ಕೊರೋನಾ ಮಧ್ಯೆ 'ಸುರಕ್ಷಿತ ದೀಪಾವಳಿ' ಆಚರಣೆ ಹೀಗಿರಲಿ

ಕಾರ್ತಿಕ ಮಾಸದಲ್ಲಿ ದೀಪಗಳ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ವೈರಸ್ ಗೆ ಯಾವಾಗ ಲಸಿಕೆ ಬರುತ್ತದೆ, ಈ ಕೊರೋನಾ ಮಹಾಮಾರಿ ಯಾವಾಗ ದೂರವಾಗುತ್ತದೆ ಎಂಬ ಭಯ, ಆತಂಕಗಳ ನಡುವೆಯೇ ದೀಪಾವಳಿ ಹಬ್ಬದ ತಯಾರಿಗೆ ಜನರು ಇದಿರು ನೋಡುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಾರ್ತಿಕ ಮಾಸದಲ್ಲಿ ದೀಪಗಳ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ವೈರಸ್ ಗೆ ಯಾವಾಗ ಲಸಿಕೆ ಬರುತ್ತದೆ, ಈ ಕೊರೋನಾ ಮಹಾಮಾರಿ ಯಾವಾಗ ದೂರವಾಗುತ್ತದೆ ಎಂಬ ಭಯ, ಆತಂಕಗಳ ನಡುವೆಯೇ ದೀಪಾವಳಿ ಹಬ್ಬದ ತಯಾರಿಗೆ ಜನರು ಇದಿರು ನೋಡುತ್ತಿದ್ದಾರೆ.

ಈ ಬಾರಿ ದೀಪಾವಳಿ ಹಬ್ಬದ ಖರೀದಿಗೆ ಅಷ್ಟೊಂದು ಜನ ಸೇರುವ ಹಾಗಿಲ್ಲ, ದೀಪಾವಳಿ ಮೇಳಗಳು ಇಲ್ಲ, ಪಟಾಕಿಗಳ ಖರೀದಿ ಜೋರಾಗಿಲ್ಲ. ಮನೆಯಲ್ಲಿಯೇ ಸಣ್ಣ ರೀತಿಯಲ್ಲಿ ದೀಪಾವಳಿ ಆಚರಿಸಲು ಜನರು ಮುಂದಾಗಿದ್ದಾರೆ. 

ಹಬ್ಬ ಎಂದು ಹೊರಗೆ ಹೋಗಲಾಗುವುದಿಲ್ಲ, ನೆಂಟರಿಷ್ಟರು, ಬಂಧುಗಳು, ಸ್ನೇಹಿತರನ್ನು ಹೆಚ್ಚಾಗಿ ಮನೆಗೆ ಕರೆಯಲಾಗುವುದಿಲ್ಲ ಎಂದು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಮನೆಯಲ್ಲಿಯೇ ಸರಳ, ಸುಂದರ ಹಬ್ಬವನ್ನು ಅಚ್ಚುಕಟ್ಟಾಗಿ ಆಚರಿಸಿಕೊಳ್ಳಬಹುದು. 

ಅತಿಥಿಗಳನ್ನು ಕರೆಯುವ ಸಂಖ್ಯೆ ಸೀಮಿತವಾಗಿರಲಿ: ದೀಪಾವಳಿ, ಹಬ್ಬ ಎಂದು ಹತ್ತಕ್ಕಿಂತ ಹೆಚ್ಚು ಮಂದಿಯನ್ನು ಸೇರಿಸುವುದು ಬೇಡ ಎನ್ನುತ್ತಾರೆ ಆಸ್ಟರ್ ಆರ್ ವಿ ಆಸ್ಪತ್ರೆಯ ಡಾ ಎಸ್ ಎನ್ ಅರವಿಂದ. ಅತಿಥಿಗಳ ಮನೆಗೆ ಹೋಗಿ ಜಾಸ್ತಿ ಸಮಯ ಇರುವುದು ಬೇಡ. ದೀಪಾವಳಿ ಪಾರ್ಟಿ ಮಾಡುವುದಿದ್ದರೆ 2ರಿಂದ ಎರಡೂವರೆ ಗಂಟೆಯೊಳಗೆ ಮುಗಿದುಬಿಡಬೇಕು. ಅತಿಥಿಗಳ ಜೊತೆ ಸಾಧ್ಯವಾದಷ್ಟು ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಒಟ್ಟಿಗೆ ಕುಳಿತು 20 ನಿಮಿಷಕ್ಕಿಂತ ಜಾಸ್ತಿ ಸಮಯ ಕಳೆಯಬೇಡಿ.

ಹೊರಾಂಗಣ ಮತ್ತು ಉತ್ತಮ ಗಾಳಿ ಬೆಳಕು ಬರುವ ಪ್ರದೇಶಗಳಲ್ಲಿ ಅಡ್ಡಾಡಿ. ಪಾರ್ಟಿಗಳನ್ನು ಮಾಡುವುದಿದ್ದರೆ ಗಾರ್ಡನ್, ಟೆರೇಸ್, ಬಾಲ್ಕನಿ ಮೇಲೆ ಮಾಡಿ. ನೆಲದ ಹಾಸುಗಳೊಂದಿಗೆ ಕಾರ್ಪೆಟ್ ಗಳನ್ನು ಬಳಸಿ.

ಹೊರಾಂಗಣ ಮತ್ತು ಉತ್ತಮ ಗಾಳಿ ಬೆಳಕು ಆಡುವ ಪ್ರದೇಶಗಳು ಇಂದಿನ ಪರಿಸ್ಥಿತಿಗೆ ಅನುಕೂಲವಾಗಿದ್ದು ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಅನುಕೂಲವಾಗುತ್ತದೆ. 

ಕೆಳಗೆ ಕುಳಿತುಕೊಳ್ಳುವುದು ಇತ್ತೀಚೆಗೆ ಟ್ರೆಂಡ್ ಜಾಸ್ತಿಯಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಇದು ಮುಖ್ಯ. ಮನೆಯಲ್ಲಿ ಈ ವರ್ಷ ದೀಪಾವಳಿಗೆ ಪಾರ್ಟಿ ಮಾಡುವವರು ಇವುಗಳೆಲ್ಲವನ್ನೂ ನೋಡಿಕೊಳ್ಳಿ. 

ಮನೆಯಲ್ಲಿರುವ ಸೋಫಾ, ಬಟ್ಟೆ, ಜಮಖಾನೆ, ರಗ್ಗು ಇವುಗಳೆಲ್ಲವನ್ನೂ ಸ್ವಚ್ಛವಾಗಿ ನೋಡಿಕೊಳ್ಳಿ. ಮಾಡುವ ತಿನಿಸುಗಳಲ್ಲಿ ತುಪ್ಪ, ಕಿತ್ತಳೆ, ನಿಂಬೆಹಣ್ಣು, ಕಾಳುಮೆಣಸು ಇರಲಿ. ಇವು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಅತಿಥಿಗಳಿಗೆ ಆಹಾರ ಬಡಿಸುವವರು ಕೈಗೆ ಗ್ಲೌಸ್, ಬಾಯಿಗೆ ಮಾಸ್ಕ್ ಧರಿಸಿಕೊಳ್ಳಿ.

ಮನೆಗೆ ಬರುವ ಅತಿಥಿಗಳಿಗೆ ಸ್ಟೀಲ್ ಅಥವಾ ಬೇರೆ ಪಾತ್ರೆಗಳಲ್ಲಿ ನೀಡುವ ಬದಲು ಒಂದು ಬಾರಿ ಬಳಸಿ ಬಿಸಾಕುವ ವಸ್ತುಗಳನ್ನು ಬಳಸಿದರೆ ಉತ್ತಮ, ಅವುಗಳ ವಿಲೇವಾರಿಯೂ ಸಮರ್ಪಕವಾಗಿರಲಿ. ಮನೆಗೆ ಬಂದಿರುವವರಿಗೆ ಆಹಾರ ಪ್ಯಾಕ್ ಮಾಡಿ ಅವರ ಮನೆಗೆ ಕಳುಹಿಸಿದರೆ ಇನ್ನೂ ಉತ್ತಮ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಮುಖ್ಯ ಡಯಟಿಷಿಯನ್ ಪವಿತ್ರ ಎನ್ ರಾಜ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com