

ಮೈಸೂರು: ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆಯೋ ಅಷ್ಟೂ ಕಡೆ ನಾನೇ ಅಭ್ಯರ್ಥಿ ಇದ್ದಂತೆ. ಚಾಮುಂಡೇಶ್ವರಿ ಅಭ್ಯರ್ಥಿ ಯಾರೆಂಬುದನ್ನು ಮುಂದೆ ತೀರ್ಮಾನಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, 2028ರ ವಿಧಾನಸಭೆ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ನನ್ನ ಹಿಂದೆ, ಮುಂದೆಯೇ ಇರಬಹುದು. ನಮ್ಮಲ್ಲಿ ಅನೇಕರು ಸಮರ್ಥರಿದ್ದಾರೆ. ಯಾರೇ ಸ್ಪರ್ಧಿಸಿದರೂ ನನಗಾಗಿ ಜನರು ಗೆಲ್ಲಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿ,ಟಿ ದೇವೇಗೌಡ ಪುತ್ರ ಹರೀಶ್ ಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಆ ಮೂಲಕ ಅಪ್ಪನ ವಿರುದ್ಧವೇ ಮಗನನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜನತಾ ಪರಿವಾರದ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಪಕ್ಷ ಸೇರಲು ಅನೇಕರು ಮುಂದೆ ಬರುತ್ತಿದ್ದಾರೆ. ಕಾಂಗ್ರೆಸ್ನವರೂ ಸಂಪರ್ಕದಲ್ಲಿದ್ದಾರೆ. ಅನೇಕರನ್ನು ಕರೆತರುವ ಚಿಂತನೆ ಇದೆ. ಆದರೆ, ಎಲ್ಲರನ್ನೂ ಕರೆದುಕೊಳ್ಳುವುದಿಲ್ಲ. ಜೆಡಿಎಸ್ ಮುಗಿಸುತ್ತೇವೆ ಎಂದವರಿಗೆ ನಾವೂ ಉತ್ತರ ಕೊಡಬೇಕಲ್ಲವೇ? ಎಂದು ಕೇಳಿದರು.
ಪಕ್ಷವನ್ನು ಬಲವರ್ಧನೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಪಕ್ಷ ಸೇರಲು ಅನೇಕರು ಮುಂದೆ ಬರುತ್ತಿದ್ದಾರೆ. ಒಳ್ಳೆಯ ನಾಯಕರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಅದೇ ರೀತಿ ಜನತಾ ಪರಿವಾರದ ಕೆಲ ನಾಯಕರು ಕೂಡ ವಾಪಸ್ ಬರುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಯಾರೇ ಬಂದರೂ ಪಕ್ಷಕ್ಕೆ ಒಳ್ಳೆಯದು ಆಗುವುದಿದ್ದರೆ ಸೇರಿಸಿಕೊಳ್ಳುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಗಟ್ಟಿ ಮುಟ್ಟಾದ ಸರ್ಕಾರ ತರುವ ಅವಶ್ಯಕತೆಯಿದೆ ಎಂದಿದ್ದಾರೆ ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಕಚೇರಿ ಸಮೇತ ಜೆಡಿಎಸ್ ಮುಗಿಸುತ್ತೇನೆ, ಜೆಡಿಎಸ್ 12 ಶಾಸಕರನ್ನು ಕರೆದುಕೊಂಡು ಹೋಗ್ತೀನಿ, ಜೆಡಿಎಸ್ ನಿರ್ನಾಮ ಮಾಡುತ್ತೇನೆ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ನನಗೆನು ವಿಷಯ ತಿಳಿಯೋದಿಲ್ವಾ ಎಂದು ಪ್ರಶ್ನಿಸಿದ್ದಾರೆ. ಮಂದಿನ ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರ ನನ್ನ ಟಾರ್ಗೆಟ್ ಎಂದು ಸಿಎಂ ಹೇಳಿದ್ದಾರೆ ಎಂದರು.
ಈ ದೇಶಕ್ಕೆ ಗಂಡಾಂತರ ಇರುವುದು ಕಾಂಗ್ರೆಸ್ನಿಂದಲೇ ಹೊರತು, ಆರ್ಎಸ್ಎಸ್ನಿಂದಲ್ಲ. ನಾನೂ ಹಿಂದೆ ಆ ಸಂಘಟನೆಯನ್ನು ಟೀಕಿಸಿದದ್ದು ನಿಜ. ಈಗ ಆರ್ಎಸ್ಎಸ್ ಎಂದರೇನು ಎಂಬುದು ಅರ್ಥವಾಗಿದೆ. ಕಾಂಗ್ರೆಸ್ನವರ ಸಿದ್ಧಾಂತಗಳು ನನಗೆ ಗೊತ್ತಿಲ್ಲವೇ? ಎಂದು ಕೇಳಿದರು.
ವರುಣ ಕ್ಷೇತ್ರದಲ್ಲಿ ಕೆಐಎಡಿಬಿ 169 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗೆ ಉದ್ದೇಶಕ್ಕೆ ವಶಪಡಿಸಿಕೊಳ್ಳಲು ಹೊರಟಿದೆ. ಅದು ಫಲವತ್ತಾದ ಕೃಷಿ ಭೂಮಿಯಾಗಿದ್ದಾರೆ ಯಾವುದೇ ಕಾರಣಕ್ಕೂ ಸ್ವಾಧೀನಕ್ಕೆ ಬಿಡುವುದಿಲ್ಲ. ಸ್ಥಳಕ್ಕೆ ನಾನೇ ಹೋಗಿ ರೈತರಿಗೆ ಬೆಂಬಲ ಕೊಡುತ್ತೇನೆ ಎಂದರು.