

ಬೆಂಗಳೂರು: ಮಹನೀಯರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಕಾಂಗ್ರೆಸ್ ನಾಯಕರು ಖಾತೆ ವಿಚಾರ ಬಂದಾಗ ಲಾಬಿ ನಡೆಸುತ್ತಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.
ಜಲಸಂಪನ್ಮೂಲ ಖಾತೆ ವಹಿಸಿಕೊಳ್ಳಲು ನಿರಾಕರಿಸಿರುವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇಂದು (ಶುಕ್ರವಾರ) ರಾಜೀನಾಮೆ ಸಂಬಂಧ ಪ್ರತಿಕ್ರಿಯಿಸಿರುವ ಅಶೋಕ್,‘ಬಸವಣ್ಣ, ಅಂಬೇಡ್ಕರ್ ಅವರ ಹೆಸರಿನಲ್ಲಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಕಾಂಗ್ರೆಸ್ ನಾಯಕರು, ಖಾತೆ ಹಂಚಿಕೆಯ ವಿಷಯ ಬಂದಾಗ ಮಾತ್ರ ‘ಅದೇ ಖಾತೆ ಬೇಕು, ಇದೇ ಖಾತೆ ಬೇಕು’ ಎಂದು ಬಯಸಿ, ಹಠ ಹಿಡಿದು, ಲಾಬಿ ಮಾಡಿ ‘ಪ್ರಭಾವಿ’ ಖಾತೆಗಳನ್ನೇ ಗಿಟ್ಟಿಸಿಕೊಳ್ಳುತ್ತಾರೆ’ ಎಂದು ಕಿಡಿಕಾರಿದ್ದಾರೆ.
ಮಹನೀಯರ ಆಶಯಗಳನ್ನು ಸಾಕಾರಗೊಳಿಸಬೇಕಾದ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣದಂತಹ ಖಾತೆಗಳನ್ನು ಸ್ವಯಂಪ್ರೇರಿತರಾಗಿ ಕೇಳುವವರೂ ಇಲ್ಲ; ನೀಡಿದರೆ ಸಂತೋಷದಿಂದ ಸ್ವೀಕರಿಸುವವರೂ ಇಲ್ಲ, ಇನ್ನು ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಂತೂ ಇಲ್ಲವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಯಿ ಬಿಟ್ಟರೆ ಸಮಾಜವಾದ, ಸಾಮಾಜಿಕ ನ್ಯಾಯ ಎಂದು ಹಲುಬುವ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಇದೇ. ಇದನ್ನ ಬೂಟಾಟಿಕೆ ಅನ್ನದೇ ಇನ್ನೇನನ್ನಲು ಸಾಧ್ಯ? ಎಂದು ತಿವಿದಿದ್ದಾರೆ.
Advertisement