

ನಿನ್ನೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿದ ನಾಲ್ವರು ಯಾರು ಎಂದು ನನಗೆ ಚೆನ್ನಾಗಿ ಗೊತ್ತಿದೆ, ಈ ರೀತಿ ಕ್ರಾಸ್ ವೋಟಿಂಗ್ ಆಗುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು, ಹಾಗಾಗಿ ನನಗೆ ಚುನಾವಣೆ ಫಲಿತಾಂಶ ಯಾವುದೇ ರೀತಿಯಲ್ಲಿ ಆಘಾತ, ಅಚ್ಚರಿ ಉಂಟುಮಾಡಿಲ್ಲ ಎಂದು ಜೆಡಿಎಸ್ ನಾಯಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಬೆಳಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲೇ ಈ ಬೆಳವಣಿಗೆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೆ. ಮೊನ್ನೆ ನಾನು ದೇವಸ್ಥಾನಕ್ಕೆ ಯಾಕೆ ಹೋದೆ, ಚುನಾವಣೆ ಫಲಿತಾಂಶದಲ್ಲಿ ನಾನು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇದನ್ನು ನಾನು ಸಾಂಕೇತಿಕವಾಗಿ ಶಾಸಕರು ಈಗಲೂ ಯಾವ ರೀತಿ ನಡೆದುಕೊಳ್ಳಬಹುದು ಎಂಬುದನ್ನು ಪರೀಕ್ಷೆಯಾಗಲಿ ಎಂದೇ ಅಭ್ಯರ್ಥಿಯನ್ನು ನಿಲ್ಲಿಸಿದ್ದು ಎಂಬ ಅಚ್ಚರಿ ಮಾಹಿತಿಯನ್ನು ಕುಮಾರಸ್ವಾಮಿ ಹೊರಹಾಕಿದರು.
4 ಮಂದಿ ಶಾಸಕರು ಯಾಕೆ ಕ್ರಾಸ್ ವೋಟಿಂಗ್ ಮಾಡಿದರು ಎಂದು ಕೇಳಿದಾಗ ಅದಕ್ಕೆ ನಾನಾ ಕಾರಣಗಳಿವೆ, ಅದರ ಚರ್ಚೆ ಇಲ್ಲಿ ಈಗ ಬೇಡ, ಕ್ಷೇತ್ರದಲ್ಲಿ ಅಭಿವೃದ್ಧಿಯಾಗುವುದಿಲ್ಲ ಎಂದು ಬೇಸರವಿದೆ, ಮುಂದೆ ಏನು ಮಾಡಬೇಕು ಎಂಬುದನ್ನು ಅವರು ಈಗಲೇ ತೀರ್ಮಾನ ಮಾಡಿಕೊಂಡಿದ್ದಾರೆ. ಯಾರ ಜೊತೆ ಮಾತನಾಡಿದ್ದಾರೆ, ವ್ಯವಹಾರಗಳಾಗಿದೆ ಎಂದು ನನಗೆ ಗೊತ್ತಿದೆ ಎಂದರು.
ಜಿ ಟಿ ದೇವೇಗೌಡ ವಿಷಯವೇ ನನ್ನಲ್ಲಿ ತೆಗೆಯಬೇಡಿ, ಅವರ ಹೆಸರು ಪ್ರಸ್ತಾಪಿಸಬೇಡಿ, ಕಳೆದ ಒಂದೂವರೆ ವರ್ಷದಲ್ಲಿ ನಾನು ಅವರ ಹೆಸರನ್ನೇ ತೆಗೆದಿಲ್ಲ ಎಂದರು.
Advertisement