ನೆಲ್ಲೂರು: ಕಷ್ಟಕಾಲದಲ್ಲಿ ಅಸಹಾಯಕರಿಗೆ, ನಿರ್ಗತಿಕರಿಗೆ ನೆರವಾಗುವುದು ಮಾನವಶ್ರೇಷ್ಠ ಗುಣ. ಮಾನವೀಯತೆ ಎಂದು ಕರೆಯುವುದು ಅದನ್ನೇ. ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪೀಡಿತ ಪ್ರದೇಶಕ್ಕೆ ದೇಶದ ಮೂಲೆ ಮೂಲೆಗಳಿಂದ ನೆರವು ಹರಿದುಬರುತ್ತದೆ. ಆಹಾರ ಪದಾರ್ಥಗಳಿಂದ, ದಿನಬಳಕೆಯ ವಸ್ತುಗಳ ತನಕ ವಸ್ತುಗಳು ಸರಬರಾಜಾಗುತ್ತವೆ.
ಅದೇನೋ ಸರಿ, ಆಂದ್ರಪ್ರದೇಶದ ನೆಲ್ಲೂರಿನ ದಂಪತಿ ಅದಕ್ಕೂ ಮಿಗಿಲಾದ ಸೇವೆಯಲ್ಲಿ ನಿರತರಾಗಿದ್ದಾರೆ. ಮೂಕ ಪ್ರಾಣಿಗಳ ಹೊಟ್ಟೆ ತಣಿಸುವ ಪುಣ್ಯಕಾರ್ಯದಲ್ಲಿ ವಿಜಯ್- ರಾಜ್ಯಲಕ್ಷ್ಮಿ ದಂಪತಿ ದಶಕಗಳಿಂದ ತೊಡಗಿದ್ದಾರೆ.
ಕೇಬಲ್ ಆಪರೇಟರ್ ಆಗಿರುವ ವಿಜಯ್ ಪ್ರತಿದಿನ 500 ರೂ.ಗಳನ್ನು ಪ್ರಾಣಿಗಳ ಹೊಟ್ಟೆ ತುಂಬಿಸಲು ವ್ಯಯ ಮಾಡುತ್ತಿದ್ದಾರೆ. 17 ವರ್ಷದ ಪುತ್ರಿ ಕೂಡಾ ಅವರಿಗೆ ನೆರವು ನೀಡುತ್ತಾರೆ. ಹೀಗೆೀ ಕುಟುಂಬ ಮೂಕಪ್ರಾಣಿಗಳಿಗೆ ತಮ್ಮ ಕೈಲಾದಷ್ಟು ಆಹಾರ ಒದಗಿಸುವ ಮಹತ್ ಕಾರ್ಯದಲ್ಲಿ ತೊಡಗಿದೆ. ಊಟದ ಮೆನು ಪಾರ್ಲೆ ಜಿ ಬಿಸ್ಕತ್ತಿನಿಂದ ಶುರುವಾಗಿ, ಹುಲ್ಲು, ಚಿಕನ್ ಕರ್ರಿ ತನಕ ವೈವಿಧ್ಯಮಯ ಎನ್ನುವುದು ಕುತೂಹಲದ ಸಂಗತಿ.
ನಾಯಿ, ದನಗಳು, ಪಕ್ಷಿಗಳು, ಕೋತಿ ಹೀಗೆ ಬೀದಿಯಲ್ಲಿ ಕಂಡು ಬರುವ ಪ್ರಾಣಿಗಳಿ ಈ ದಂಪತಿಗಳ ಕೈರುಚಿಯನ್ನು ಸವಿದಿವೆ. ಹಬ್ಬ ಹರಿದಿನಗಳಾಗಲಿ, ಶುಭ ದಿನಗಳ ಸಮಯದಲ್ಲೇ ಅಗಲಿ ಒಂದಷ್ಟು ಮಂದಿಗೆ ಮನೆಯೂಟ ಬಡಿಸಿದರೆ ನಾವು ಸಂತೃಪ್ತರಾಗುತ್ತೇವೆ. ಅಂಥದ್ದರಲ್ಲಿ ವಿಜಯ್- ರಾಜ್ಯಲಕ್ಷ್ಮಿ ದಂಪತಿ ಪ್ರತಿನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ.
ಈ ಗುಣ ಎಲ್ಲಿಂದ ಬಂತು ಎಂದು ಕೇಳಿದಾಗ ವಿಜಯ್ ಅವರ ತಂದೆಯನ್ನು ನೆನೆಯುತ್ತಾರೆ. ಅವರು ಬದುಕಿದ್ದಷ್ಟೂ ದಿನ ಬೀದಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಅದನ್ನು ತಾವು ಮುಂದುವರಿಸಿಕೊಂಡು ಬರುತ್ತಿರುವುದಾಗಿ ವಿಜಯ್ ಭಾವುಕರಾಗುತ್ತಾರೆ. ಈ ಕೆಲಸದಿಂದ ಮನಸ್ಸಿಗೆ ಸಂತೃಪ್ತಿ ದೊರೆಯುತ್ತದೆ ಎನ್ನುವುದು ದಂಪತಿಯ ಅಭಿಪ್ರಾಯ.
Advertisement