

ಬೆಂಗಳೂರು: 2028 ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅತಿ ಎಚ್ಚರಿಕೆಯಿಂದ ಹೆಜ್ಜೆಯಿಡುವ ಸಾಧ್ಯತೆಯಿದೆ, ಆಡಳಿತ ವಿರೋಧಿ ಅಲೆಯನ್ನು ಹೋಗಲಾಡಿಸುವುದು ಕಾಂಗ್ರೆಸ್ ಮುಂದಿರುವ ಸದ್ಯದ ಬಹುದೊಡ್ಡ ಸಮಸ್ಯೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಯಾವುದೇ ಬಣಗಳ ಒತ್ತಡಕ್ಕೆ ಪಕ್ಷದ ಹೈಕಮಾಂಡ್ ಮಣಿಯುವ ಸಾಧ್ಯತೆಯಿಲ್ಲ, ಜಾತಿ ಸಂಯೋಜನೆ ಮತ್ತು ಗೆಲುವಿನ ಆಧಾರದ ಮೇಲೆ ಸೂತ್ರವನ್ನು ರೂಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರು, ಸಿದ್ದರಾಮಯ್ಯ ಅವರನ್ನು ಪಕ್ಷದ ಅಹಿಂದ ಮುಖವಾಗಿ ಮತ್ತು ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸುವ ಮೂಲಕ ಯಥಾಸ್ಥಿತಿ ಕಾಯ್ದುಕೊಳ್ಳು ಬಯಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಮ್ಮತದ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಕಳುಹಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಮೇ 4 ರಂದು ಹೊರ ಬೀಳುವ ಐದು ರಾಜ್ಯಗಳ ವಿಧಾನಸಭೆಗಳ ಫಲಿತಾಂಶವು ಸಹ ಈ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಕೇರಳವನ್ನು ಗೆದ್ದು ಯುಡಿಎಫ್ ಸರ್ಕಾರವನ್ನು ರಚಿಸಿದರೆ ಪಕ್ಷದ ಹೈಕಮಾಂಡ್ ಅಲ್ಲಿ ಕಾರ್ಯನಿರತವಾಗುವ ಸಾಧ್ಯತೆಯಿದೆ. ಯುಡಿಎಫ್ ಬಹುಮತ ಪಡೆದರೆ ಕೇರಳ ಮುಖ್ಯಮಂತ್ರಿಯ ಸಮಸ್ಯೆಯನ್ನು ಹೈಕಮಾಂಡ್ ಪರಿಹರಿಸಬೇಕು, ಆದ್ದರಿಂದ ಕರ್ನಾಟಕದ ನಾಯಕತ್ವದ ಸಮಸ್ಯೆಯನ್ನು ನಿಭಾಯಿಸುವುದು ಆದ್ಯತೆಯಾಗಿರುವುದಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಪಾಳಯವು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ದಲಿತ ಕೋಟಾದಡಿಯಲ್ಲಿ ಭವಿಷ್ಯದ ಮುಖ್ಯಮಂತ್ರಿಯನ್ನಾಗಿ ಬಿಂಬಿಸಲು ಪ್ರಯತ್ನಿಸುತ್ತಿತ್ತು. ಕೆಲವು ದಿನಗಳ ಹಿಂದೆ, ಖರ್ಗೆ ಸಿಎಂ ಆಗುವ ವಿಚಾರವನ್ನು ಸ್ವಾಗತಿಸಿದ್ದರು, ಪಕ್ಷದ ನಾಯಕರು ಅವರ ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಸ್ವೀಕರಿಸುತ್ತಾರೆ ಎಂದು ಹೇಳಿದ್ದರು. ಆದರೆ ಕರ್ನಾಟಕ ವಿಷಯದ ಬಗ್ಗೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
"ಸದ್ಯಕ್ಕೆ ಮುಖ್ಯಮಂತ್ರಿ ಇದ್ದಾರೆ ಮತ್ತು ಅವರನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖರ್ಗೆ ಕಡ್ಡಿಮುರಿದಂತೆ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರರೊಂದಿಗೆ ಎಐಸಿಸಿ ಅಧ್ಯಕ್ಷರು ಸರ್ವೋಚ್ಚ ಅಧಿಕಾರ ಹೊಂದಿದ್ದಾರೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗದಕೊಂಡರು ನಾವು ಗೌರವ ನೀಡುವುದಲ್ಲದೆ ಆದೇಶವನ್ನು ಸ್ವೀಕರಿಸುತ್ತೇವೆ" ಎಂದು ಪರಮೇಶ್ವರ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು,
"ಖರ್ಗೆ, ಸೋನಿಯಾ ಮತ್ತು ರಾಹುಲ್ ಅವರ ನಿರ್ಧಾರವು ನಮಗೆ 'ಪ್ರಸಾದ' (ಪವಿತ್ರ ಕಾಣಿಕೆ) ಇದ್ದಂತೆ, ಅದನ್ನು ನಾವು ಸ್ವೀಕರಿಸುತ್ತೇವೆ" ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಗೆ ತಮ್ಮ ಅಚಲ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ಒಬ್ಬ ಕಾಂಗ್ರೆಸ್ಸಿಗನಾಗಿ, ನಾನು ಪಕ್ಷಕ್ಕೆ ತುಂಬಾ ನಿಷ್ಠನಾಗಿದ್ದೇನೆ. ನಮ್ಮ ಪಕ್ಷದ ನಾಯಕರ ಮಾತುಗಳು ಬಹಳ ಮುಖ್ಯ. ನಾವು ಪಕ್ಷದ ನಿರ್ದೇಶನಗಳನ್ನು ಪಾಲಿಸುತ್ತೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
Advertisement