ರಂಗತಂಡಗಳು ಹಲವು ವೇದಿಕೆ ಕೆಲವು!

2೦೦ ಕ್ಕೂ ಹೆಚ್ಚು ದಾಖಲಾಗಿರುವ ರಂಗತಂಡಗಳಿಗೆ ಬೆರಳೆಣಿಕೆಯಷ್ಟು ರಂಗಮಂದಿರಗಳು, ಅದರಲ್ಲೂ ನಾಟಕಕ್ಕೆ ಬೇಕಾದ ವ್ಯವಸ್ಥೆ ಬಹುತೇಕ ರಂಗಮಂದಿರಗಳಲ್ಲಿ ಲಭ್ಯವಿಲ್ಲ.
ರಂಗಮಂದಿರ (ಸಂಗ್ರಹ ಚಿತ್ರ)
ರಂಗಮಂದಿರ (ಸಂಗ್ರಹ ಚಿತ್ರ)
ಬೆಂಗಳೂರು ಇಂದಿಗೆ ರಂಗಭೂಮಿಯ ಕೇಂದ್ರಬಿಂದು ಅಂತ ಹೇಳಿದರೆ ತಪ್ಪಾಗಲಾರದು. IT ವಲಯದ ಬೆಳವಣಿಗೆ ಜೊತೆ ಬೆಂಗಳೂರು ಬಹುತೇಕೆ ವಿಭಿನ್ನ ಆಶಾಕಿರಣಗಳಿಗೂ ಬೆಂಗಳೂರು ತವರೂರು ಆಯ್ತು, ಅದರಲ್ಲಿ ಹವ್ಯಾಸಿ ರಂಗಭೂಮಿಯ ಪಾತ್ರ ತುಂಬಾ ದೊಡ್ಡದು. ಹಲವಾರು ಬಾರಿ ನಾವು ಬೆಂಗಳೂರಿನ ಇತ್ತೀಚಿನ ರಂಗತಂಡಗಳನ್ನು ಪಟ್ಟಿ ಮಾಡಿದಾಗ ನಮಗೆ ಸಿಕ್ಕ ಲೆಕ್ಕ ನೂರಕ್ಕೂ ಹೆಚ್ಚು ಆದರೆ ಈ ತಂಡಗಳು ತಮ್ಮ ಪ್ರದರ್ಶವನ್ನಾದರೂ ಮಾಡುವುದು ಎಲ್ಲಿ? 2೦೦ ಕ್ಕೂ ಹೆಚ್ಚು ದಾಖಲಾಗಿರುವ ರಂಗತಂಡಗಳಿಗೆ ಬೆರಳೆಣಿಕೆಯಷ್ಟು ರಂಗಮಂದಿರಗಳು, ಅದರಲ್ಲೂ ನಾಟಕಕ್ಕೆ ಬೇಕಾದ ವ್ಯವಸ್ಥೆ ಬಹುತೇಕ ರಂಗಮಂದಿರಗಳಲ್ಲಿ ಲಭ್ಯವಿಲ್ಲ. ಬಣ್ಣ ಹಚ್ಚಲು ಪಾತ್ರದಾರಿಗಳು ತಯಾರಾಗಿದ್ದಾರೆ, ಪ್ರೇಕ್ಷಕರು ಕೂಡ ನೋಡಲು ಸಿದ್ಧ ಆದರೆ ಎಲ್ಲಿ? ಅನ್ನೋದೇ ಯಕ್ಷ ಪ್ರಶ್ನೆ
ಕಳೆದ ವಾರ ಬೆಂಗಳೂರಿನ ಕೆ.ಎಚ್ ಕಲ ಸೌಧ ರಂಗಾಸಕ್ತರಿಗೆ ಹೊಸ ಗುತ್ತಿಗೆಗಾರರಾದ ಪ್ರಭಾತ್ Auditoriums ರ ಹೊಣೆಯಲ್ಲಿ ಪುನಃ ತನ್ನ ಮುಚ್ಚಿದ ಬಾಗಿಲನ್ನು ತೆರೆದಿತ್ತು. ಸುಮಾರು 40 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ, ಈ ಒಂದು ಸರ್ಕಾರಿ ರಂಗ ಮಂದಿರವನ್ನು ಜೀರ್ಣೋದ್ಧಾರ ಮಾಡಲು ಪ್ರಭಾತ್ ತಂಡದವರು ಒಂದು ತಿಂಗಳಿನಿಂದ ಸತತವಾಗಿ ಶ್ರಮಿಸಿದರು. ಮುರಿದು ಹೋದ ವೇದಿಕೆ ಇಂದ ಹಿಡಿದು, ಬಹುತೇಕ ರಂಗಮಂದಿರದ ಪರಿಕರಣಗಳನ್ನು ಬದಲಾಯಿಸಿ ಕಲಾವಿದರಲ್ಲಿ ಒಂದು ಹೊಸ ನಂಬಿಕೆಯನ್ನು ಸೃಷ್ಟಿ ಮಾಡಿದ್ದಾರೆ ಅಂದರೆ ತಪ್ಪಾಗಲಾರದು. ಈ ಜವಾಬ್ದಾರಿಯನ್ನು ಹೊತ್ತಿರುವ ಪ್ರಭಾತ್ ನ ವರ್ಷಿಣಿ, ಸ್ವತಃ ಓರ್ವ ರಂಗಭೂಮಿ ಕಲಾವಿದೆ. ಒಂದು ನಾಟಕ ವೇದಿಕೆ ಮೇಲೆ ಬರಬೇಕಾದರೆ ಕಲಾವಿದ ಪಡೋ ಕಷ್ಟ ಒಂದೆರಡಲ್ಲ, ಇದನ್ನು ಅರಿತಿರುವ ವರ್ಷಿಣಿ, "ಕೆ.ಹೆಚ್ ಕಲಾಸೌಧ ರಂಗಮಂದಿರವನ್ನು ರಂಗಭೂಮಿಯ ಕೇಂದ್ರ ಬಿಂದುವನ್ನಾಗಿ ಮಾಡೋ ಎಲ್ಲ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ" ಹೇಳಿದ್ದಾರೆ. ಇನ್ನು ಕಾಮಗಾರಿ ಪ್ರಗತಿಯಲ್ಲಿರುವಾಗ್ಲೇ ಹಲವಾರು ರಂಗತಂಡಗಳು ಈ ರಂಗಮಂದಿರವನ್ನ ತಮ್ಮ ನಾಟಕದ ಪ್ರದರ್ಶನಕ್ಕೆ ಕಾಯ್ದು ಇರಿಸಿದ್ದಾರೆ. 
ಇಂದು ಸಂತೋಷದ ವಿಷವಾದರೂ ಒಮ್ಮೆ ನಾವು ಈ ಸ್ಥಿತಿ ಗೆ ಬರಲು ಕರಣವನ್ನು ಹುಡುಕೋಣ, ಆಗಲೇ ಹೇಳಿದಂತೆ ಬೆಂಗಳೂರು ಇಂದಿಗೆ ರಂಗಭೂಮಿಯ ಕೇಂದ್ರ ಬಿಂದು, ಅದರಲ್ಲೂ ಹವ್ಯಾಸಿ ರಂಗತಂಡಗಳು ತಮ್ಮದೇ ಆದ ಶೈಲಿಯಲ್ಲಿ ರಂಗಸೇವೆಯನ್ನು ನಿರಂತರವಾಗಿ ಮಾಡುತ್ತಲೇ ಬರುತಿದ್ದಾರೆ. ನಮ್ಮ ಸರ್ಕಾರ ವಾರ್ಷಿಕ ಬಜೆಟ್ ನಲ್ಲಿ ಸುಮಾರು 60 ಕೋಟಿಗೂ ಹೆಚ್ಚು ಹಣವನ್ನು ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸಾಂಸ್ಕೃತಿಕ ಕಾಮಗಾರಿಗೆ ಮೀಸಲಿಟ್ಟಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವೆಬ್ ಸೈಟ್ ನಲ್ಲಿ ಇಂದಿಗೂ ಸುಮಾರು 100 ಕ್ಕೂ ಹೆಚ್ಚು ರಂಗಮಂದಿರಗಳ ಪಟ್ಟಿ ಲಭ್ಯವಿದೆ, ಬಡಾವಣೆಗೆ ಒಂದು ರಂಗಮಂದಿರ ಅನ್ನೋ ಕನಸನ್ನು ನಮ್ಮ ಹಿರಿಯರು ಕಂಡಿದ್ದೆನೋ ನಿಜ ಆದ್ರೆ ಇಡೀ ಊರಿಗೆ 5 ಕ್ಕಿಂತ ಹೆಚ್ಚು ರಂಗಮಂದಿರಗಳಿಲ್ಲ. 
ಸರ್ಕಾರದ ಅನೇಕ ರಂಗಮಂದಿರಗಳು ದಿಕ್ಕು ದೆಸೆ ಇಲ್ಲದೆ ಹೀನಾಯ ಪರಿಸ್ಥಿತಿಯಲ್ಲಿರುವುದು ನಮಗೆಲ್ಲರಿಗೂ ತಿಳಿದ ವಿಷಯ! ನೀವು ಈ ಪಾರ್ಕ್ ಗಳಲ್ಲಿ ಗಮನ ಹರಿಸಿದರೆ ನಿಮಗೆ ಹಲವಾರು ಬಯಲು ರಂಗಮಂದಿರಗಳು ಕಣ್ಣಿಗೆ ಬೀಳುತ್ತದೆ, ಬಡಾವಣೆ ರಂಗಭೂಮಿಗಾಗಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೀಮಿಗೆ ಉಪಯೋಗ ಬರಲಿ ಅಂತ ಕನಸು ಕಂಡು ಕಟ್ಟಿದ ಈ ಬಯಲು ರಂಗಮಂದಿರಗಳು ಇಂದಿಗೆ ಇಸ್ಪೀಟ್ ಅಡೋ ಅಡ್ಡೆಗಳಾಗಿವೆ ಅಷ್ಟೇ. 
ಇರೋ ರಂಗಮಂದಿರಗಳಲ್ಲಿ ಒಂದೆರಡರ ಶುಲ್ಕ ಕೇಳಿದ ಕೂಡಲೇ ಚಳಿ ಜ್ವರ ಬರೋದು ಖಚಿತ. ಚೌಡಯ್ಯ ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಬಾಡಿಗೆ ಇಂದಿಗೆ ಸುಮಾರು 1 ಲಕ್ಷ ಇದೆ.  ಬಿ.ಎಂ ಆರ್. ಸಿ. ಎಲ್ ರವರ ಎಂ. ಜಿ ರಸ್ತೆಯಲಿ ಇರುವ 8೦ ಜನರ ರಂಗೋಲಿ ಮೆಟ್ರೋ ಸೆಂಟರ್ ಸರ್ಕಾರಿ ರಂಗಮಂದಿರಕ್ಕೆ ಸುಮಾರು 8೦೦೦ ಸಾವಿರ ಬಾಡಿಗೆ ಇದೆ, ರವೀಂದ್ರ ಕಾಲಕ್ಷೇತ್ರ ದ ವ್ಯವಸ್ಥೆ ಚಿಂತಾಜನಕವಾಗಿದ್ದು ನಾಟಕಕ್ಕೆ ನೂರಾರು ಅಡಚಣೆಗಳು ಇರೋದು ಸತ್ಯದ ಅಂಶ, ಅಲ್ಲೇ ಪಕ್ಕದಲ್ಲಿರುವ Town Hall ನ ಶುಲ್ಕ 1 ಲಕ್ಷಕ್ಕೂ ಹೆಚ್ಚಿದೆ. ಇನ್ನು ಉಳಿದ ರಂಗಮಂದಿರಗಳಲ್ಲಿ ಬೇರೆ ಕಾರ್ಯಕ್ರಮಗಳೇ ಹೆಚ್ಚು, ನಾಟಕಕ್ಕೆ ಯಾವ ರೀತಿಯ ಮೀಸಲಾತಿಯೂ ಇಲ್ಲ. 
ಒಂದು ಸಮಾಜ ಒಬ್ಬ ಕಲಾವಿದನನ್ನು ಹುಟ್ಟು ಹಾಕುವುದಲ್ಲಿ  ಅತ್ಯಂತ  ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತೆ, ಕಲಾವಿದ ಸಮಾಜದ ಒಂದು ಬಿಂಬ! ಆ ಬಿಂಬದಲ್ಲಿ ತಾನು ಅನೇಕ ಸತ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡುತ್ತಾನೆ, ಆದರೆ ಆ ಸತ್ಯವನ್ನು ಹೇಳಲು ಅವನಿಗೆ ವೇದಿಕೆ ಇಲ್ಲವಾದರೆ, ಸಮಾಜದ ಒಂದು ಅಂಗವೇ ಮುರಿದು ಬಿದ್ದಂಗೆ.
-ಅಭಿಷೇಕ್ ಅಯ್ಯಂಗಾರ್
abhishek.iyengar@wemovetheatre.in

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com