

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರಿಗೆ ಆಡಳಿತ ಅನುಭವದ ಕೊರತೆಯಿದೆ. ಹಣಕಾಸು ನಿರ್ವಹಣೆ ಬಗ್ಗೆ ಯೋಚನೆ ಮಾಡದೆ ಅವರು ಏಕಾಏಕಿ 700ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಮುಚ್ಚುವಂತೆ ಆತುರದ ನಿರ್ಧಾರ ತೆಗೆದುಕೊಂಡು ಆದೇಶಿಸಿದ್ದಾರೆ ಎಂದು ಶಾಸಕ ಹಿರಿಯ ನಾಯಕ ಕೆ ಎನ್ ರಾಜಣ್ಣ ಟೀಕಿಸಿದ್ದಾರೆ.
ಮಧುಗಿರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯದಂಗಡಿಗಳಿಂದ ಹೆಚ್ಚಿನ ಆದಾಯ ಬರುತ್ತದೆ, ಆದಾಯದ ಹಾದಿ ಮುಚ್ಚಿಕೊಂಡರೆ ಫ್ರೀ ಬೀಸ್ ನೀಡಲು ಸಾಧ್ಯವೇ, ವಿಜಯ್ ಮುಂದಿನ ದಿನಗಳಲ್ಲಿ ಎಲ್ಲವನ್ನೂ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ರಾಹುಲ್ ಗಾಂಧಿಯವರು ಹೋಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಹೋದರೆ ಎಲ್ಲಾ ಕಾಂಗ್ರೆಸ್ ನಾಯಕರು ಭಾಗಿಯಾದಂತೆ, ವಿಜಯ್ ಅವರಿಗೆ ಕಾಂಗ್ರೆಸ್ ಪಕ್ಷ ಒಂದೇ ಅಲ್ಲ, ಬೇರೆ ಪಕ್ಷಗಳೂ ಬೆಂಬಲ ನೀಡಿದ್ದಾರೆ ಎಂದರು.
ವಿಜಯ್ ಅವರು ಹೋಗುವ ಹಾದಿ ಬಹಳ ಮುಳ್ಳಿನದ್ದಾಗಿದೆ, ಕರ್ನಾಟಕದಲ್ಲಿ ಉಚಿತ ಭಾಗ್ಯಗಳನ್ನು ಕೊಟ್ಟು ಸರ್ಕಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ, ಆ ತರ ತಮಿಳು ನಾಡು ಸರ್ಕಾರದಲ್ಲಿ ಕೂಡ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಇನ್ನು ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಟೀಕಿಸಿದ್ದಾರೆ. ನಮ್ಮಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆಯೋ ಇಲ್ಲವೋ ಅದು ನಮ್ಮ ಪಕ್ಷದ ಆಂತರಿಕ ವಿಚಾರ, ನಮಗೂ ಅದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಇಂದಿರಾ ಗಾಂಧಿ ಕಾಲದ ಪರಿಸ್ಥಿತಿ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆ. ಅಂದು ಬರಗಾಲವಿತ್ತು, ಇಂದಿನ ಪರಿಸ್ಥಿತಿಗೆ ಅಂದಿನ ಹೇಳಿಕೆ ತಾಳೆಯಾಗುವುದಿಲ್ಲ. ರಾಜಕೀಯದಲ್ಲಿ ಯಾರೂ ಶಾಶ್ವತ ಅಲ್ಲ, ವಾಸ್ತವ ಅರಿಯಲಿ, ಪ್ರಧಾನಿ ಮೋದಿ ಆಕಾಶದಿಂದ ಇಳಿದು ಮಾತನಾಡಲಿ, ಭೂಮಿಯ ಮೇಲಿದ್ದು ಹೇಳಿಕೆ ನೀಡಲಿ ಎಂದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಗೆದ್ದಿದ್ದಾರೆ, ನಾವು ಜನಾದೇಶಕ್ಕೆ ತಲೆಬಾಗುತ್ತೇವೆ ಎಂದರು.
Advertisement