

ಮೈಸೂರು: ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪದ ಭಾಗವಾಗಿ ಗುರುವಾರ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರಿನಿಂದ ಸೆಪ್ಟೆಂಬರ್ 1ರಂದು ಆರಂಭಗೊಂಡ ಪಾದಯಾತ್ರೆಯು 10 ದಿನಗಳ ಬಳಿಕ, ಸೆಪ್ಟೆಂಬರ್ 9ರಂದು ಬಳ್ಳಾರಿ ತಲುಪಿತು. ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 25 ಸಾವಿರ ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ’ ಎಂದು ಬಿಜೆಪಿಯ ನಾಯಕರು ತಿಳಿಸಿದರು. ಬಳ್ಳಾರಿ ನಗರದಲ್ಲಿ ಅನಧಿಕೃತ ಬ್ಯಾನರ್ ಅಳವಡಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ನಗರದ ಹೊರವಲಯದಲ್ಲಿ ಮತ್ತು ಸಮಾವೇಶ ಸ್ಥಳದಲ್ಲಿ ಮಾತ್ರ ಬ್ಯಾನರ್ಗಳ ಅಳವಡಿಕೆಗೆ ಅವಕಾಶವಿದೆ.
ಇನ್ನೂ ಗುರುವಾರ ಬಳ್ಳಾರಿಯಲ್ಲಿ ನಡೆಯಲಿರುವ ಸಮಾರೋಪ ಸಮಾವೇಶ ಹಾಗೂ ಬಿಜೆಪಿ ಪಾದಯಾತ್ರೆಯ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳುವಳಿಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು. ಈ ಪಾದಯಾತ್ರೆಯು ತಮ್ಮ ನಿರೀಕ್ಷೆಗೂ ಮೀರಿ ಭಾರಿ ಯಶಸ್ಸನ್ನು ಕಂಡಿದೆ, ರಾಜ್ಯ ಸರ್ಕಾರವು ಯಾವುದೇ ಅಡೆತಡೆಗಳಿಲ್ಲದೆ ಸಮಾವೇಶಕ್ಕೆ ಅನುಮತಿ ನೀಡಬೇಕಿತ್ತು, ಕೊನೆಗೂ ಹೇಗೋ ಅನುಮತಿ ನೀಡಿದೆ ಎಂದರು.