

ಬೆಂಗಳೂರು: ನೀಟ್ ಪರೀಕ್ಷೆ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಂತೋಷ್ ಲಾಡ್, ವ್ಯಾಪಂ ಹಗರಣದ ಬಗ್ಗೆ ಸಿನಿಮಾ ಮಾಡುವಂತೆ ಖ್ಯಾತ ಚಿತ್ರ ನಿರ್ದೇಶಕ ಆದಿತ್ಯ ಧರ್ ಅವರಿಗೆ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಲಾಡ್, ನಿರ್ದೇಶಕ ಆದಿತ್ಯ ಧರ್ ಅವರು ಈಗಾಗಲೇ ‘ಧುರಂಧರ್’ ಸರಣಿಯ ಸಿನಿಮಾಗಳನ್ನು ಮಾಡಿದ್ದಾರೆ. ನಾನು ಅವರಿಗೆ ಒಂದು ವಿಶೇಷ ಮನವಿ ಮಾಡುತ್ತಿದ್ದೇನೆ. ಅವರು ದಯವಿಟ್ಟು ‘ವ್ಯಾಪಂ’ ಹಗರಣದ ಕುರಿತೂ ಒಂದು ಚಿತ್ರ ನಿರ್ಮಿಸಲಿ.
ಅದೊಂದು ಅತ್ಯಂತ ರೋಚಕವಾದ ಹಗರಣವಾಗಿದ್ದು, ಸಿನಿಮಾ ಮಾಡಲು ಸೂಕ್ತವಾದ ಕಥಾವಸ್ತುವನ್ನು ಹೊಂದಿದೆ ಎಂದು ಚಾಟಿ ಬೀಸಿದದ್ದಾರೆ. ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಕೇಂದ್ರದ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಸಚಿವರು ಈ ರೀತಿಯಾಗಿ ಸಿನಿಮಾ ವಿಚಾರವನ್ನು ಎಳೆದು ತಂದು ಟಾಂಗ್ ನೀಡಿದ್ದಾರೆ.
ಇನ್ನೂ ಮೋದಿ ರೋಡ್ ಶೋ ಸಂಬಂಧ ವ್ಯಂಗ್ಯವಾಡಿದ ಸಂತೋಷ್ ಲಾಡ್, ಮೋದಿ ಸಾಹೇಬರು ಎಲ್ಲಿ ರೋಡ್ ಶೋ ಮಾಡಿದರೂ ಅಲ್ಲಿ ಆ್ಯಂಬುಲೆನ್ಸ್ ಬರುತ್ತೆ. ಅದು ಹೇಗೆ ತಿಳಿಯುತ್ತದೋ ಗೊತ್ತಾಗುವುದಿಲ್ಲ. ಪ್ರತಿ ರೋಡ್ ಶೋ ವೇಳೆ ಆ್ಯಂಬುಲೆನ್ಸ್ ಬರುತ್ತೆ... ಆವಾಗ ಮೋದಿ ದಾರಿ ಮಾಡಿಕೊಡುತ್ತಾರೆ. ಇದು ಮೊದಲೆ ಪ್ಲಾನ್ ಆಗಿರುತ್ತೆ ಎಂದು ಲೇವಡಿ ಮಾಡಿದರು.
Advertisement