

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಕೀಲ ಸೂರ್ಯ ಮುಕುಂದರಾಜ್ ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಸಂಬಂಧ ಸ್ವಯಂಪ್ರೇರಿತರಾಗಿ 160 ಪುಟಗಳ ದಾಖಲೆಗಳೊಂದಿಗೆ, 27 ಪುಟಗಳ ಉತ್ತರವನ್ನು ರಾಜಾಜಿನಗರ ಕ್ಷೇತ್ರ ಶಾಸಕ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ನೀಡಿದ್ದಾರೆ.
ತಮ್ಮ ವಿರುದ್ಧ ಓರ್ವ ವ್ಯಕ್ತಿ ಕರ್ನಾಟಕ ಲೋಕಾಯುಕ್ತರ ಬಳಿ ದೂರು ಸಲ್ಲಿಸಿರುವುದು ಮಾಧ್ಯಮಗಳ ಮೂಲಕ ತಿಳಿದಿದ್ದು, ದೂರಿನ ಅಂಶಗಳನ್ನು ಅಧ್ಯಯನ ಮಾಡಿದ ನಂತರ ಲೋಕಾಯುಕ್ತರಿಗೆ ಉತ್ತರ ನೀಡುವುದಾಗಿ ತಕ್ಷಣವೇ ತಿಳಿಸಿದ್ದೆ. ಹೀಗಾಗಿ ಲೋಕಾಯುಕ್ತರಿಂದ ಯಾವುದೇ ನೊಟೀಸ್ ಅಥವಾ ಸಂದೇಶ ಬರದಿದ್ದರೂ ಸ್ವಯಂ ಪ್ರೇರಿತವಾಗಿ ಸುದೀರ್ಘ ಉತ್ತರ ನೀಡಿರುವುದಾಗಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಯಮಾನುಸಾರ ಅವಕಾಶವಿಲ್ಲ. ಹೀಗಾಗಿ ಟೆಂಡರ್ ಕುರಿತಂತೆ ಯಾವುದೇ ಕಡತದ ಮೇಲೆ ನಾವು ನಿರ್ಧಾರ ಕೈಗೊಂಡು ಸಹಿ ಹಾಕುವ ಅನುಮೋದನೆ ಮಾಡುವ ಅವಕಾಶ ಇರುವುದಿಲ್ಲ. ಇದೆಲ್ಲವೂ ಕಾನೂನು ಮತ್ತು ನಿಯಮಗಳ ಅನುಸಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ನಡೆಸಬೇಕಿರುವ ಕಾರ್ಯ. ಹೀಗಿರುವಾಗ ನನ್ನ ವಿರುದ್ಧ ಸಲ್ಲಿಸಿರುವ ಈ ದೂರಿನಲ್ಲಿ ತೋರಿಸಿರುವ ಯಾವುದೇ ಅಂಶದಲ್ಲಿ ಕಿಂಚಿತ್ತೂ ಹುರುಳಿಲ್ಲ ಎಂಬುದನ್ನು ಲೋಕಾಯುಕ್ತರಿಗೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
‘ಆರೋಪಕ್ಕೆ ಒಂದು ಪುರಾವೆಯನ್ನೂ ಕೊಟ್ಟಿಲ್ಲ’
ಯಾರೋ ಬೇನಾಮಿ ಗುತ್ತಿಗೆದಾರರಿಗೆ ಸಹಾಯ ಮಾಡಿದ್ದೇನೆ, ನಗರ ಪಾಲಿಕೆಗೆ 300 ಕೋಟಿ ರೂ. ನಷ್ಟ ಉಂಟಾಗುವಂತೆ ಮಾಡಿದ್ದೇನೆ ಎಂಬ ಹಸಿ ಸುಳ್ಳಿನಿಂದ ಕೂಡಿರುವ ಆರೋಪವನ್ನು ಸಂಪೂರ್ಣವಾಗಿ ಅಲ್ಲಗೆಳೆದಿದ್ದು, ಆರೋಪ ಮಾಡಿರುವವರು ಆ ಸಂಬಂಧ ಒಂದೇ ಒಂದು ಪುರಾವೆಯನ್ನೂ ಒದಗಿಸಿರುವುದಿಲ್ಲ. ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ, ಗುತ್ತಿಗೆ ವಿಚಾರದಲ್ಲಾಗಲಿ ಅಥವಾ ಇನ್ಯಾವುದೇ ಕಾರ್ಯದಲ್ಲಾಗಲಿ , ಕಾನೂನುಬಾಹಿರವಾಗಿ ನಿಯಮ ಉಲ್ಲಂಘಿಸಿ ಕಾರ್ಯವೆಸಗಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಅನೇಕ ಪ್ರಮಾದಗಳನ್ನು ಎಸಗಿರುವ ಗುತ್ತಿಗೆದಾರನ ಪರವಾಗಿ ತನ್ನ ವಿರುದ್ಧ ಈ ದೂರು ಸಲ್ಲಿಸಲಾಗಿದೆ ಎಂಬ ಬಗ್ಗೆಯೂ ಲೋಕಾಯುಕ್ತರ ಗಮನಕ್ಕೆ ತಂದಿದ್ದೇನೆ. ಇದೊಂದು ಶುದ್ಧ ರಾಜಕೀಯ ಪ್ರೇರಿತ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದೇ ಈ ಸುಳ್ಳು ದೂರಿನ ಉದ್ದೇಶ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.