ಬರದ ನಾಡಿಗೆ ಚಿನ್ನದ ಬೆಳೆಯಾದ 'ಶುಂಠಿ' ಕೃಷಿ

ವಿಶ್ವ ಪ್ರಸಿದ್ದ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಯ ಬಾದಾಮಿ ತಾಲೂಕು ಬಹುತೇಕ ಬರ ಪೀಡಿತ ಪ್ರದೇಶ. ಇಡೀ ಜಿಲ್ಲೆಯಲ್ಲಿಯೇ ಇಲ್ಲಿ ಅಂತರ್ಜಲ ಪ್ರಮಾಣ ತೀರಾ ಕೆಳಕ್ಕೆ ಇದೆ. ಇಂತಹ ಪ್ರದೇಶದಲ್ಲಿ ಮಲೆನಾಡಿನಲ್ಲಿ ಬೆಳೆಯೋ ಶುಂಠಿಯನ್ನು ಯಶಸ್ವಿಯಾಗಿ ಬೆಳೆಯುವ ಮೂಲಕ ಮತ್ತೊಂದು ವಾಣಿಜ್ಯ ಬೆಳೆ ಪರಿಚಯಿಸಿದ್ದಾರೆ.
ರೈತ ಗೋವಿಂದಪ್ಪ  ಹುಲ್ಲನ್ನವರ ಶುಂಠಿ ಬೆಳೆಗೆ ಕೀಟ ನಾಶಕ ಸಿಂಪಡಿಸುತ್ತಿರುವ ದೃಶ್ಯ.
ರೈತ ಗೋವಿಂದಪ್ಪ ಹುಲ್ಲನ್ನವರ ಶುಂಠಿ ಬೆಳೆಗೆ ಕೀಟ ನಾಶಕ ಸಿಂಪಡಿಸುತ್ತಿರುವ ದೃಶ್ಯ.
Updated on

ಬಾಗಲಕೋಟೆ: ವಿಶ್ವ ಪ್ರಸಿದ್ದ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಯ ಬಾದಾಮಿ ತಾಲೂಕು ಬಹುತೇಕ ಬರ ಪೀಡಿತ ಪ್ರದೇಶ. ಇಡೀ ಜಿಲ್ಲೆಯಲ್ಲಿಯೇ ಇಲ್ಲಿ ಅಂತರ್ಜಲ ಪ್ರಮಾಣ ತೀರಾ ಕೆಳಕ್ಕೆ ಇದೆ. ಇಂತಹ ಪ್ರದೇಶದಲ್ಲಿ ಮಲೆನಾಡಿನಲ್ಲಿ ಬೆಳೆಯೋ ಶುಂಠಿಯನ್ನು ಯಶಸ್ವಿಯಾಗಿ ಬೆಳೆಯುವ ಮೂಲಕ ಮತ್ತೊಂದು ವಾಣಿಜ್ಯ ಬೆಳೆ ಪರಿಚಯಿಸಿದ್ದಾರೆ.

ಶುಂಠಿ ಮಲೆನಾಡಿಯಲ್ಲಿ ಬೆಳೆಯೂ ಬೆಳೆಯಾಗಿದೆ. ಇಲ್ಲಿ ಅದನ್ನು ಬೆಳೆಯಲು ಸಾಧ್ಯವಿಲ್ಲ ಎನ್ನುವ  ಕೃಷಿ ಅಧಿಕಾರಿಗಳ ಮಾತನ್ನು ಹುಸಿಗೊಳಿಸಿ, ಕಡಿಮೆ ವೆಚ್ಚ, ಕಡಿಮೆ ನೀರಿನಲ್ಲಿ ಬಾದಾಮಿ ತಾಲೂಕು ಕೆಂಧೂರು ರೈತ ಗೋವಿಂದಪ್ಪ ಹುಲ್ಲಪ್ಪ ಹುಲ್ಲನ್ನವರ ಬೆಳೆದಿದ್ದಾರೆ. ಜತೆಗೆ ಮೆಣಸಿನ ಕಾಯಿಯನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ. ಕಳೆದ ವರ್ಷ ಒಂದು ಎಕರೆ ಶುಂಠಿ ಬೆಳೆಯಿಂದ ಬರೋಬ್ಬರಿ 4.80 ಲಕ್ಷ ರೂ. ಆದಾಯ ಗಳಿಸಿದ್ದು, ಪ್ರಸಕ್ತ ವರ್ಷ 6 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿಯಲ್ಲಿ ಶುಂಠಿ ಬೆಳೆದಿದ್ದು, 3೦ ಲಕ್ಷ ರೂ. ಆದಾಯದ ನಿರೀಕ್ಷೆ ಹೊಂದಿದ್ದಾರೆ.

ರೈತ ಹುಲ್ಲನ್ನವರ ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಕೃಷಿ ಸಾಧನೆ ಮಾಡುತ್ತಿದ್ದಾರೆ.  ಇವರ ಸಾಧನೆಯಿಂದ ಇತರ ರೈತರು ಉತ್ತೇಜಿತರಾಗಿ ತಮ್ಮ ಹೊಲಗಳಲ್ಲಿ ಶುಂಠಿ ಬೆಳೆಗೆ ಮನಸ್ಸು ಮಾಡಿದ್ದಾರೆ. ಹುಲ್ಲನ್ನವರ ಶುಂಠಿ ಬೆಳೆಯ ಹಿಂದೆ ರೋಚಕ ಕಥೆ ಇದೆ. ಸಾಂಪ್ರದಾಯಿಕ ಬೆಳೆಯಿಂದ ಲಾಭ ಬರದೇ ಇದ್ದಾಗ ಏನಾದರೂ ಬೇರೆ ಬೆಳೆ ಬೆಳೆಯಬೇಕು ಅಂತ ಯೋಚಿಸಿ ಅರಿಸಿಣ ಬೆಳೆ ಹಾಗೂ  ಶುಂಠಿ ಬೆಳೆ ಬಗ್ಗೆ ಮಾಹಿತಿ ಪಡೆಯೋಕೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಶ್ರೀಶೈಲ ಎಂಬುವರ ಬಳಿ ಅರಿಶಿಣ ಹಾಗೂ ಶುಂಠಿ ಬಗ್ಗೆ ಮಾಹಿತಿ ಪಡೆದು, ಅದ್ರಲ್ಲೂ ಶುಂಠಿ ಬೆಳೆಯೋಕೆ ನಿರ್ಧರಿಸಿ ವರ್ಷದ ಹಿಂದೆ ಪ್ರಾಯೋಗಿಕವಾಗಿ ಒಂದು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದಾರೆ. ಬೆಳೆಯಿಂದ ಉತ್ತಮ ಆದಾಯ ಪಡೆಯಬಹುದು ಎನ್ನುವುದನ್ನು ಮನಗಂಡ ಅವರು ಈಗ 6 ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದಾರೆ. ಶುಂಠಿಯನ್ನು ಜೋಡು ಸಾಲು ಪದ್ಧತಿಯಲ್ಲಿ ಕೇವಲ 80 ಸಾವಿರ ರೂ. ವೆಚ್ಚದಲ್ಲಿ ನಾಟಿ ಮಾಡಿದ್ದಾರೆ.

ಜಮೀನಿನಲ್ಲಿ ಎರಡು ಕೊಳವೆ ಬಾವಿಗಳಿದ್ದು, ಹನಿ ನೀರಾವರಿ ಪದ್ಧತಿ ಮೂಲಕ ಕಡಿಮೆ ನೀರಲ್ಲಿ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ಹಿಮಾಚಲ್ ಜವಾರಿ ಶುಂಠಿಯನ್ನು ಬೆಳೆಯುತ್ತಿರೋ ಗೋವಿಂದಪ್ಪ ಶುಂಠಿ ಬೆಳೆಗೆ  ರೋಗ,ಕೀಟ ಬಾಧೆ ಕಡಿಮೆ ಎಂದು ಹೇಳುವ ಜನತೆ ಕೆಲವೊಮ್ಮೆ ಕೊಳೆ ರೋಗ, ಥ್ರೀಪ್ಸ್ ಕಾಟ ತಪ್ಪಿಸಲು ಸಾವಯವ ಔಷಧಿ ಬಳಕೆ ಮಾಡುತ್ತಿದ್ದಾರೆ. ಯಶಸ್ವಿಯಾಗಿ ಬೆಳೆದ ಶುಂಠಿಗೆ ಉತ್ತಮ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದಾರೆ. 

ನೆರೆಯ ಜಿಲ್ಲೆಗಳಾದ ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಿಂದ ವ್ಯಾಪಾರಸ್ಥರು ಜಮೀನಿಗೆ ಬಂದು ಖರೀದಿಸುತ್ತಾರೆ. ಶುಂಠಿಯನ್ನು ಬೀಜವಾಗಿಯೂ ಮಾರಾಟ ಮಾಡುತ್ತಾರೆ. ಸುತ್ತಲಿನ ಗ್ರಾಮದ ರೈತರು ಶುಂಠಿ ಬೀಜ ಪಡೆದು ನಾಟಿ ಮಾಡಿಕೊಂಡಿದ್ದಾರೆ. ಅವರ ಜಮೀನಿಗೆ ಹೋಗಿಯೂ ಮಾರ್ಗದರ್ಶನ ಮಾಡುತ್ತಾರೆ. ಶುಂಠಿ ಕೃಷಿ ಈ ಭಾಗದ ರೈತರಿಗೆ ಪ್ರೇರಣೆಯಾಗಿದ್ದಾರೆ. ರೈತರು ಆರ್ಥಿಕವಾಗಿ ಸದೃಢರಾಗಲು ಶುಂಠಿ ಕೃಷಿ ಸಹಕಾರಿ ಆಗಿದ್ದು, ಕಡಿಮೆ ವೆಚ್ಚ ಹಾಗೂ ಅಧಿಕ ಲಾಭ ಪಡೆದುಕೊಳ್ಳಲು ಶುಂಠಿ ಬೆಳೆ ಉತ್ತಮ ಎನ್ನುವುದು ಕೆಂಧೂರು ಗ್ರಾಮದ ರೈತರ ಅಭಿಪ್ರಾಯವಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com