

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(KPCC)ಯ ನೂತನ ಅಧ್ಯಕ್ಷರಾಗಿ ಇಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿನ ಏರ್ಪಟ್ಟ ಕಾರ್ಯಕ್ರಮದಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹರಿಪ್ರಸಾದ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ಉನ್ನತ ನಾಯಕರು ಮತ್ತು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.
ಡಿಕೆ ಡಿಕೆ ಎಂದು ಕೂಗುತ್ತಿದ್ದ ಕಾರ್ಯಕರ್ತರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗರಂ
ಕಾರ್ಯಕ್ರಮದ ವೇದಿಕೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಜರಾಗುತ್ತಿದ್ದಂತೆ ಡಿಕೆ ಡಿಕೆ ಎಂದು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಕೂಗಿದರು. ಮಲ್ಲಿಕಾರ್ಜುನ ಖರ್ಗೆಯವರು ಎದ್ದುನಿಂತು ವೇದಿಕೆ ಮೇಲೆ ಮೈಕ್ ಮುಂದೆ ಮಾತನಾಡುವಾಗಲೂ ಡಿಕೆ ಡಿಕೆ ಎಂದು ಜೋರಾಗಿ ಕೂಗುವುದನ್ನು ಮುಂದುವರಿಸಿದರು.
ಆಗ ಮಲ್ಲಿಕಾರ್ಜುನ ಖರ್ಗೆಯವರ ಸಿಟ್ಟು ನೆತ್ತಿಗೇರಿತು. ಡಿ ಕೆ ಡಿಕೆ ಅಂತ ನೀವು ಕೂಗುತ್ತಿದ್ದರೆ ಬಾಕಿ ಉಳಿದವರು ಏನು ಕಸ ಗುಡಿಸೋದಕ್ಕೆ ಬಂದಿದ್ದಾರಾ, ಆಯ್ತಾ...ನೀವು ಇಲ್ಲಿ ಕೂಗಿದರೆ ಇಡೀ ದೇಶ ನಿಮ್ಮ ಕೈಗೆ ಸಿಕ್ಕಿದಂತೆ ಆಗುತ್ತದೆಯೇ, ಯೂಸ್ ಲೆಸ್ ಫೆಲೋಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಸ್ವತಃ ಡಿ ಕೆ ಶಿವಕುಮಾರ್ ಅವರೇ ಎದ್ದು ನಿಂತು ಸುಮ್ಮನಿರಿ ಎಂದು ಕೈಸನ್ನೆ ಮಾಡಿ ತೋರಿಸಿದರು. ರಂದೀಪ್ ಸಿಂಗ್ ಸುರ್ಜೆವಾಲಾ ಕೂಡ ಸುಮ್ಮನಿರುವಂತೆ ಕೇಳಿಕೊಂಡರು.
ಕಾಂಗ್ರೆಸ್ ಪಕ್ಷದ ಸಭೆ ಇದು, ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಎಲ್ಲರೂ ಸೇರಿ ಪಕ್ಷವನ್ನು ಒಗ್ಗೂಡಿಸಲು ಮಾಡುವ ಕಾರ್ಯಕ್ರಮ. ಒಬ್ಬರು ಒಂದು ಮಾತನಾಡುವುದು, ಮತ್ತೊಬ್ಬರು ಮತ್ತೊಂದು ಕೂಗುವುದು ಮಾಡಬಾರದು.
ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ಕಾಂಗ್ರೆಸ್ ನ ಎಲ್ಲಾ ನಾಯಕರನ್ನು ಸಂವಿಧಾನ ಪುಸ್ತಕ ನೀಡಿ ಸ್ವಾಗತಿಸಿದರು.
ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ
ನಂತರ ರಾಜ್ಯ ಕಾಂಗ್ರೆಸ್ ವ್ಯಕ್ತಿ ರಂದೀಪ್ ಸಿಂಗ್ ಸುರ್ಜೆವಾಲಾ ಮಾತನಾಡುವಾಗ ಮಧ್ಯೆ ಬಂದ ಸಿಎಂ ಡಿ ಕೆ ಶಿವಕುಮಾರ್ ಡಿಕೆ ಡಿಕೆ ಎಂದು ಮೆರೆಯಲು ಸಾಧ್ಯವಿಲ್ಲ, ಹಾಗೆ ಹೇಳುವುದು ನಿಲ್ಲಿಸಿ, ವ್ಯಕ್ತಿ ಪೂಜೆ ಮಾಡುವುದಕ್ಕಿಂತ ಪಕ್ಷದ ಪೂಜೆ ಮಾಡಿ ಎಂದು ಹಿಂದೆಯೂ ಹೇಳಿದ್ದೇನೆ ಇಂದೂ ಹೇಳುತ್ತಿದ್ದೇನೆ, ದಯವಿಟ್ಟು ಶಿಸ್ತು ಕಾಪಾಡಿ ಎಂದು ಸಿಟ್ಟಿನಿಂದ ಎಚ್ಚರಿಕೆ ನೀಡಿದರು.
Advertisement