

ಬೆಂಗಳೂರು: ಸರ್ಕಾರಿ ನಿವಾಸಕ್ಕಾಗಿ ಮಾಜಿ ಹಾಗೂ ಹಾಲಿ ಸಚಿವರ ನಡುವೆ ಜಟಾಪಟಿ ನಡೆದಿದೆ. ಮಾಜಿ ಸಚಿವರಿಗೆ ಹಾಲಿ ಸಚಿವರು ಒತ್ತಡ ಹೇರಿದ್ದು, ಆದಷ್ಟು ಶೀಘ್ರದಲ್ಲೇ ಸರ್ಕಾರಿ ನಿವಾಸ ಬಿಟ್ಟುಕೊಡುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಸರ್ಕಾರಿ ನಿವಾಸದಲ್ಲಿ ಮಹದೇವಪ್ಪ ಅವರು ವಾಸವಿರುವಾಗಲೇ ಹೊಸ ಸಚಿವರ ಅನುಕೂಲಕ್ಕಾಗಿ ಕಾಮಗಾರಿ ನಡೆಸಲು ಸಿಬ್ಬಂದಿ ಮುಂದಾಗಿದ್ದಾರೆ.
ಈ ಸಂಬಂಧ ಮಾಜಿ ಸಚಿವ ಎಚ್.ಸಿ ಮಹಾದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸೌಜನ್ಯ ಎಂಬುದು ಬಹಳ ಮುಖ್ಯ ಎಂಬುದನ್ನು ನಾನು ಕಲಿತಿದ್ದೇನೆ ಮತ್ತು ಅದನ್ನು ಬದುಕಿನ ಉದ್ದಕ್ಕೂ ಅಳವಡಿಸಿಕೊಂಡಿದ್ದೇನೆ. ಇದು ನನ್ನನ್ನು ಬಲ್ಲ ಎಲ್ಲರಿಗೂ ಗೊತ್ತು ಮತ್ತು ಈ ದಿನ ನಿಯಮಾವಳಿಗಳ ವಿರುದ್ಧವಾಗಿ ವರ್ತಿಸುತ್ತಿರುವ ಸಂಪುಟ ಸಹಯೋಗಿ ಮಿತ್ರ ಭೈರತಿ ಸುರೇಶ್ ಅವರಿಗೂ ಗೊತ್ತು ಎಂದಿದ್ದಾರೆ.
ಸರ್ಕಾರ 90 ದಿನಗಳ ಒಳಗಾಗಿ ಮನೆ ಖಾಲಿ ಮಾಡಬೇಕೆಂಬ ಗಡುವು ನೀಡಿದ್ದು, ಮನೆಯನ್ನೂ ಸಹ ಹುಡುಕಲಾಗುತ್ತಿದೆ. ಹೀಗಿದ್ದರೂ ಕೂಡಾ ನಿಯಮಾವಳಿ ಹೋಗಲಿ ಕನಿಷ್ಠ ಸೌಜನ್ಯ ಇಲ್ಲದೇ ಮನೆಯ ಒಳಗೆ ಇರುವಾಗಲೇ ಮೀಟಿಂಗ್ ಹಾಲ್ ಅನ್ನು ಕೆಡವಿ ಹಾಕುವುದು, ಮನೆಯ ಸದಸ್ಯರಿಗೆ ತಮ್ಮ ಸಿಬ್ಬಂದಿಗಳಿಂದ ಸೂಚನೆ ಕೊಡಿಸುವುದು, ಮನೆ ದುರಸ್ತಿಗೆ ಯತ್ನಿಸುವುದು ಸರಿಯಲ್ಲ.
ಅಧಿಕಾರ ಬರುತ್ತದೆ, ಹೋಗುತ್ತದೆ ಆದರೆ ಸಾರ್ವಜನಿಕ ಜೀವನದ ನಡವಳಿಕೆಗಳು ಮತ್ತು ನಾವು ತೋರುವ ಸೌಜನ್ಯವು ಸಮಾಜದ ಸತ್ವವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ತಾಳ್ಮೆ ಇರಲಿ. ಧನ್ಯವಾದ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ನ ಅಹಿಂದ ಪಾಳಯದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ, ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ. ಡಾ. ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕೆಲವು ಹಿರಿಯ ನಾಯಕರು ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ವರ್ಗಗಳ ರ್ಯಾಲಿಯಲ್ಲಿ ಭಾಗವಹಿಸದಿರುವುದು ಬಿಕ್ಕಟ್ಟು ಹೆಚ್ಚಾಗುವ ಊಹಾಪೋಹಗಳಿಗೆ ಕಾರಣವಾಗುತ್ತಿದೆ.
ಆದರೆ ಮಹಾದೇವಪ್ಪ ಅವರು ಅಹಿಂದ ಪಾಳಯದಲ್ಲಿ ಗಂಭೀರ ಬಿಕ್ಕಟ್ಟಿನ ಸಲಹೆಗಳನ್ನು ತಿರಸ್ಕರಿಸಿದರು. ಅಹಿಂದ ಯಾವುದೇ ಒಬ್ಬ ವ್ಯಕ್ತಿಯ ಸೃಷ್ಟಿಯಲ್ಲ ಎಂದು ಅವರು ಸಮರ್ಥಿಸಿಕೊಂಡರು.
ಸಚಿವ ಡಾ. ಯತೀಂದ್ರ ಅವರು ತಮ್ಮ ತಂದೆ ಸಿದ್ದರಾಮಯ್ಯ ಅವರನ್ನು ವಿವಾದದಿಂದ ದೂರವಿಡಲು ಪ್ರಯತ್ನಿಸಿದರು. ಅತಿಥಿ ಪಟ್ಟಿಯ ನಿರ್ಧಾರವನ್ನು ಆಯೋಜಕರು ತೆಗೆದುಕೊಂಡಿದ್ದಾರೆ ಮತ್ತು ಇಬ್ಬರು ನಾಯಕರನ್ನು ಹೊರಗಿಡುವಲ್ಲಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದರು.