

ಮೈಸೂರು: ಮುಂದಿನ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 75-80 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಬೋಗಾದಿ ಮೈದಾನದಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, 2028 ರ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಬೆಲೆಕೊಟ್ಟು ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂದು ಮನವರಿಕೆ ಮಾಡಿಕೊಡಲು ಸಮಾವೇಶ ಮಾಡಿದ್ದೇವೆ ಎಂದು ನುಡಿದರು.
ಆದರೆ ಸಮಾವೇಶದಲ್ಲಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು. ಬ್ಯಾನರ್ ಗಳಲ್ಲಿಯೂ ಅವರ ಫೋಟೋ ಕಂಡುಬರಲಿಲ್ಲ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಯಿಂದ ಜನರು ನೆಮ್ಮದಿಯಿಂದ ಇದ್ದಾರೆಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತಿದಿನ ನನ್ನ ಮನೆಯ ಬಳಿ ಬಂದು ನೋಡಿದರೆ ಜನರ ಸ್ಥಿತಿ ಏನಾಗಿದೆ ಎಂದು ಮನವರಿಕೆ ಆಗಲಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ವಿದ್ಯುತ್, ಬಸ್ ಮದ್ಯದ ದರವನ್ನು ಎಷ್ಟು ಏರಿಸಿದ್ದೀರಿ ಎಂಬ ಪಟ್ಟಿ ನೀಡಲಿ ಎಂದು ಒತ್ತಾಯಿಸಿದರು.
ಯುದ್ಧದ ಕಾರಣಕ್ಕೆ ತೈಲ ಬೆಲೆ ಏರಿಕೆಯಾಗಿದೆ. ಸಿಂಗಾಪುರದಂತ ದೇಶದಲ್ಲಿ ಪೆಟ್ರೋಲ್ ದರ ರೂ.245 ಇದೆ. ಪ್ರತಿ ದೇಶವೂ ದರ ಏರಿಸಿದೆ. ಯಾರಿಗಾದರೂ ಮೊದಲೇ ಯುದ್ಧದ ಕನಸು ಬಿದ್ದಿತ್ತ? ಕಾಂಗ್ರೆಸ್ ನಾಯಕರೇ ಈ ಸ್ಥಾನದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಇದೇ 19 ರಂದು ತುಮಕೂರಿನಲ್ಲಿ ಕಾಂಗ್ರೆಸ್ ನವರು ಸಾಧನಾ ಸಮಾವೇಶ ಮಾಡ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ 712 ಅಧಿಕಾರಿಗಳ ಅಮಾನತು. ಚಿನ್ನದ ದರೋಡೆ ಮಾಡಿದ, ಪೊಲೀಸ್ ಕಚೇರಿಯಲ್ಲೇ ಅಸಭ್ಯ ವರ್ತನೆ ತೋರಿದ ಅಧಿಕಾರಿಯ ರಕ್ಷಣೆ ಮಾಡಿದೆ. ಇದನ್ನು ಹೇಳುವುದಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದೀರಾ ಎಂದು ವ್ಯಂಗ್ಯವಾಡಿದರು.
Advertisement