

ಬೆಂಗಳೂರು: ಶೇ.40 ಕಮಿಷನ್ ದಂಧೆಯಿಂದ ಬೇಸತ್ತು ಜನ ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದರೂ, ಎಡಿಟ್ ಮಾಡಿದ ಫೋಟೋ ಹಿಡಿದು ಸುಳ್ಳು ಹರಡುವ ನೀಚತನ ಬಿಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಅವರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರೋಗ್ಯ ಇಲಾಖೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕಮಿಷನ್ ಮತ್ತು ಭ್ರಷ್ಟಾಚಾರ ಎಂಬುದು ಬಿಜೆಪಿಯ ಮೈಗಂಟಿದ ಚರ್ಮ ಅನ್ನೋದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ. ಶೇ.40 ಕಮಿಷನ್ ದಂಧೆಯಿಂದ ಬೇಸತ್ತು ಜನ ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದರೂ, ಎಡಿಟ್ ಮಾಡಿದ ಫೋಟೋ ಹಿಡಿದು ಸುಳ್ಳು ಹರಡುವ ನೀಚತನ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ..
ಆರೋಗ್ಯ ಇಲಾಖೆಯಲ್ಲಿ ನಾವು ಅತ್ಯಂತ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ, ಧೈರ್ಯವಿದ್ದರೆ ವಾಸ್ತವದ ಅಂಕಿಅಂಶಗಳನ್ನು ನೋಡಿ ಮಾತನಾಡಿ ಎಂದು ಸವಾಲು ಹಾಕಿದ್ದಾರೆ.
ಕೇಂದ್ರದ ನಿಮ್ಮದೇ ಮೋದಿ ಸರ್ಕಾರ NHM ಅನುದಾನ ತಡೆಹಿಡಿದಿದ್ದರೂ ರಾಜ್ಯದ ಬಡ ರೋಗಿಗಳಿಗೆ ತೊಂದರೆಯಾಗಬಾರದೆಂದು ನಮ್ಮ ಕಾಂಗ್ರೆಸ್ ಸರ್ಕಾರ ಈಗಾಗಲೇ ರೂ.30 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. ಇದಲ್ಲದೆ ರೂ.50 ಕೋಟಿ ಹಣವನ್ನು ಔಷಧಿ ಖರೀದಿಗೆ ಮೀಸಲಿಟ್ಟು, 496 ಅಗತ್ಯ ಔಷಧಿಗಳ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ. GeM ಪೋರ್ಟಲ್ ಮೂಲಕವೇ ಅತ್ಯಂತ ಪಾರದರ್ಶಕವಾಗಿ ಖರೀದಿ ನಡೆಯುತ್ತಿದೆ.
ರಾಜ್ಯದ ತೆರಿಗೆ ಪಾಲು, ಎನ್ಎಚ್ಎಂ ಸೇರಿದಂತೆ ಹೀಗೆ ಸಾಲು ಸಾಲು ಅನುದಾನ ಬಾಕಿಯಿದ್ದರೂ ಮೋದಿ ಮುಂಚೆ ಉಸಿರು ಬಿಡಲಾಗದೆ ಹೇಡಿಗಳಂತಿರುವ ಬಿಜೆಪಿ ಸಂಸದರು, ಸಚಿವರುಗಳು ಇನ್ನಾದರೂ ಮತಕೊಟ್ಟವರಿಗಾಗಿ ಮಾತಾಡಲಿ. ಸದಾ ಸುಳ್ಳಿನ ಕೊಚ್ಚೆಯಲ್ಲಿ ಬಿದ್ದು ಒದ್ದಾಡುವ ಬದಲು, ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತುವ ಧೈರ್ಯ ತೋರಿಸುವಿರಾ ನೋಡಿ? ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರೋಗ್ಯ ಇಲಾಖೆಗೆ ಪೆಂಡಭೂತ ಹಿಡಿದಿದೆ ಎಂದು ಆರೋಪಿಸಿತ್ತು.
ಸರ್ಕಾರಿ ಆಸ್ಪತ್ರೆಯ ಬಾಗಿಲಲ್ಲಿ 'ನೋ ಸ್ಟಾಕ್' ಬೋರ್ಡ್ ಹಿಡಿದು ನಿಂತಿರುವ ಆರೋಗ್ಯ ಸಚಿವರೇ, ಬಡ ರೋಗಿಗಳಿಗೆ ಖಾಸಗಿ ಮೆಡಿಕಲ್ ಶಾಪ್ಗಳತ್ತ ಕೈ ತೋರಿಸಿ ಎಷ್ಟು ಕಮಿಷನ್ ಪಡೆಯುತ್ತಿದ್ದೀರಿ? ಸರ್ಕಾರಿ ವ್ಯವಸ್ಥೆಯನ್ನು ಹದಗೆಡಿಸಿ, ಖಾಸಗಿಯವರಿಗೆ ಲಾಭ ಮಾಡಿಕೊಡುವುದು ಯಾರ ಹಿತಾಸಕ್ತಿಗಾಗಿ? ಎದಂದು ಪ್ರಶ್ನೆ ಮಾಡಿತ್ತು.
Advertisement