

ಹಾವೇರಿ: ಐದು ರಾಜ್ಯಗಳ ಚುನಾವಣೆಗೆ ಸಂಬಂಧಿಸಿದ ಎಕ್ಸಿಟ್ ಪೋಲ್ಗಳ ಫಲಿತಾಂಶ ನಮ್ಮ ನಿರೀಕ್ಷೆಯಂತೆಯೇ ಬಂದಿದ್ದು, ಪಶ್ಚಿಮ ಬಂಗಾಳ ಫಲಿತಾಂಶ ದೇಶಕ್ಕೆ ದಿಕ್ಸೂಚಿ ಆಗಲಿದೆ ಎಂದು ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಗಳ ಎಕ್ಸಿಟ್ ಪೋಲ್ನಲ್ಲಿ ಆಸ್ಸಾಂನಲ್ಲಿ ಮೂರನೇ ಎರಡರಷ್ಟು ಬಹುಮತ ನಮಗೆ ಬರಲಿದೆ. ನಮ್ಮ ನಿರೀಕ್ಷೆಯಂತೆ ಎಕ್ಸಿಟ್ ಪೋಲ್ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಎಷ್ಟೇ ಸಮಸ್ಯೆ ಮಾಡಲಿ, ಏನೇ ಹಿಂಸೆ ಕೊಡಲಿ, ಜನ ಬದಲಾವಣೆ ಬಯಸಿದ್ದಾರೆ. ಅಲ್ಲಿನ ಜನ ಶೇ 90 ರಷ್ಟು ಮತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳ ಫಲಿತಾಂಶ ದೇಶಕ್ಕೆ ದಿಕ್ಸೂಚಿ ಆಗಲಿದೆ. ಪಂಚರಾಜ್ಯ ಫಲಿತಾಂಶ ದೇಶಾದ್ಯಂತ ಬಿಜೆಪಿ ಸಾಧನೆಯ ಹೆಜ್ಜೆ ಆಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿದ, ಮೇ 4 ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ವವೊ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ನನಗೂ ಸಿಎಂ ಆಗುವ ಆಸೆ ಇದೆ ಅಂದಿದ್ದಾರೆ. ಮೇ 4 ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೊ ಇಲ್ಲವೊ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ. ಅದು ಆಗಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷಗಳ ಸಂಭ್ರಮವಾಗಿ ನಡೆಯಲಿರುವ ‘ಅಭಿಮಾನೋತ್ಸವ’ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ರಾಜ್ಯಕ್ಕೆ ದೊಡ್ಡ ರಾಜಕೀಯ ಸಂದೇಶ ನೀಡಲಾಗುತ್ತದೆ ಎಂದು ಹೇಳಿದರು.
ಸುಮಾರು 10 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಇದು ದಾಖಲೆಯ ಸಮಾರಂಭವಾಗಲಿದೆ ಎಂದು ಅವರು ಹೇಳಿದರು.
Advertisement