ಸಾತ್ವಿಕ ಆಹಾರ, ಕಣ್ಣಿಗೆ ಗಾಯ... ಸವಾಲುಗಳನ್ನು ಎದುರಿಸಿ ರಾಮ್ ಲಲ್ಲಾ ವಿಗ್ರಹ ತಯಾರಿಸಿ ಯಶಸ್ವಿಯಾದ ಶಿಲ್ಪಿ ಅರುಣ್ ಯೋಗಿರಾಜ್!

ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಇನ್ನು ಉಳಿದಿರುವುದು ಕೇವಲ ಎರಡು ದಿನ. ಅಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದು, ರಾಮಲಲ್ಲಾ ಮೂರ್ತಿಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಎಲ್ಲಿ ನೋಡಿದರೂ ಈಗ ಬಾಲ ರಾಮನ ವಿಗ್ರಹದ ಫೋಟೋ ಓಡಾಡುತ್ತಿದೆ.
ಶಿಲ್ಪಿ ಅರುಣ್ ಯೋಗಿರಾಜ್, ರಾಮ್ ಲಲ್ಲಾ ವಿಗ್ರಹ
ಶಿಲ್ಪಿ ಅರುಣ್ ಯೋಗಿರಾಜ್, ರಾಮ್ ಲಲ್ಲಾ ವಿಗ್ರಹ

ಮೈಸೂರು: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಇನ್ನು ಉಳಿದಿರುವುದು ಕೇವಲ ಎರಡು ದಿನ. ಅಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದು, ರಾಮಲಲ್ಲಾ ಮೂರ್ತಿಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಎಲ್ಲಿ ನೋಡಿದರೂ ಈಗ ಬಾಲ ರಾಮನ ವಿಗ್ರಹದ ಫೋಟೋ ಓಡಾಡುತ್ತಿದೆ.

ಈ ರಾಮಲಲ್ಲಾ ವಿಗ್ರಹದ ಸೃಷ್ಟಿಕರ್ತ ಮೈಸೂರಿನ ಅರುಣ್ ಯೋಗಿರಾಜ್ ಬಗ್ಗೆ ಇಲ್ಲಿ ಮಾತನಾಡಲೇಬೇಕು. ಮೂರ್ತಿ ತಯಾರಿಸಲು ಅವರ ಪೂರ್ವ ಸಿದ್ಧತೆ, ಮೂರ್ತಿ ಕೆತ್ತನೆ ವೇಳೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ದೇವರ ಮೂರ್ತಿ ತಯಾರಿಸುವುದೆಂದರೆ ಸಾಕ್ಷಾತ್ ದೇವರ ಪೂಜೆ ಮಾಡಿದಂತೆ ಎಂದು ನಂಬಿದ್ದ ಅವರು ಕಟ್ಟುನಿಟ್ಟಾಗಿ ಸಾತ್ವಿಕ ಆಹಾರವನ್ನು ಸೇವಿಸುತ್ತಿದ್ದರು. ಮೂರ್ತಿ ಕೆತ್ತನೆ ವೇಳೆ ಅವರ ಕಣ್ಣಿಗೆ ಸಹ ತೊಂದರೆಯಾಗಿತ್ತಂತೆ. ಎಲ್ಲಾ ಅಡೆತಡೆ, ಸವಾಲುಗಳನ್ನು ಎದುರಿಸಿ ಇಂದು ಇಡೀ ದೇಶವೇ ಅವರನ್ನು ಕೊಂಡಾಡುವಂತೆ ನಿಂತಿದ್ದಾರೆ. 

ಆರಂಭದಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಕೆತ್ತಬೇಕು ಎಂದು ನಿರ್ಧಾರವಾದಾಗ ಆಯ್ಕೆಯಾದ ಮೂವರು ಶಿಲ್ಪಿಗಳಲ್ಲಿ ಯೋಗಿರಾಜ್ ಒಬ್ಬರು. ಯೋಗಿರಾಜ್ ಯಾವ ಮಟ್ಟಿನಲ್ಲಿ ಕೆಲಸಕ್ಕೆ ಬದ್ಧರಾಗಿದ್ದರೆಂದರೆ ಅಯೋಧ್ಯೆಯಲ್ಲಿ "ಪರಿಪೂರ್ಣ ವಿಗ್ರಹ" ದ ಕೆಲಸವನ್ನು ಪೂರ್ಣಗೊಳಿಸುವವರೆಗೆ (ಸುಮಾರು ಆರು ತಿಂಗಳವರೆಗೆ) ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿರಲಿಲ್ಲ. 

ಅಯೋಧ್ಯೆಯಲ್ಲಿ, ಯೋಗಿರಾಜ್ ಅವರು ತಮ್ಮ ಊರ ದೇವತೆಗೆ ಪೂಜೆ ಮಾಡುವುದರೊಂದಿಗೆ ದಿನಚರಿ ಆರಂಭಿಸುತ್ತಿದ್ದರು. ಅಲ್ಲಿನ ಪಂಡಿತರು ಪ್ರಾರ್ಥನೆ, ಪೂಜೆ, ಆಚರಣೆಗಳನ್ನು ಮಾಡುತ್ತಿದ್ದಾಗ ಅದರಲ್ಲಿ ಭಾಗವಹಿಸುತ್ತಿದ್ದರು. ಪಂಡಿತರು ಹೇಳುತ್ತಿದ್ದ ರಾಮ ಕಥೆಗಳು ವಿಗ್ರಹದ ಬಗ್ಗೆ ಕಲ್ಪನೆ ಮಾಡಿಕೊಂಡು ಕೆತ್ತಲು ಅವರಿಗೆ ಸಾಕಷ್ಟು ಸಹಾಯ ಮಾಡುತ್ತಿತ್ತು. 

“ವಿಗ್ರಹವನ್ನು ಕೆತ್ತುತ್ತಿರುವಾಗ, ಒಂದು ಸಣ್ಣ ಕಲ್ಲಿನ ತುಂಡು ಅವರ ಕಣ್ಣಿನೊಳಗೆ ಕಾರ್ನಿಯಾವನ್ನು ಚುಚ್ಚಿದಾಗ ಕಣ್ಣು ದೃಷ್ಟಿಯೇ ಕಳೆದುಕೊಳ್ಳುತ್ತಾರೆ ಎಂದು ಅವರಿಗೆ ಭಾಸವಾಗಿತ್ತು. ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಹೆಚ್ಚಿನ ಅನಾಹುತದಿಂದ ಬಚಾವಾದರು. ಕೆಲವು ದಿನಗಳವರೆಗೆ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದರು. ಆದರೂ ತಮ್ಮ ಗುರಿಯೆಡೆಗೆ ಕೆಲಸ ನಿಲ್ಲಿಸಿರಲಿಲ್ಲ ಎಂದು ಯೋಗಿರಾಜ್ ಅವರ ಪತ್ನಿ ವಿಜೇತಾ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. 

ಎಂಬಿಎ ಪದವೀಧರರಾದ ಯೋಗಿರಾಜ್ ಅವರು ಕಾಯಕದಲ್ಲಿ ತಮ್ಮ ಪೂರ್ವಿಕರನ್ನು ಅನುಸರಿಸಿದರು. ಈಗ ಪೂರ್ಣಕಾಲಿಕ ಶಿಲ್ಪಿಯಾಗಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ರಾಮ್ ಲಲ್ಲಾವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಿದ ನಂತರ, ನಿಮಗೆ ಎಷ್ಟು ಸಂತೋಷವಾಗಿದೆ ಎಂದು ಕೇಳಿದರೆ ಯೋಗಿರಾಜ್ ಅವರು ತಮ್ಮ ಕೆಲಸದಿಂದ ಜನರು ಸಂತೋಷಪಟ್ಟರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ ಎನ್ನುತ್ತಾರೆ.ಆದರೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಬಾಲ ರಾಮನ ವಿಗ್ರಹದ ಫೋಟೋ ವೈರಲ್ ಆಗಿರುವುದಕ್ಕೆ ಅವರಿಗೆ ಬೇಸರವಿದೆ. 

ಮೈಸೂರು ಜಿಲ್ಲೆಯ ಗುಜ್ಜೆಗೌಡನ ಪುರದಲ್ಲಿರುವ ಕ್ವಾರಿಯಿಂದ ತೆಗೆದ ಕಲ್ಲಿನ ಬ್ಲಾಕ್‌ನಿಂದ ವಿಗ್ರಹವನ್ನು ಕೆತ್ತಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಯುಜಿಸಿ-ವಿಶ್ರಾಂತ ಪ್ರಾಧ್ಯಾಪಕ (ನಿವೃತ್ತ) ಡಾ ಸಿ ಶ್ರೀಕಂಠಪ್ಪ ಅವರ ಪ್ರಕಾರ ಇದು ದಕ್ಷಿಣ ಭಾರತದಲ್ಲಿ ಕಂಡುಬರುವ ಅತ್ಯಂತ ಹಳೆಯ ಬಂಡೆಯಾಗಿದೆ.

ಈ ಬ್ಲಾಕ್ ತನ್ನ ಬೇರುಗಳನ್ನು ಮೇಲ್ಭಾಗದ ಮ್ಯಾಂಟ್ಲೆರಿಜಿನ್‌ನ ಪ್ಲುಟೋನಿಕ್ ಅಗ್ನಿಶಿಲೆಯಲ್ಲಿ ಹೊಂದಿದೆ ಎನ್ನುತ್ತಾರೆ ಅವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com