

ಬೆಂಗಳೂರು: ಮುಂದೆ ಏನಾಗುತ್ತದೆ ಎಂದು ನಾನು ಚರ್ಚಿಸುವುದಿಲ್ಲ, ಏನು ಮಾಡಬೇಕು ಎನ್ನುವುದನ್ನು ಚಿಂತಿಸುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾರ್ಮಿಕವಾಗಿ ನುಡಿದಿದ್ದು, ಈ ಹೇಳಿಕೆ ಕುತೂಹಲವನ್ನು ಸೃಷ್ಟಿಸಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಶ್ವರ ಶ್ರೀ ಕಾಡುಸಿದ್ದೇಶ್ವರ ಸಂಸ್ಥಾನಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದರು.
ಈ ವೇಳೆ ವೀರ ಗಂಗಾಧರ ಅಜ್ಜಯ್ಯನ ಗದ್ದುಗೆಗೆ ನಮಸ್ಕರಿಸಿ, ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದವನ್ನು ಪಡೆದರು. ಬಳಿಕ ಅಜ್ಜಯ್ಯನ ಜಾತ್ರಾ ಮಹೋತ್ಸವ – 2026ರ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಡಿಸಿಎಂ ಆಗಿ ಅಲ್ಲ, ಮಠದ ಒಬ್ಬ ಭಕ್ತನಾಗಿ, ಶ್ರೀಗಳ ಶಿಷ್ಯನಾಗಿ, ಅಜ್ಜನ ಒಬ್ಬ ಅನುಯಾಯಿಯಾಗಿ ಸೇವೆ ಮಾಡುತ್ತಿದ್ದೇನೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ವೀರ ಗಂಗಾಧರ ಅಜ್ಜಯ್ಯನ ವಾಣಿಯಾಗಿದೆ.
ಅಜ್ಜಯ್ಯನ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಈ ಪವಿತ್ರವಾದ ನಮ್ಮ ಅಜ್ಜಯ್ಯನ ಜಾತ್ರೆಯ ಧರ್ಮಸಭೆಯಲ್ಲಿ ಪಾಲ್ಗೊಂಡಿರುವುದು ನಮ್ಮೆಲ್ಲರ ಭಾಗ್ಯ. 233ನೇ ವರ್ಷದ ವಾರ್ಷಿಕೋತ್ಸವ ಹಾಗೂ 18ನೇ ವರ್ಷದ ಪುಣ್ಯ ಆರಾಧನೆ ನಡೆಯುತ್ತಿದ್ದು, ಈ ವೇಳೆ ಗಂಗಾಧರ ಅಜ್ಜಯ್ಯನ ಪಾದಗಳಿಗೆ ನನ್ನ ಕೋಟಿ ನಮಸ್ಕಾರಗಳು ಎಂದು ಹೇಳಿದರು.
ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ ಎಂಬ ಮಾತಿದೆ. ನಾನು ಡಿಸಿಎಂ ಆಗಿ ಅಲ್ಲ, ಈ ಮಠದ ಒಬ್ಬ ಭಕ್ತನಾಗಿ, ಶ್ರೀಗಳ ಶಿಷ್ಯನಾಗಿ, ಅಜ್ಜನ ಒಬ್ಬ ಅನುಯಾಯಿಯಾಗಿ ಸೇವೆ ಮಾಡುತ್ತಿದ್ದೇನೆ. ನನಗೂ ಅಜ್ಜಯ್ಯನಿಗೂ ಇರುವ ಸಂಬಂಧ ಹಾಗೂ ನಂಬಿಕೆ ಎಲ್ಲರಿಗೂ ಗೊತ್ತಿದೆ. ಅವರ ಮಾರ್ಗದರ್ಶನ ಹಾಗೂ ಶಕ್ತಿಯಿಂದಲೇ ಇಲ್ಲಿಯವರೆಗೂ ಬೆಳೆದುಕೊಂಡು ಬಂದಿದ್ದೇವೆ. ಈ ಮಠವನ್ನು ಇನ್ನೂ ಎತ್ತರಕ್ಕೆ ಬೆಳೆಸಲು ನಾವೆಲ್ಲರೂ ಕೈಜೋಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದೆ ಏನಾಗುತ್ತದೆ ಎಂದು ನಾನು ಚರ್ಚಿಸುವುದಿಲ್ಲ, ಏನು ಮಾಡಬೇಕು ಎನ್ನುವುದನ್ನು ಚಿಂತಿಸುತ್ತಿದ್ದೇನೆ. ಮಹಾಶಿವರಾತ್ರಿಯ ನಂತರ ಎಲ್ಲವೂ ಶುಭವಾಗಲಿದೆ ಮತ್ತು ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಹೇಳಿದರು.
Advertisement