ಪೂರ್ಣಿಮಾ
ಪೂರ್ಣಿಮಾ

Women's day special: ಒಂದು ಕಾಲದಲ್ಲಿ ಜೀತದಾಳು-ಇಂದು ಯಶಸ್ವಿ ಉದ್ಯಮಿಯಾದ ಪೂರ್ಣಿಮಾ ಬದುಕಿನ ಕಥೆ...

Published on

ಬೆಂಗಳೂರು: ಈ ಮಹಿಳೆಯ ಬದುಕು ಕಷ್ಟದಿಂದ ಹೇಗೆ ಮಹಿಳೆಯರು ಪಾರು ಆಗಿ ಬರಬೇಕು, ಬಂದ ನಂತರ ಬದುಕು ಹೇಗೆ ಕಟ್ಟಿಕೊಳ್ಳಬೇಕು, ಮನಸ್ಸಿನಲ್ಲಿ ನಿರಂತರ ಹಠ, ಛಲ ಇದ್ದರೆ ಮಹಿಳೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ.

ಒಂದು ದಿನ ಬಿಸಿಲ ಝಳದಲ್ಲಿ ಕೆಲಸ ಮುಗಿಸಿ ಸಾಯಂಕಾಲ ಪೂರ್ಣಿಮಾ ಮತ್ತು ಅವರ ಪತಿ ಕೈಯಲ್ಲಿ ಹಣ ಎಣಿಸುತ್ತಾ ತಾವು ಹಿಂದೆ ನಾಲ್ಕು ವರ್ಷಗಳ ಕಾಲ ಕೇವಲ 20,000 ರೂಪಾಯಿ ಸಾಲಕ್ಕಾಗಿ ಜೀತದಾಳುಗಳಾಗಿ ದುಡಿಯುತ್ತಿದ್ದ ವೇಳೆ ಪಟ್ಟ ಕಷ್ಟವನ್ನು ನೆನದು ಕಣ್ಣೀರು ಹಾಕಿದರು.

ಪೂರ್ಣಿಮಾಗೆ ಮದುವೆಯಾದಾಗ ಕೇವಲ 16 ವರ್ಷ. ಮೂಲತಃ ರಾಮನಗರ ಜಿಲ್ಲೆಯವರು. ಮದುವೆಯಾದ ಒಂದು ತಿಂಗಳ ನಂತರ ಪೂರ್ಣಿಮಾಗೆ ಬದುಕಿನ ಕರಾಳ ರೂಪ ಪರಿಚಯವಾಯಿತು. ತನ್ನ ಪತಿ ಮಾರಪ್ಪ ಮದುವೆಗಾಗಿ ಮಾಡಿದ್ದ ಸಾಲವನ್ನು ತೀರಿಸಲು ಪ್ರತಿದಿನ ಬೆಳಗ್ಗೆ 5.30 ರಿಂದ ಸಾಯಂಕಾಲ 7 ಗಂಟೆಯವರೆಗೆ ಇಟ್ಟಿಗೆ ತಯಾರಿಸುವಲ್ಲಿ ಕಾರ್ಖಾನೆಯಲ್ಲಿ ಜೀತದಾಳಾಗಿ ದುಡಿಯಬೇಕಾಗಿತ್ತು.

ಪೂರ್ಣಿಮಾ
ಮಹಿಳಾ ದಿನಾಚರಣೆ: 'ಪವರ್ ಸ್ಟಾರ್' ಪವರ್ ಪುಲ್ ಸಂದೇಶ - ವಿಡಿಯೋ

ನಾಲ್ಕು ವರ್ಷಕ್ಕೂ ಅಧಿಕ ಕಾಲ, ಪೂರ್ಣಿಮಾ ಮತ್ತು ಆಕೆಯ ಪತಿ ಅಲ್ಲಿಯೇ ಒಂಬತ್ತು ಮಂದಿ ಇತರ ಪುರುಷರು ಮತ್ತು ಐದು ಮಹಿಳೆಯರೊಂದಿಗೆ ಗೂಡು ಪಕ್ಕದ ಶೆಡ್‌ಗಳಲ್ಲಿ ವಾಸಿಸುತ್ತಿದ್ದರು. ಇಬ್ಬರೂ ದಿನವಿಡೀ ಅಲ್ಲಿ ಇಟ್ಟಿಗೆ ಮಾಡುವ ಕೆಲಸದಲ್ಲಿ ನಿರತರಾಗಿದ್ದರೂ ಅಲ್ಲಿನ ಮಾಲೀಕ ಬೇರೆ ಬೇರೆ ಮಾಡಿದ್ದರಿಂದ ಪೂರ್ಣಿಮಾ ಮತ್ತು ಆಕೆಯ ಪತಿಗೆ ಒಬ್ಬರಿಗೊಬ್ಬರು ಮುಖ ನೋಡಲೂ ಸಾಧ್ಯವಾಗುತ್ತಿರಲಿಲ್ಲ.

ಜೀತದಾಳು ಕೆಲಸದಿಂದ 2014 ರಲ್ಲಿ ಪಾರಾಗಿ ಹೊರಬಂದ ನಂತರ ಈಗ 27 ವರ್ಷದ ಪೂರ್ಣಿಮಾ ತನ್ನ ಜೀವನದಲ್ಲಿ ಒಂದು ಬದಲಾವಣೆಯನ್ನು ಕಂಡುಕೊಂಡಿದ್ದಾರೆ. ಸ್ವತಂತ್ರ ಮತ್ತು ಸ್ವಾವಲಂಬಿಯಾಗಿ ಬದುಕುತ್ತಿರುವುದಲ್ಲದೆ ಉದಯೋನ್ಮುಖ ಟ್ರಸ್ಟ್ ಮೂಲಕ ಇತರ ಬಿಡುಗಡೆಯಾಗಿ ಬಂದ ಜೀತದಾಳುಗಳಿಗೆ ಉದ್ಯೋಗ ನೀಡಿ ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಕರಕುಶಲ ವಸ್ತುಗಳನ್ನು ಈ ಮೂಲಕ ಮಾರಾಟ ಮಾಡುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಮೇ 2016 ರಿಂದ ಕರ್ನಾಟಕದಲ್ಲಿ 2,562 ಜೀತದಾಳುಗಳನ್ನು ರಕ್ಷಿಸಲಾಗಿದೆ.

ಪೂರ್ಣಿಮಾ
ಅಂಧತ್ವ ಮೆಟ್ಟಿ ನಿಂತು ಉನ್ನತ ಶಿಕ್ಷಣ ಪೂರೈಸಿದ ಯುವತಿ: 2 ಚಿನ್ನದ ಪದಕ ಗಳಿಸಿದ ಸಾಧಕಿ

“ನೀನು ತೆಗೆದುಕೊಂಡಿರುವ ಸಾಲ ತೀರಿಸಬೇಕಾದರೆ ನಿಮ್ಮ ಹೆಂಡತಿಯನ್ನು ಕೂಡ ಕರೆತಂದು ಇಲ್ಲಿ ಕೆಲಸ ಮಾಡಲು ಹೇಳು ಎಂದು ಮಾಲೀಕರು ಷರತ್ತು ಹಾಕಿದ್ದರು. ಅಲ್ಲಿಗೆ ಹೋಗಿ ಸ್ವಲ್ಪ ಸಮಯ ಕಳೆದ ನಂತರ ಅವರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾರಂಭಿಸಿದರು, ಮನಸೋ ಇಚ್ಛೆ ನಿಂದಿಸುತ್ತಿದ್ದರು, ಕೆಲಸದ ಅವಧಿ ಮುಗಿದ ನಂತರವೂ ಕೆಲಸ ಮಾಡಿಸುತ್ತಿದ್ದರು. 1000 ಇಟ್ಟಿಗೆ ತುಂಡು ಮಾಡಿದರೆ 300 ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದ ಮಾಲೀಕರು ಅಷ್ಟು ಹಣ ನೀಡುತ್ತಿರಲಿಲ್ಲ'' ಎನ್ನುತ್ತಾರೆ ಪೂರ್ಣಿಮಾ.

ಇಟ್ಟಿಗೆ ತಯಾರಿ ಕೆಲಸ ಮಾಡುವಲ್ಲಿ ಹೆಂಗಸರಿಗೆ ಸರಿಯಾದ ವ್ಯವಸ್ಥೆಯಿರಲಿಲ್ಲ. ಶೌಚಾಲಯ ಇಲ್ಲದೇ ಬಯಲಿಗೇ ಹೋಗಬೇಕಾಗಿತ್ತು. ಹೆಣ್ಣುಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಪ್ಯಾಡ್ ವ್ಯವಸ್ಥೆ ಬಿಡಿ, ರಕ್ತದಲ್ಲಿ ತೊಯ್ದ ಬಟ್ಟೆಗಳನ್ನು ಬದಲಾಯಿಸಲು ನಮಗೆ ಅವಕಾಶವಿರಲಿಲ್ಲ, ನಮ್ಮ ಕೆಲಸದ ಅವಧಿ ಮುಗಿಯುವವರೆಗೂ ನಾವು ಹಾಗೆಯೇ ಇರಬೇಕಾಗಿತ್ತು, ಇಟ್ಟಿಗೆ ಆಕಾರ ಸರಿಯಾಗಿ ಬಾರದಿದ್ದರೆ ಬೈಯುತ್ತಿದ್ದರು, ನಿಂದಿಸುತ್ತಿದ್ದರು ಎನ್ನುತ್ತಾರೆ ಪೂರ್ಣಿಮಾ.

ಪೂರ್ಣಿಮಾ
ಸಿಎ ಓದು ಬಿಟ್ಟು, ಕೃಷಿಯಲ್ಲಿ ಯುವತಿ ಸಾಧನೆ: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ

ಈ ಎಲ್ಲಾ ಕಷ್ಟಗಳ ಸರಮಾಲೆ ನಡುವೆ ಪೂರ್ಣಿಮಾ ಗರ್ಭಧರಿಸಿ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದರು. ಜೀತದಾಳು ಪದ್ಧತಿಯಿಂದ ಈ ದಂಪತಿಯನ್ನು ರಕ್ಷಿಸಿದ್ದಾಗ ಅವರ ಮಕ್ಕಳಲ್ಲಿ ಒಬ್ಬನಿಗೆ ಆರು ತಿಂಗಳು ಮತ್ತು ಇನ್ನೊಬ್ಬನಿಗೆ ಒಂದೂವರೆ ವರ್ಷ. ಜೀತದಾಳಾಗಿ ಕೆಲಸ ಮಾಡುತ್ತಿದ್ದ ತನ್ನ ಅತ್ತಿಗೆಗೆ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಗರ್ಭಪಾತವಾಯಿತು, ಭ್ರೂಣದಲ್ಲಿ ಮೃತಪಟ್ಟ ಶಿಶುವನ್ನು ಹೊರತೆಗೆಯಲು ವೈದ್ಯಕೀಯ ನೆರವು ಪಡೆಯಲು ಒಂದು ವಾರದವರೆಗೆ ಅವಕಾಶ ನೀಡಿರಲಿಲ್ಲ ಎಂದು ಜೀತದಾಳಾಗಿದ್ದ ಸಂದರ್ಭದಲ್ಲಿ ಎದುರಿಸಿದ ಕರಾಳ ಅನುಭವವನ್ನು ಬಿಚ್ಚಿಡುತ್ತಾರೆ ಪೂರ್ಣಿಮಾ.

2014ರಲ್ಲಿ ಜೀತಪದ್ಧತಿಯಿಂದ ಬಿಡುಗಡೆ ನಂತರ ಏನಾಯ್ತು?: ನಿಖರ ಮಾಹಿತಿ ತಿಳಿದು ಅಧಿಕಾರಿಗಳು 2014ರಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಕಾರ್ಮಿಕರನ್ನು ರಕ್ಷಿಸಿ ಹೊರತಂದು ಬಿಡುಗಡೆ ಪ್ರಮಾಣಪತ್ರ Release Certificates (RCs) ನೀಡಿದರು. ಜೀವಿತಾವಧಿ ಮಿಷನ್ ನಡಿ ಪುನರ್ವಸತಿ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಕಾರ್ಮಿಕರಿಗೆ ನೀಡಲಾಯಿತು. ಅಲ್ಲಿ ಪೂರ್ಣಿಮಾ ಹೊಲಿಗೆ ತರಬೇತಿ ಪಡೆದು ಲ್ಯಾಪ್‌ಟಾಪ್ ಮತ್ತು ಆಭರಣ ಕವರ್‌ಗಳು, ಟೋಟ್ ಬ್ಯಾಗ್‌ಗಳು, ಕುಶನ್ ಕವರ್‌ಗಳು ಮತ್ತು ಇತರ ವಸ್ತುಗಳಿಗೆ ಕವರ್ ಹೊಲಿಯುವ ತರಬೇತಿ ಪಡೆದರು. ತಾವು ಕಲಿತ ವಿದ್ಯೆಯಿಂದ ನಗರದಲ್ಲಿ ಒಂದು ಅಂಗಡಿಯನ್ನು ತೆರೆದು ಆ ಮೂಲಕ ಇತರ ಜೀತದಾಳುವಿನಿಂದ ಬಚಾವಾಗಿ ಬಂದ ಕಾರ್ಮಿಕರಿಗೆ ಸಹಾಯ ಮಾಡುವ ಆಸೆಯನ್ನು ಹೊಂದಿದ್ದಾರೆ.

ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದ ಈ ದಂಪತಿ ತಮ್ಮಿಬ್ಬರು ಮಕ್ಕಳನ್ನು ಸರ್ಕಾರಿ ಉದ್ಯೋಗಕ್ಕೆ ಸೇರಿಸುವ ಇಚ್ಛೆ ಹೊಂದಿದ್ದಾರೆ. ನಿರಂತರ ಪರಿಶ್ರಮದಿಂದ ಇದು ಸಾಧ್ಯ ಎಂಬ ನಂಬಿಕೆ ಈ ದಂಪತಿಯದ್ದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com