

ಬೆಂಗಳೂರು: ರಾಜ್ಯದಲ್ಲಿ ನೋಂದಾಯಿತ 26,334 ಅನಾಥ ಮಕ್ಕಳಿಗೆ ನೀಡಬೇಕಾದ ಸುಮಾರು 75 ಕೋಟಿ ರೂ. ಅನುದಾನವನ್ನು ಸರ್ಕಾರ ಏಳು ತಿಂಗಳಿಂದ ಬಿಡುಗಡೆ ಮಾಡಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಬುಧವಾರ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಅನಾಥರಾದ ಮಕ್ಕಳನ್ನು ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ. ಪ್ರತಿ ಮಗುವಿಗೆ ತಿಂಗಳಿಗೆ ಸುಮಾರು ರೂ.4,000 ಸಹಾಯಧನ ನೀಡಲಾಗುತ್ತಿದೆಯಾದರೂ, ಅನುದಾನ ಬಿಡುಗಡೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯ ಎಂದು ಕಿಡಿಕಾರಿದರು.
ಶಾಸಕರು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗುತ್ತಿದ್ದು, ಬಡ ಅನಾಥ ಮಕ್ಕಳನ್ನು ಸರ್ಕಾರ ಕಡೆಗಣಿಸುತ್ತಿದೆ. ಏಳು ತಿಂಗಳಿನಿಂದ ಹಣ ಬಿಡುಗಡೆ ಆಗದಿರುವುದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಆರೋಪವನ್ನೂ ಪುನರುಚ್ಛರಿಸಿದ ಅವರು, ಹಿಂದಿನ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳಿಗೆ ಅನುದಾನ ನೀಡದೇ ಇದೀಗ ಹೊಸ ಬಜೆಟ್ಗೆ ತಯಾರಿ ನಡೆಸಲಾಗುತ್ತಿದೆ. ಕಾಂಗ್ರೆಸ್ ಒಳಗಿನ ಗೊಂದಲದಿಂದ ಆಡಳಿತ ಕುಸಿತವಾಗಿದೆ ಎಂದು ಟೀಕಿಸಿದರು.
ಕಳೆದ ಎರಡು ದಿನಗಳಿಂದ ಕಸ ವಿಲೇವಾರಿಯಾಗುತ್ತಿಲ್ಲ. ಈ ಪರಿಸ್ಥಿತಿ ಮುಂದುವರೆದರೆ ಬೆಂಗಳೂರು ಗಾರ್ಬೇಜ್ ಸಿಟಿಯಾಗಲಿದೆ. ನಗರದ ಮಿಟಗಾನಹಳ್ಳಿ, ಬೆಳ್ಳಳ್ಳಿ ಹಾಗೂ ದೊಡ್ಡಬಳ್ಳಾಪುರದ ಬೆಲ್ಲಹಳ್ಳಿಯ ಡಪಿಂಗ್ ಯಾರ್ಡ್ಗಳಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಕಸ ಟೆಂಡರ್ ಮಾಡಲು ಸರ್ಕಾರಕ್ಕೆ ಕಮಿಷನ್ ನೀಡಬೇಕಿದೆ. ಈ ಬಗ್ಗೆ ಗುತ್ತಿಗೆದಾರರು ಸಹ ಕಮಿಷನ್ ಸರ್ಕಾರದ ನಡೆಗೆ ಬೇಸತ್ತಿದ್ಧಾರೆ. ಸುಮಾರು 37 ಸಾವಿರ ಕೋಟಿ ಬರಬೇಕಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಜಾರಿಕೆ ಉತ್ತರ ಕೊಡುತ್ತಾರೆ.
ಸಚಿವರು ದೊಡ್ಡ ಪ್ಯಾಕೇಜ್ ಮಾಡಿ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ ನೀಡಿ ಕಮಿಶನ್ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಕಾಮಗಾರಿಗಳನ್ನು ತೆಲಂಗಾಣಕ್ಕೆ ನೀಡಿದ್ದಾರೆ. ಇದರಿಂದಾಗಿ ಸ್ಥಳೀಯ ಗುತ್ತಿಗೆದಾರರು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ.
ಕಸ ವಿಲೇವಾರಿಯ ಟೆಂಡರ್ ಪಡೆಯಲು ಶೇ.7ರಷ್ಟು, ಬಿಲ್ ಪಡೆಯಲು ಶೇ.7ರಷ್ಟು, ಎನ್ಒಸಿಗೆ ಶೇ.7ರಷ್ಟು ಕಮಿಶನ್ ಕೊಡಬೇಕಿದೆ. ಒಟ್ಟು ಶೇ.21ರಷ್ಟು ಕಮಿಶನ್ ನೀಡಿದರೆ ಮಾತ್ರ ಕೆಲಸ ಸಾಧ್ಯವಾಗುತ್ತದೆ. ಬೆಂಗಳೂರಿನ ಕಸದಲ್ಲಿ ಆಂಧ್ರದ ಮಾಫಿಯಾ ಇದೆ. ಜೊತೆಗೆ ಕಾಂಗ್ರೆಸ್ ಸರ್ಕಾರದ ಮಾಫಿಯಾ ಇದೆ. ನಮಗೆ ಕಸದ ಟೆಂಡರ್ ಸಿಕ್ಕಿಲ್ಲ ಎಂದು ಗುತ್ತಿಗೆದಾರ ಸಂಘ ಹೇಳಿದೆ ಎಂದು ಅವರು ವಿವರಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕುರ್ಚಿ ಕಚ್ಚಾಟವನ್ನು ನಾಯಿಗಳ ಕಿತ್ತಾಟ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ನಿಯತ್ತಿನ ನಾಯಿಗಳು ಎಂದಿದ್ದಾರೆ. ಅಂದಮೇಲೆ ಬೀದಿ ನಾಯಿಗಳು ಯಾರು ಎಂದು ಉತ್ತರ ಕೊಡಬೇಕಿದೆ. ಕಾಂಗ್ರೆಸ್ನಲ್ಲಿ ಬೀದಿ ನಾಯಿ ಮತ್ತು ನಿಯತ್ತಿನ ನಾಯಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಗೆ ಗೊತ್ತಿಲ್ಲ ಎನ್ನುತ್ತಾರೆ ಎಂದು ಕಾಂಗ್ರೆಸ್ ಬೆಳವಣಿಗೆ ಕುರಿತು ಲೇವಡಿ ಮಾಡಿದರು.
Advertisement