

ನವದೆಹಲಿ: ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಗುರುವಾರ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದೆಹಲಿಯ 10 ಜನ್ ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ನಾಯಕಿಯನ್ನು ಭೇಟಿ ಮಾಡಿದ ಡಿ ಕೆ ಶಿವಕುಮಾರ್ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.
ನಂತರ ಸೋನಿಯಾ ಗಾಂಧಿ ನಿವಾಸದ ಹೊರಗೆ ಸೇರಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ‘‘ದೆಹಲಿಗೆ ಬಂದ ಮೇಲೆ ಎಲ್ಲಾ ವಿಚಾರ ಮಾತನಾಡಬೇಕು, ಅದನ್ನ ಮಾತನಾಡಿದ್ದೀನಿ. ಆದರೆ ಯಾರ್ಯಾರ ಹತ್ತಿರ ಏನೇನು ಮಾತನಾಡಿದೆ ಅಂತ ಬಹಿರಂಗವಾಗಿ ಹೇಳೋಕೆ ಆಗಲ್ಲ. ಒಳಗೆ ನಡೆದ ಚರ್ಚೆಯನ್ನು ಹೊರಗೆ ಹೇಳುವುದು ಸರಿಯಲ್ಲ’’
‘‘ನಾನು ಇಲ್ಲಿಗೆ ಬಂದಿರೋದು ರಾಜಕಾರಣ ಮಾಡೋಕೆ, ಸುಮ್ಮನೆ ಗಾಳಿ ಕುಡಿದು ಹೋಗೋದಿಕ್ಕೆ ಅಲ್ಲ. ವರಿಷ್ಠರ ಬಳಿ ಏನು ಮಾತನಾಡಬೇಕೋ ಅದನ್ನ ಮಾತನಾಡಿದ್ದೀನಿ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ’’ ಎನ್ನುವ ಮೂಲಕ ಕುರ್ಚಿ ಕದನದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.
ಅಸ್ಸಾಂ ಚುನಾವಣೆ ಚರ್ಚೆ
ಅಸ್ಸಾಂ ಚುನಾವಣೆಗಳ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ, ಏಕೆಂದರೆ ಆ ರಾಜ್ಯ ನಮಗೆ ತುಂಬಾ ಮಹತ್ವದ್ದಾಗಿದೆ. ಅಸ್ಸಾಂನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಅಲ್ಲಿನ ಜನರು ಹೊಸ ನಾಯಕತ್ವದೊಂದಿಗೆ ಹೊಸ ಸರ್ಕಾರವನ್ನು ಬಯಸುತ್ತಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯನ್ನು ನಾವು ಕಾಪಾಡಿರುವುದರಿಂದ ಅಸ್ಸಾಂನ ಜನರು ಕಾಂಗ್ರೆಸ್ಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ನಮಗೆ ಇದೆ. ಅಲ್ಲಿಗೆ ನಾವು ಈಗಾಗಲೇ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ ಎಂದರು.
ಡಿ ಕೆ ಶಿವಕುಮಾರ್ ಇಂದು ಆರಂಭದಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ.
ಡಿಕೆಶಿ ಪ್ರಸ್ತಾಪಕ್ಕೆ ಸೋನಿಯಾ ಮತ್ತು ರಾಹುಲ್ ಗಾಂಧಿ ಏನು ಉತ್ತರಿಸಿದ್ದಾರೆ? ಸಿಎಂ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನೆಯಾಗಿದೆಯಾ? ಸದ್ಯಕ್ಕೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದ್ದಾರಾ ಎಂಬುದು ಸದ್ಯದ ಕುತೂಹಲವಾಗಿದೆ.
Advertisement