

ಮಂಡ್ಯ: ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಇತಿಶ್ರೀ ಹಾಡುವ ಯೋಗ್ಯತೆ ಕಾಂಗ್ರೆಸ್ ಹೈಕಮಾಂಡ್ ಗೆ ಇಲ್ಲ, ಹೀಗೆಯೇ ಮುಂದಿನ 2 ವರ್ಷ ಮುಂದೂಡುವ ಸ್ಥಿತಿಯಲ್ಲಿ ಅದು ಇದೆ. ಸಿದ್ದರಾಮಯ್ಯ ಯಾವಾಗಲೂ ಫೆವಿಕಾಲ್ ತರ ತಮ್ಮ ಸಿಎಂ ಕುರ್ಚಿ ಭದ್ರಪಡಿಸಿಕೊಂಡು ಇರುತ್ತಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕುರ್ಚಿಗೆ ಫೆವಿಕಾಲ್ ಹಾಕಿ ಅಂಟಿಸಿಕೊಳ್ಳುವ ವಿದ್ಯೆ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಡಿ ಕೆ ಶಿವಕುಮಾರ್ ಗೆ ಅದೆಲ್ಲ ಗೊತ್ತಿಲ್ಲ, ಹೊಡೆದು ಕಿತ್ತುಕೊಳ್ಳುವ ಕಾಲ ಇದಲ್ಲ, ತಲೆ ಬಳಸಬೇಕಾದ ಕಾಲವಿದು ಎಂದರು.
ಸಿದ್ದರಾಮಯ್ಯ 5 ವರ್ಷ ಕುರ್ಚಿ ಬಿಟ್ಟುಕೊಡುವುದಿಲ್ಲ, ನೋಡುತ್ತಿರಿ, ಡಿ ಕೆ ಶಿವಕುಮಾರ್ ಗೆ ಪಂಗನಾಮ ಹಾಕುವುದಂತೂ ಗ್ಯಾರಂಟಿ, ರಾಜ್ಯ ಸರ್ಕಾರದ ಆಡಳಿತ ಇವರ ಕುರ್ಚಿ ಕಾಳಗದಿಂದಾಗಿ ಸತ್ತು ಹೋಗಿದೆ, ಆ ಹೆಣವನ್ನು ಯಾರು ಯಾವ ಭಾಗದಿಂದಲಾದರೂ ಹೊರಲಿ, ಅದು ನಮಗೆ ಬೇಕಿಲ್ಲ ಎಂದರು.
ಇಂದು ಗ್ಯಾರಂಟಿ ಯೋಜನೆ ಹೊರೆಯಾಗುತ್ತಿದೆ ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಅಂದು ಭರವಸೆ ಕೊಡುವಾಗ ಜ್ಞಾನ ಇರಲಿಲ್ಲವೇ, ಗ್ಯಾರಂಟಿ ಕಿತ್ತು ಹಾಕಲು ಈಗ ಹುನ್ನಾರ ನಡೆಸುತ್ತಿದ್ದಾರೆ. ಯುವನಿಧಿ ಯೋಜನೆ ಮೂಲೆಗುಂಪು ಆಗಿದೆ. ಅನೇಕ ಬಸ್ ಗಳ ಸೇವೆ ನಿಂತು ಹೋಗಿದೆ. ಇನ್ನಾರು ತಿಂಗಳಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಬಹುದು ಎಂದರು.
ಡಿ ಕೆ ಶಿವಕುಮಾರ್ ಗೆ ಪಂಗನಾಮ
ದೇವಸ್ಥಾನಗಳನ್ನು ಸುತ್ತುತ್ತಿರುವ ಡಿ ಕೆ ಶಿವಕುಮಾರ್ ನಾಮದ ಮೇಲೆ ನಾಮ ಹಾಕಿಕೊಳ್ಳುತ್ತಿದ್ದಾರೆ. ಒಪ್ಪಂದ ಆಗಿದೆ ಎನ್ನುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಆ ಬಗ್ಗೆ ಒಮ್ಮೆಯೂ ಹೇಳಿಕೆ ನೀಡಿಲ್ಲ. ಒಪ್ಪಂದ ಆಗಿದೆಯೋ ಇಲ್ಲವೋ ಹೇಳಿಬಿಡಲಿ, ಕಿತ್ತಾಡುತ್ತಾ ಕೂರುವುದೇಕೆ, ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತಿರುವುದೇಕೆ, ಕೆಲವೊಮ್ಮೆ ಈ ಬೆಳವಣಿಗೆ ನೋಡಿ ರಾಜ್ಯದ ಜನ ಎಂಜಾಯ್ ಮಾಡುತ್ತಿದ್ದಾರೆ, ಅವರ ಜೊತೆಗೆ ನಾವು ಕೂಡ ಎಂಜಾಯ್ ಮಾಡುತ್ತಿದ್ದೇವೆ ಎಂದರು.
ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ದಿವಾಳಿ ಮಾಡುತ್ತಿದೆ. ಕಾಂಗ್ರೆಸ್ ಮಂತ್ರಿಗಳು ಹಣ ಸಂಗ್ರಹ ಮಾಡುತ್ತಿರುವ ಏಜೆಂಟ್ ಗಳು. ರಾಹುಲ್ ಗಾಂಧಿಗೆ ಎಟಿಎಂ ಆಗಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಮಾಡಿದ ಪಾಪದಿಂದ ರಾಜ್ಯಕ್ಕೆ ಈ ರೀತಿಯ ಪರಿಸ್ಥಿತಿ ಬಂದಿದೆ. ಬಿಜೆಪಿಗಿಂತ ಮೂರು ಪಟ್ಟು ಹೆಚ್ಚು ಪರ್ಸೆಂಟೇಜ್ ಭ್ರಷ್ಟಾಚಾರ ಆರೋಪ ಕಾಂಗ್ರೆಸ್ ಮೇಲಿದೆ ಎಂದರು.
ಬಿಜೆಪಿಯಿಂದ ಹೋರಾಟ
ಬಜೆಟ್ ನಲ್ಲಿ ಕಳೆದ 3 ವರ್ಷಗಳಲ್ಲಿ ಏನು ಘೋಷಣೆ ಮಾಡಿದ್ದಾರೆ ಅದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಅಧಿವೇಶನದಲ್ಲಿ ಸರ್ಕಾರದ ಮುಖಕ್ಕೆ ಮಂಗಳಾರತಿ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಹೆದರಿ ಉದ್ಯೋಗದ ಬಗ್ಗೆ ಘೋಷಣೆ ಮಾಡಿದ್ದಾರೆ ಎಂದರು.
Advertisement