ವಿಭಜನೆಯಲ್ಲಿ ಬೇರ್ಪಟ್ಟಿದ್ದ ಮುಸ್ಲಿಂ ಸಹೋದರಿಯನ್ನು ಕರ್ತಾರ್ ಪುರದಲ್ಲಿ ಭೇಟಿಯಾದ ಭಾರತೀಯ ಸಿಖ್!

ದೇಶ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಸಹೋದರ-ಸಹೋದರಿಯರು 75 ವರ್ಷಗಳ ನಂತರ ಭೇಟಿಯಾದ ಅವಿಸ್ಮರಣೀಯ ಘಟನೆಗೆ ಕರ್ತಾರ್ ಪುರ ಇಂದು ಸಾಕ್ಷಿಯಾಯಿತು. 
ಕರ್ತಾರ್ ಪುರದಲ್ಲಿ ಭೇಟಿಯಾದ ಸಹೋದರ-ಸಹೋದರಿ
ಕರ್ತಾರ್ ಪುರದಲ್ಲಿ ಭೇಟಿಯಾದ ಸಹೋದರ-ಸಹೋದರಿ

ಕರ್ತಾರ್ಪುರ: ದೇಶ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಸಹೋದರ-ಸಹೋದರಿಯರು 75 ವರ್ಷಗಳ ನಂತರ ಭೇಟಿಯಾದ ಅವಿಸ್ಮರಣೀಯ ಘಟನೆಗೆ ಕರ್ತಾರ್ ಪುರ ಇಂದು ಸಾಕ್ಷಿಯಾಯಿತು. 

ಜಲಂಧರ್ ನ ಸಿಖ್ ಸಮುದಾಯದ ವ್ಯಕ್ತಿ ಅಮರ್ಜಿತ್ ಸಿಂಗ್ ದೇಶ ವಿಭಜನೆಯ ಸಂದರ್ಭದಲ್ಲಿ ತನ್ನ ಸಹೋದರಿ, ಪೋಷಕರು, ಕುಟುಂಬದಿಂದ ದೇಶ ವಿಭಜನೆಯ ಸಂದರ್ಭದಲ್ಲಿ ದೂರವಾಗಿದ್ದರು.

ಅಮರ್ಜಿತ್ ಸಿಂಗ್ ಅವರ ಮುಸ್ಲಿಂ ಪೋಷಕರು ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದರು, ಆದರೆ ಸಿಂಗ್ ಮತ್ತು ಅವರ ಮತ್ತೋರ್ವ ಸಹೋದರಿ ಮಾತ್ರ ಭಾರತದಲ್ಲೇ ಉಳಿದರು.

ಇದಾದ 75 ವರ್ಷಗಳ ಬಳಿಕ ಕಳೆದುಹೋಗಿದ್ದ ಸಹೋದರಿ ಕುಲ್ಸೂಮ್ ಅಖ್ತರ್ ನ್ನು ಅಮರ್ಜಿತ್ ಸಿಂಗ್ ಪುನಃ ಪಾಕಿಸ್ತಾನದ ಪಂಜಾಬ್ ನಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ನಲ್ಲಿ ಭೇಟಿಯಾಗಿ ಭಾವುಕರಾದರು.

ವೀಸಾ ಪಡೆದು ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿದ ಸಿಂಗ್ ಅವರನ್ನು ಕಂಡೊಡನೆಯೇ ಕುಲ್ಸೂಮ್ ಸಂತಸಕ್ಕೆ ಮಿತಿಯೇ ಇರಲಿಲ್ಲ!.

ಭೇಟಿಯಾಗಿ ಆಲಿಂಗಿಸಿಕೊಂಡ ಸಹೋದರ-ಸಹೋದರಿಯರು ಹಲವು ಕ್ಷಣಗಳು ಕಣ್ಣೀರಾಗಿದ್ದರು. ಫೈಸಲಾಬಾದ್ ನಿಂದ ಬಂದಿದ್ದ ಕುಲ್ಸೂಮ್ ಅವರೊಂದಿಗೆ ಅವರ ಪುತ್ರ ಹಾಗೂ ಇತರ ಕುಟುಂಬ ಸದಸ್ಯರು ಇದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿರುವ ಕುಲ್ಸೂಮ್, 1947 ರಲ್ಲಿ ತನ್ನ ಪೋಷಕರು ಜಲಂಧರ್ ನ ಪಟ್ಟಣವೊಂದರಿಂದ ಪಾಕಿಸ್ತಾನಕ್ಕೆ ವಲಸೆ ಹೋದರು. ಅಂದಿನ ಪರಿಸ್ಥಿತಿಯಲ್ಲಿ ತನ್ನ ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಭಾರತದಲ್ಲೇ ಉಳಿದರು.  ಕುಲ್ಸೂಮ್ ಹೇಳುವ ಪ್ರಕಾರ ಆಕೆ ಹುಟ್ಟಿದ್ದು ಪಾಕಿಸ್ತಾನದಲ್ಲೇ ಆದರೂ ತನ್ನ ತಾಯಿ, ಭಾರತದಲ್ಲಿ ದೂರವಾಗಿದ್ದ ಮಕ್ಕಳ ಬಗ್ಗೆ ಭಾವುಕರಾಗಿ ಆಗಾಗ್ಗೆ ಹೇಳುತ್ತಿದ್ದುದ್ದನ್ನು ಕೇಳಿದ್ದೆ. ತಾನು ತನ್ನ ಸಹೋದರ ಹಾಗೂ ಸಹೋದರಿಯನ್ನು ಮತ್ತೊಮ್ಮೆ ಭೇಟಿ ಮಾಡುತ್ತೇನೆ ಎಂದುಕೊಂಡಿರಲಿಲ್ಲವಂತೆ.

ಆದರೆ ಕೆಲವು ವರ್ಷಗಳ ಹಿಂದೆ, ಕುಲ್ಸೂಮ್ ತಂದೆಯ ಸ್ನೇಹಿತ ಸರ್ದಾರ್ ದಾರಾ ಸಿಂಗ್ ಎಂಬುವವರು ಭಾರತದಿಂದ ಪಾಕಿಸ್ತಾನಕ್ಕೆ ಬಂದಿದ್ದರು. ಆಗ ತಮ್ಮನ್ನೂ ಭೇಟಿ ಮಾಡಿದ್ದರು. ಈ ವೇಳೆ ಕುಲ್ಸೂಮ್ ತಾಯಿ ತನ್ನ ಕಳೆದುಹೋದ ಮಕ್ಕಳ ಬಗ್ಗೆ ಮಾತನಾಡಿದ್ದರು. ತಾವು ಭಾರತದಲ್ಲಿದ್ದಾಗ ವಾಸಿಸುತ್ತಿದ್ದ ಸ್ಥಳದ ಹೆಸರು, ಗ್ರಾಮದ ವಿವರಗಳನ್ನು ನೀಡಿದ್ದರು.

ಸರ್ದಾರ್ ಸಿಂಗ್ ಎಂಬುವವರು ವಿವರಗಳನ್ನು ಪಡೆದು ಪಡವಾನ್ ಗ್ರಾಮದಲ್ಲಿ ಪರಿಶೀಲಿಸಿದಾಗ ಕುಲ್ಸೂಮ್ ಸಹೋದರ ಜೀವಂತವಾಗಿದ್ದು, ಆಕೆಯ ಮತ್ತೋರ್ವ ಸಹೋದರಿ ಮೃತಪಟ್ಟಿದ್ದಳೆಂದು ತಿಳಿಯಿತು. ಈ ನಡುವೆ ಪೋಷಕರನ್ನು ಕಳೆದುಕೊಂಡಿದ್ದ ಆ ಬಾಲಕನನ್ನು 1947 ರಲ್ಲಿ ಸಿಖ್ ಸಮುದಾಯವೊಂದು ದತ್ತು ಪಡೆದಿತ್ತು ಹಾಗೂ ಆತನಿಗೆ ಅಮರ್ಜಿತ್ ಸಿಂಗ್ ಎಂದು ಮರುನಾಮಕರಣ ಮಾಡಲಾಗಿತ್ತು. ಸಹೋದರನ ಬಗ್ಗೆ ಮಾಹಿತಿ ಪಡೆದ ಕುಲ್ಸೂಮ್ ಆತನೊಂದಿಗೆ ವಾಟ್ಸ್ ಆಪ್ ಮೂಲಕ ಸಂಪರ್ಕ ಸಾಧಿಸಿ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದರು.

ಇದು ಇಬ್ಭಾಗದ ಗೊಂದಲಗಳಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳನ್ನು ಕರ್ತಾರ್ ಪುರ ಬೆಸೆಯುತ್ತಿರುವ ಮೊದಲ ಪ್ರಕರಣವಲ್ಲ. ಸಿಖ್ ಸಮುದಾಯದಲ್ಲಿ ಹುಟ್ಟಿದ್ದ ಬಾಲಕಿಯೊಬ್ಬಳನ್ನು ಮುಸ್ಲಿಂ ದಂಪತಿಗಳು ದತ್ತು ಸ್ವೀಕರಿಸಿ ಬೆಳೆಸಿದ್ದರು. ಈ ರೀತಿ ಬೆಳೆದಿದ್ದ ಆ ಮಹಿಳೆ, ಭಾರತದಲ್ಲಿದ್ದ ತನ್ನ ಸಹೋದರರನ್ನು ಮೇ ತಿಂಗಳಲ್ಲಿ ಭೇಟಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com