ಪ್ರಮುಖ ವಚನಕಾರರು

ಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು...
ವಚನಕಾರರು
ವಚನಕಾರರು
ಅಕ್ಕಮಹಾದೇವಿ
ಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.
ಹನ್ನೆರಡನೆಯ ಶತಮಾನದಲ್ಲೇ ಇಂತಹ ಮಹಿಳಾ ಜಾಗೃತಿಯನ್ನು ಮೂಡಿಸಿದರು. ಸಂಸಾರವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನ ದೇವರೇ ತನ್ನ ಪತಿಯೆಂಬುದಾಗಿ ನಂಬಿದರು. ತಮ್ಮ ವೈರಾಗ್ಯದ ಮೂಲಕವೇ ಪುರುಷರೊಡನೆ ಹೋರಾಡಿ ಸಮಾಜೋದ್ಧಾರದ ಕಾರ್ಯದಲ್ಲಿ ನೆರವಾದರು ಈ ಶಿವಶರಣೆ. ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿದರು. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಲೋಕವಿಚಾರಗಳನ್ನು ಅರಿಯುವಂತೆ ಮಾಡಿದರು.
ಉಡುತಡಿ ಗ್ರಾಮವಾಸಿಗಳಾದ ಮಹಾದೇವಿ ಪರಮಶಿವಭಕ್ತರಾಗಿದ್ದರು. ಶ್ರೀಶೈಲ ಚೆನ್ನಮಲ್ಲಿಕಾರ್ಜುನನೇ ಇವರ ಆರಾಧ್ಯದೈವವಾದನು. ಶಿವಭಕ್ತೆಯಾದ ಮಹಾದೇವಿಯು ಕೆಲವು ಷರತ್ತುಗಳನ್ನು ಹಾಕಿ ರಾಜ ಕೌಶಿಕನನ್ನು ಮದುವೆಯಾದರು. ಆಕೆಯ ಷರತ್ತುಗಳನ್ನು ರಾಜನು ಮುರಿಯಲು ಸಂಸಾರವನ್ನು ತ್ಯಜಿಸಿ ವಿರಾಗಿಯಾದರು. ಎಲ್ಲರಿಗೂ ಅಕ್ಕಳಾಗಿ ಅಕ್ಕಮಹಾದೇವಿ ಎನಿಸಿದರು. ಶಿವಶರಣರಾದ ಬಸವಣ್ಣನವರ ಸಮಕಾಲೀನರು ಇವರು.
ಸರ್ವಸಂಗ ಪರುತ್ಯಾಗಿಯಾಗಿ ಶಿವನನ್ನೇ ಪತಿಯೆಂದು ನಂಬಿ ಚೆನ್ನಮಲ್ಲಿಕಾರ್ಜುನ ಅಂಕಿತದೊಡನೆ ಅನೇಕ ವಚನಗಳನ್ನು ತಿಳಿಗನ್ನಡದಲ್ಲಿ ರಚಿಸಿ ಗಹನವಾದ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಿದರು. ಶಿವಶರಣೆಯಾಗಿ ಅಕ್ಕನವರು ಅಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತಸ್ಥಾನವನ್ನು ಗಳಿಸಿಕೊಟ್ಟರು.
********
ಬಸವಣ್ಣ
ಬಸವಣ್ಣನವರು (೧೧೩೦ - ೧೧೬೭): ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರು. ಜನರಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊಡೆದು ಹಾಕಲು ಯತ್ನಿಸಿ ಭಾವೈಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ವೀರಶೈವ ಮತವನ್ನು ಬಲಪಡಿಸಿದರು.
ಗಹನವಾದ ವಿಷಯಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದರು. ಹನ್ನೆರಡನೆಯ ಶತಮಾನದಲ್ಲೇ ಸಾಮಾಜಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವಂಥಹ ಕಾರ್ಯವು ಕನ್ನಡಿಗರಾದ ಇವರಿಂದ ನಡೆಯಿತು.
ಬಾಗೇವಾಡಿಯಲ್ಲಿ ಜನಿಸಿದರು ಬಸವಣ್ಣನವರು. ಬಿಜ್ಜಳನ ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಜೊತೆಗೆ ಶಿವಶರಣರ ಸೇವೆಯನ್ನು ಮಾಡುತ್ತಾ, ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಸಂಗಮೇಶ್ವರನ ಭಕ್ತರಾಗಿ "ಕೂಡಲಸಂಗಮದೇವ" ಎಂಬ ಅಂಕಿತದೊಡನೆ ಅನೇಕ ವಚನಗಳನ್ನು ರಚಿಸಿದರು.
ಇಂದಿಗೂ ಅಣ್ಣ ಬಸವಣ್ಣನವರ ವಚನಗಳು ತುಂಬಾ ಪ್ರಸಿದ್ಧವಾಗಿವೆ.
*********
ಕನಕದಾಸರು
ಕನಕದಾಸರು (ಕ್ರಿ. ಶ. ೧೪೮೬-೧೫೮೦) 
ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನಕದಾಸರು. ಆಧ್ಯಾತ್ಮಿಕ ತತ್ವಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ,  ಸಾಮಾನ್ಯ ಜನರಿಗೆ ನಿಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿ, ಹಾಡಿ ಕೇಳಿಸಿದರು. ಹೀಗೆ ಸಮಾಜ ಸುಧಾರಕರಾಗಿ, ಮೇಲು ಕೀಳೆಂಬ ಭಾವವನ್ನು ಮೆಟ್ಟಿ, ಭಾವಕ್ಯತೆಯನ್ನು ಐನೂರು ವರುಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.
ಕನಕದಾಸರು ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಇವರ ಸ್ಥಳ ಧಾರವಾಡ ಜಿಲ್ಲೆಯ 'ಬಾಡ' ಎಂಬ ಗ್ರಾಮ. ಇವರು ತಿರುಪತಿಯ ತಿಮ್ಮಪ್ಪನ ಒಕ್ಕಲಿನವರಾದ್ದರಿಂದ ತಿಮ್ಮಪ್ಪನೆಂದೇ ಇವರಿಗೆ ನಾಮಕರಣವಾಯಿತು. ತಂದೆಯಂತೆಯೇ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಚಿನ್ನದ ನಾಣ್ಯಗಳು ದೊರಕಿದವು. ಆ ಹಣವನ್ನು ಆ ಗ್ರಾಮದ ಕೇಶವನ ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು. ಹೀಗೆ ದ್ರವ್ಯವು ದೊರಕಿದ್ದರಿಂದ ತಿಮ್ಮಪ್ಪನನ್ನು ಕನಕನೆಂದು ಕರೆದರು. ಈತನೇ ಕನಕನಾಯಕನಾಗಿ ಮುಂದೆ ಕನಕದಾಸರಾದರು. ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದರು.
ವಾಗ್ಗೇಯಕಾರರಾಗಿ ಆದಿಕೇಶವ, ಬಾಡವಾದಿ ಕೇಶವ, ಕಾಗಿನೆಲೆಯಾದಿ ಕೇಶವನೆಂಬ ಅಂಕಿತದೊಡನೆ ಅನೇಕ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂಡಿಗೆಗಳನ್ನು ರಚಿಸಿದ್ದಾರೆ. ಮುಂಡಿಗೆಗಳು ದ್ವಂದ್ವಾರ್ಥವನ್ನುಳ್ಳ ಕನ್ನಡ ಕೀರ್ತನೆಗಳು. ಉತ್ತಮ ಕಾವ್ಯಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಪದಿಯಲ್ಲಿ ರಚಿಸಿದ್ದಾರೆ.
ಸಮಾಜೋದ್ಧಾರಕರಾಗಿ ಜನ ಸಾಮಾನ್ಯರಲ್ಲಿ ಸೌಹಾರ್ದವನ್ನು ಬೆಳೆಸಿ, ಸಮಾನತೆಯನ್ನು ಹೊಂದಲು ಶ್ರಮಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ತತ್ವ ಪ್ರಚಾರ ಮಾಡಿ, ಎಲ್ಲರನ್ನೂ ಭಗವದ್ಭಕ್ತರಾಗುವಂತೆ ಮಾಡಿ, ಲೋಕಕಲ್ಯಾಣವೆಸಗಿದ್ದಾರೆ. ಇವರ ಕೀರ್ತನೆಗಳು ಇಂದಿಗೂ ಜನಮನದಲ್ಲಿ ಮೊಳಗುತ್ತಿವೆ.
-ಅನಿಲ್ ರಮೇಶ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com