

ಬೆಂಗಳೂರು: ಬಿಡದಿ ಟೌನ್ಶಿಪ್ ಜಟಾಪಟಿ ಮತ್ತಷ್ಟು ತೀವ್ರಗೊಂಡಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಯೋಜನೆ ವಿರೋಧಿಸಿ ಭಾನುವಾರದಿಂದ ಪಾದಯಾತ್ರೆ ಸಹ ನಡೆಸುತ್ತಿವೆ.
ಈ ಮಧ್ಯೆ ಆಡಳಿತರೂಢ ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ಅವರು ಮಾತನಾಡುತ್ತಿರುವ ವಿಡಿಯೋವೊಂದು ಬಿಡುಗಡೆ ಮಾಡಿದ್ದು, ಪಾದಯಾತ್ರೆಯ ಬಂಡವಾಳ ಈಹ ಬಯಲಾಗಿದೆ ಎಂದು ತಿರುಗೇಟು ನೀಡಿದೆ.
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರೂ ಪರಿಹಾರಕ್ಕೆ ಒಪ್ಪಿದ್ದಾರೆ. ಈ ಯೋಜನೆ ವಿರುದ್ಧದ ಪಾದಯಾತ್ರೆಗೆ ಬಿಜೆಪಿ ನೈತಿಕ ಬೆಂಬಲ ಅಷ್ಟೇ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಮಧು ಬಂಗಾರಪ್ಪ ಅವರಿಗೆಹೇಳಿದ್ದಾರೆ ಎಂದು ಕಾಂಗ್ರೆಸ್ ಎಕ್ಸ್ ನಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದೆ. ಇದರೊಂದಿಗೆ ವಿಜಯೇಂದ್ರ ಅವರು ದೋಸ್ತಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುಳಿವು ನೀಡಿದ್ದಾರೆ.
ಹೀಗಿರುವಾಗ ಪಾಪದ ಪ್ರಾಯಶ್ಚಿತ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ? ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ನೆಲೆಗಾಗಿಯೋ? ಕುಮಾರಸ್ವಾಮಿ ಅವರ ಬೇನಾಮಿ ಆಸ್ತಿ ರಕ್ಷಣೆಗೋ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ವಿಡಿಯೋದಲ್ಲಿ ಏನಿದೆ?
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅತಿವೃಷ್ಠಿ ಹಾಗೂ ಅನಾವೃಷ್ಟಿ ಪರಿಶೀಲನಾ ಸಭೆಗೂ ಮುನ್ನ ಸಚಿವ ಮಧು ಬಂಗಾರಪ್ಪ ಹಾಗೂ ವಿಜಯೇಂದ್ರ ನಡುವೆ ನಡೆದ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಿಡದಿ ಟೌನ್ ಶಿಪ್ ಹೋರಾಟದ ವಿಚಾರವಾಗಿ ಉಭಯ ನಾಯಕರು ಪಿಸು ದನಿಯಲ್ಲಿ ಮಾತುಕತೆ ನಡೆಸಿದ್ದಾರೆ. ಹೋರಾಟ ಗಂಭೀರ ಸ್ವರೂಪದಲ್ಲಿಲ್ಲ ಎಂಬ ವಿಚಾರವನ್ನು ಮಧು ಬಂಗಾರಪ್ಪ ಅವರಲ್ಲಿ ವಿಜಯೇಂದ್ರ ಹಂಚಿಕೊಂಡಿರುವುದು ಬಿಡದಿ ರೈತರ ಹೋರಾಟದ ತೀವ್ರತೆಯನ್ನು ಕುಗ್ಗಿಸುವಂತೆ ಮಾಡಿದೆ. ಅಲ್ಲದೆ, ಬಿಜೆಪಿ ಪಕ್ಷವಾಗಿ ಬಿಡದಿ ಹೋರಾಟದ ಬಗ್ಗೆ ಯಾವ ರೀತಿಯ ನಿಲುವನ್ನು ಹೊಂದಿದೆ ಎಂಬ ಬಗ್ಗೆಯೂ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ವಿಡಿಯೋದಲ್ಲಿ ಮಧು ಬಂಗಾರಪ್ಪ ಅವರು ಇಂದು ನಿಮ್ಮದೇನೋ ಇರಬೇಕಲ್ವಾ? ಅದೇನೋ ಪಾದಯಾತ್ರೆ ಇಟ್ಟುಕೊಂಡಿದ್ದೀರಿ, ಮಾಡುತ್ತಾ ಇಲ್ಲವಾ? ಎಂದು ವಿಜಯೇಂದ್ರ ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ವಿಜಯೇಂದ್ರ ಅವರು, ಮಾಡುತ್ತಾ ಇದ್ದಾರೆ. ಅದು ಸಿಂಬಾಲಿಕ್ ಮಾತ್ರ. ಯರ್ಯಾರು ಹೋರಾಟಕ್ಕೆ ಬಂದಿದ್ದಾರೋ ಅವರೆಲ್ಲಾ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ.
ನಂತರ ಎಷ್ಟು ಪರ್ಸೆಂಟ್ ತೆಗೆದುಕೊಂಡಿದ್ದಾರೆ? ಎಂದು ಮಧು ಬಂಗಾರಪ್ಪ ಅವರು ಪ್ರಶ್ನಿಸುತ್ತಾರೆ, ನಾನು ಅದನ್ನು ಫಾಲೋ ಮಾಡಿಲ್ಲ. ಪರಿಹಾರ ಎಷ್ಟು ಪರ್ಸೆಂಟ್ ಪಡೆದುಕೊಂಡಿದ್ದಾರೆ ಗೊತ್ತಿಲ್ಲ. ಆದರೆ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ.