

ದಾವಣಗೆರೆ: ಚುನಾವಣೆ ಸಮಯದಲ್ಲಿ ಪಕ್ಷಪಕ್ಷಗಳ ನಡುವೆ ಸ್ಪರ್ಧೆ, ವಾಗ್ವಾದ, ತೀವ್ರ ಪೈಪೋಟಿ ಇರುವುದು ಸಹಜ, ಆದರೆ ಮತದಾನ ಮುಗಿದ ನಂತರ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ ಎಂದು ನೂತನ ಶಾಸಕ ಸಮರ್ಥ್ ಶಾಮನೂರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಹಿತವೇ ಮೊದಲ ಆದ್ಯತೆ, ಪಕ್ಷದ ರಾಜಕೀಯಕ್ಕಿಂತಲೂ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ ಎಂಬ ಸಂದೇಶವನ್ನು ನೀಡಿದರು.
ಮೊದಲಿಗೆ ದಾವಣಗೆರೆ ಜಿಲ್ಲೆಯ ಎಲ್ಲ ಮತದಾರರಿಗೆ ಅವರು ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ. ತಮ್ಮ ಗೆಲುವು ವೈಯಕ್ತಿಕ ಸಾಧನೆ ಅಲ್ಲ, ಜನರ ವಿಶ್ವಾಸದ ಫಲ ಎಂದು ಹೇಳಿದ್ದಾರೆ.
ಅಲ್ಲದೇ ತಮ್ಮ ಪರವಾಗಿ ಪ್ರಚಾರ ನಡೆಸಿದ ಹಿರಿಯ ನಾಯಕರು, ಕಾರ್ಯಕರ್ತರು, ಬೆಂಬಲಿಗರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ನಂತರ ತಮ್ಮ ಕೆಲಸದ ಬಗ್ಗೆ ಮಾತನಾಡಿ, ಕ್ಷೇತ್ರದ ಜನರಿಗೆ ಮತ್ತು ವಿಪಕ್ಷದವರಿಗೆ ಮಹತ್ವದ ಸಂದೇಶ ನೀಡಿದ್ದಾರೆ.
ವಿರೋಧ ಪಕ್ಷದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿಗೂ ಸಮರ್ಥ ಶಾಮನೂರು ಅವರು ವಿಶೇಷ ಮನವಿ ಮಾಡಿದ್ದಾರೆ. ‘ಯಾವುದೇ ಅಭಿವೃದ್ಧಿ ಕೆಲಸ, ಜನರ ಸಮಸ್ಯೆ, ಬೇಡಿಕೆ ಇದ್ದರೂ ನಮಗೆ ತಿಳಿಸಿ. ನಮ್ಮ ಮನೆ ಬಾಗಿಲು, ಆಫೀಸ್ ಬಾಗಿಲು, ಮನದ ಬಾಗಿಲು ಯಾವಾಗಲೂ ತೆರೆದಿರುತ್ತದೆ’ ಎಂದು ಅವರು ಭರವಸೆ ನೀಡಿದ್ದಾರೆ.
ರಾಜಕೀಯ ಪಕ್ಷ ಬೇರೆ ಇರಬಹುದು, ಆದರೆ ಜನರ ಸೇವೆಯಲ್ಲಿ ಎಲ್ಲರೂ ಒಂದಾಗಬೇಕು ಎಂಬ ಮನೋಭಾವ ಅವರು ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕೆಲಸ ಮಾಡುವ ಸಾಮರ್ಥ್ಯ ಇದೆ ಎಂದೇ ಜನರು ನನ್ನ ಗೆಲ್ಲಿಸಿದ್ದಾರೆ. ನನ್ನ ಅಜ್ಜನ ರೀತಿ ಅಜಾತ ಶತ್ರು ಆಗುತ್ತೇನೆ. ಅದೇ ನನ್ನ ಗುರಿ ನಮ್ಮ ಮನೆ ಬಾಗಿಲು ಸದಾ ನಿಮಗಾಗಿ ತೆರೆದಿರುತ್ತದೆ ಎಂದು ಹೇಳಿದ್ದಾರೆ
Advertisement