

ಬೆಂಗಳೂರು: ತಮಿಳುನಾಡು ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಈಗಲ್ಟನ್ ರಿಸಾರ್ಟ್ಗೆ ಸ್ಥಳಾಂತರಿಸಲಾಗಿದೆ ಎಂಬ ರಾಜಕೀಯ ಊಹಾಪೋಹಗಳಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ಎಲ್ಲಾ ವರದಿಗಳನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ.
ಬೆಂಗಳೂರುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, “ಯಾವುದೇ ತಮಿಳುನಾಡು ಕಾಂಗ್ರೆಸ್ ಶಾಸಕರು ಈಗಲ್ಟನ್ ರಿಸಾರ್ಟ್ಗೆ ಬಂದಿಲ್ಲ. ಅವರು ಹೈದರಾಬಾದ್ಗೆ ತೆರಳಿದ್ದಾರೆ ಎನ್ನುವುದೂ ಸತ್ಯವಲ್ಲ. ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ತಮಿಳುನಾಡಿನ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂಬ ಚರ್ಚೆಗಳು ಕಳೆದ ಕೆಲವು ದಿನಗಳಿಂದ ಜೋರಾಗಿದ್ದು, ವಿಶೇಷವಾಗಿ ಬೆಂಗಳೂರಿನ ಹೊರವಲಯದಲ್ಲಿರುವ ಈಗಲ್ಟನ್ ರಿಸಾರ್ಟ್ನಲ್ಲಿ ಶಾಸಕರನ್ನು ತಂಗಿಸಲಾಗಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ, ಈ ಎಲ್ಲ ವರದಿಗಳಿಗೆ ಡಿಕೆ ಶಿವಕುಮಾರ್ ತೆರೆ ಎಳೆದಿದ್ದಾರೆ.
ಪಕ್ಷದ ಹೈಕಮಾಂಡ್ ಯಾವುದೇ ಸೂಚನೆ ನೀಡಿದರೆ ಅದು ಬೇರೆ ವಿಷಯ. ಆದರೆ, ಈ ವಿಚಾರವಾಗಿ ಹೈಕಮಾಂಡ್ ನನ್ನೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಶಾಸಕರನ್ನು ರಿಸಾರ್ಟ್ಗಳಿಗೆ ಸ್ಥಳಾಂತರಿಸುವ ಘಟನೆಗಳು ದೇಶದ ಹಲವು ರಾಜ್ಯಗಳಲ್ಲಿ ನಡೆದಿರುವ ಹಿನ್ನೆಲೆ, ಈ ಸುದ್ದಿ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ವಿಶೇಷವಾಗಿ ಕರ್ನಾಟಕ ರಾಜಕೀಯದಲ್ಲಿ ರಿಸಾರ್ಟ್ ರಾಜಕಾರಣದ ಅನುಭವವಿರುವ ಡಿಕೆ ಶಿವಕುಮಾರ್ ಹೆಸರು ಕೇಳಿಬಂದ ಕಾರಣ, ಈ ಊಹಾಪೋಹಗಳು ಮತ್ತಷ್ಟು ತೀವ್ರಗೊಂಡಿದ್ದವು. ಆದರೆ, ಡಿಕೆ ಶಿವಕುಮಾರ್ ನೀಡಿರುವ ಸ್ಪಷ್ಟನೆ ಬಳಿಕ, ತಮಿಳುನಾಡು ಕಾಂಗ್ರೆಸ್ ಶಾಸಕರ ಸ್ಥಳಾಂತರದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
Advertisement