

ದಾವೋಸ್: ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಕಾದಾಟ ಮುಂದುವರೆದಿದ್ದು, ತಮ್ಮ ನಾಯಕರು ನನ್ನನ್ನು ನಿರಾಸೆಗೊಳಿಸುವುದಿಲ್ಲ ಎಂಬ ಭರವಸೆಯಲ್ಲಿರುವುದಾಗಿ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಶಿವಕುಮಾರ್ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಎನ್ಡಿಟಿವಿಯ ಸಿಇಒ ಮತ್ತು ಪ್ರಧಾನ ಸಂಪಾದಕ ರಾಹುಲ್ ಕನ್ವಾಲ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ, ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಜಗಳದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ್ದಾರೆ.
'ನನ್ನ ನಾಯಕರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಮಾಧ್ಯಮಗಳೊಂದಿಗೆ ಚರ್ಚಿಸುವ ವಿಷಯವಲ್ಲ; ಇದು ತೆರೆಮರೆಯಲ್ಲಿ ನಡೆಯಬೇಕಾದ ಚರ್ಚೆ. ನಾನು ಯಾವಾಗಲೂ ಧನಾತ್ಮಕವಾಗಿರುತ್ತೇನೆ, ನಾನು ಭರವಸೆಯ ಮೇಲೆ ಬದುಕುತ್ತೇನೆ, ಕಠಿಣ ಪರಿಶ್ರಮ ಯಾವಾಗಲೂ ಫಲ ನೀಡುತ್ತದೆ, ನಾನು ಅದನ್ನು ಸಂಪೂರ್ಣವಾಗಿ ನಂಬುತ್ತೇನೆ. ನನ್ನ ನಾಯಕ ಖಂಡಿತವಾಗಿಯೂ ನನ್ನನ್ನು ನಿರಾಸೆಗೊಳಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಶಿವಕುಮಾರ್ ಹೇಳಿದರು.
ಅವರ ಪಾಳಯದಲ್ಲಿ ಸಾಕಷ್ಟು ಶಾಸಕರಿಲ್ಲ ಎಂಬ ಬಗ್ಗೆ ಪ್ರಶ್ನಿಸಿದ್ದಕ್ಕೆ, 'ಯಾರು ಹೇಳಿದ್ದು? ನನಗೆ 140 ಶಾಸಕರ ಬೆಂಬಲ ಇದೆ. ನಾನು ಪಕ್ಷಕ್ಕೆ (ಕರ್ನಾಟಕದಲ್ಲಿ) ಅಧ್ಯಕ್ಷನಾಗಿದ್ದೇನೆ. ಸಂಖ್ಯಾಬಲದ ಮೇಲೆ ತೀರ್ಮಾನವಾಗುವುದಿಲ್ಲ, ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವರಿಗೆ 140, ನನಗೆ 140 ಮಂದಿಯ ಬೆಂಬಲವಿದೆ. ನಾವಿಬ್ಬರೂ ಕುಳಿತು ಚರ್ಚಿಸಿದ್ದೇವೆ. ಅದನ್ನು ಕೇಂದ್ರ ನಾಯಕತ್ವಕ್ಕೆ ಬಿಟ್ಟಿದ್ದೇವೆ ಮತ್ತು ಅದರಂತೆ ನಡೆದುಕೊಳ್ಳುತ್ತೇವೆ' ಎಂದು ಹೇಳಿದರು. ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಒಟ್ಟು 140 ಶಾಸಕರನ್ನು ಹೊಂದಿವೆ.
2020ರಲ್ಲಿ ಆಗಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದ ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ಹೋಲಿಸಿದರೆ, ಶಿವಕುಮಾರ್, 'ನಾನು ಇತರ ರಾಜ್ಯಗಳು, ಇತರ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಪಕ್ಷದ ನಾಯಕತ್ವ ಏನು ನಿರ್ಧರಿಸುತ್ತದೆಯೋ ಅದಕ್ಕೆ ನಾವು ಬದ್ಧ ಎಂದು ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಹೇಳುತ್ತಿದ್ದೇವೆ' ಎಂದರು.
ತಮ್ಮ ದಾವೋಸ್ ಪ್ರವಾಸದ ಬಗ್ಗೆ ಮಾತನಾಡಿದ ಶಿವಕುಮಾರ್, ತಾವು ಹಲವಾರು ಉದ್ಯಮಿಗಳನ್ನು ಭೇಟಿಯಾಗಿದ್ದು, ಅವರಲ್ಲಿ ಹಲವರು ಬೆಂಗಳೂರು ಮತ್ತು ಕರ್ನಾಟಕದಲ್ಲಿ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಎಂದು ಹೇಳಿದರು. 'ಅವರು (ಬೆಂಗಳೂರು) ಅತ್ಯಂತ ಸುರಕ್ಷಿತ ಸ್ಥಳವೆಂದು ಭಾವಿಸುತ್ತಾರೆ, ವಿಶೇಷವಾಗಿ ಹವಾಮಾನ ಮತ್ತು ಮಾಲಿನ್ಯ ಮಟ್ಟಗಳಿಗೆ. ಅವರು ದೆಹಲಿ ಮಾಲಿನ್ಯದಿಂದ ಸಂತೋಷವಾಗಿಲ್ಲ, ಆದರೆ ಬೆಂಗಳೂರು ಮತ್ತು ಕರ್ನಾಟಕದ ಮಟ್ಟಿಗೆ ಅವರು ತುಂಬಾ ಸಂತೋಷವಾಗಿದ್ದಾರೆ' ಎಂದು ಹೇಳಿದರು.
'ಜಗತ್ತು ಭಾರತದತ್ತ ನೋಡುತ್ತಿದೆ. ಭಾರತವು ಸಾಕಷ್ಟು ಅವಕಾಶಗಳನ್ನು ಹೊಂದಿದೆ ಮತ್ತು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮ್ಮಲ್ಲಿರುವ ಮಾನವಶಕ್ತಿ, ನಾವು ನಿರ್ಮಿಸಿದ ಜ್ಞಾನದ ಬಂಡವಾಳ, ಅವರು ನೋಡುತ್ತಿರುವ ಮಾನವ ಸಂಪನ್ಮೂಲಗಳು... ವಿವಿಧ ನಾಯಕರು ಭಾರತದ ಬಗ್ಗೆ ಉತ್ತಮ ಮಾತುಗಳನ್ನಾಡುವುದನ್ನು ನಾನು ನೋಡಿದೆ' ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೆಷನ್ ಕುರಿತು ಮಾತನಾಡಿದ ಶಿವಕುಮಾರ್, ಅವರ ಜ್ಞಾನವು "ಅದ್ಭುತ". ಪ್ಲಸ್ ಮತ್ತು ಮೈನಸ್ ಇವೆ. ಅದು ವಿಭಿನ್ನ ವಿಚಾರ. ಆದರೆ, ಒಬ್ಬ ನಾಯಕನಾಗಿ, ನಾವು ಅವರ ಸಾಮರ್ಥ್ಯವನ್ನು ಒಪ್ಪಿಕೊಳ್ಳಬೇಕು. ನಾವು ಭಿನ್ನಾಭಿಪ್ರಾಯ ಹೊಂದಿರಬಹುದು ಎಂದರು.
Advertisement