಿ ಶಾಸಕರಾಗಿರುವ ಸಿ. ಎಸ್. ನಾಡಗೌಡ ಅವರು, ತಮ್ಮ ಸಚಿವ ಸ್ಥಾನಕ್ಕೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿದರು. ನಾಡಗೌಡ ಹಾಗೂ ಎಂ. ಬಿ. ಪಾಟೀಲ ಇಬ್ಬರೂ ವಿಜಯಪುರ ಜಿಲ್ಲೆಯವರಾಗಿದ್ದು, ಪಾಟೀಲ ಬಬಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಮತ್ತು ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಎಂ. ಬಿ. ಪಾಟೀಲರೇ ಕಾರಣ ಎಂದು ನಾಡಗೌಡ ಹೇಳಿದರು.

T B Jayachandra
ನೂತನ ಸಚಿವರ ಪಟ್ಟಿ ಪ್ರಕಟ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ!

ನಿನ್ನೆ ನಾಡಗೌಡ ಅವರು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದರು. ಸಚಿವ ಸ್ಥಾನಗಳ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಪಷ್ಟ ಮಾನದಂಡ ಇಲ್ಲ ಎಂದು ನಾಡಗೌಡ ಮತ್ತು ಗೋಪಾಲಕೃಷ್ಣ ಇಬ್ಬರೂ ಟೀಕಿಸಿದರು.

ಪಕ್ಷದ ಮೇಲಿನ ನಿಷ್ಠೆ, ನಡವಳಿಕೆ, ವಹಿಸಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿರುವುದು ಮುಂತಾದ ಅಂಶಗಳ ಆಧಾರದ ಮೇಲೆ ಸಾಮರ್ಥ್ಯವನ್ನು ನಿರ್ಧರಿಸಬೇಕು. ಇವುಗಳನ್ನು ಕಡೆಗಣಿಸಿದಾಗ ಸಹಜವಾಗಿಯೇ ನೋವು ಉಂಟಾಗುತ್ತದೆ ಎಂದು ನಾಡಗೌಡ ಹೇಳಿದರು.

ಈಗ ಯಾವುದೇ ಮಾನದಂಡಗಳೇ ಇಲ್ಲ. ಹಿಂದೆ ಮಾನದಂಡಗಳೂ, ನೈತಿಕತೆಯೂ ಇತ್ತು. ಆದರೆ ಈಗ ಎಲ್ಲವೂ ವೈಯಕ್ತಿಕ ನಿರ್ಧಾರಗಳ ಆಧಾರದಲ್ಲೇ ನಡೆಯುತ್ತಿದೆ ಎಂದು ಏಳು ಬಾರಿ ಶಾಸಕರಾಗಿರುವ ಗೋಪಾಲಕೃಷ್ಣ ಹೇಳಿದರು.

ನನಗೆ ಮತ ಹಾಕಿದ ಜನರ ಎದುರು ನಾನು ಹೋಗಬೇಕಿದೆ. ಅಂತಿಮ ಅಧಿಕಾರ ಅವರದ್ದೇ. ಅವರು ಏನು ತೀರ್ಮಾನಿಸುತ್ತಾರೋ ಅದನ್ನೇ ನಾನು ಪಾಲಿಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com