

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ವಾಸಿಸುವ ಕೊರಗ ಜನಾಂಗದ ಕುಟುಂಬಗಳು ತಮ್ಮ ಪರಂಪರೆಯ ಕೌಶಲ್ಯವನ್ನು ಆಧುನಿಕ ಮಾರುಕಟ್ಟೆಯೊಂದಿಗೆ ಜೋಡಿಸಿ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾರೆ.
ಕಾಡಿನಲ್ಲಿ ಸಿಗುವ ಸಹಜ ಜೇನನ್ನು ಸಂಗ್ರಹಿಸಿ ‘ಪ್ರಕೃತಿ’ ಎಂಬ ಬ್ರ್ಯಾಂಡ್ನಡಿ ಮಾರಾಟ ಮಾಡುತ್ತಿರುವ ಈ ಸಮುದಾಯ, ಇದೀಗ ಗಲ್ಫ್ ರಾಷ್ಟ್ರಗಳಿಗೂ ತಮ್ಮ ಉತ್ಪನ್ನವನ್ನು ರಫ್ತು ಮಾಡುತ್ತಿದೆ.
ಅರಂತೋಡು, ಪಂಜ ಮತ್ತು ಕೊಲ್ಲಮೊಗರು ಗ್ರಾಮಗಳ ದಟ್ಟ ಅರಣ್ಯ ಪ್ರದೇಶಗಳಲ್ಲಿ 9 ಕೊರಗ ಕುಟುಂಬಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇವರು ಪಾರಂಪರಿಕ ವಿಧಾನಗಳನ್ನು ಅನುಸರಿಸುತ್ತಾ ಜೇನು ಸಂಗ್ರಹಿಸುತ್ತಿದ್ದು, ಜೇನುಗೂಡುಗಳನ್ನು ಹಾನಿಗೊಳಪಡಿಸದೇ, ಹೊಗೆ ಬಳಸಿಕೊಂಡು ಜೇನುಗಳನ್ನು ದೂರ ಸರಿಸಿ, ಗೂಡನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಈ ಜನರಿಗೆ ಜೇನು ಸಂಗ್ರಹಣೆ ಕೇವಲ ಉದ್ಯೋಗವಲ್ಲ, ಹಿಂದಿನಿಂದ ಬಂದಿರುವ ಜೀವನ ಶೈಲಿಯಾಗಿದೆ.
ಜೇನು ಸಂಗ್ರಹಿಸುವುದು ಎಂದರೆ ಸುಲಭವದ ಕೆಲಸವದಲ್ಲ ಇದು ಸಾಹಸಮಯ ಮತ್ತು ಕೌಶಲ್ಯಪೂರ್ಣ ಕೆಲಸವಾಗಿದೆ. 50 ಅಡಿ ಎತ್ತರದ ಮರಗಳನ್ನು ಏರಿ, ಕಾಡಿನ ಮಧ್ಯೆ ಅಪಾಯಗಳನ್ನು ಎದುರಿಸುತ್ತಾ ಜೇನು ಕಲೆಹಾಕಬೇಕಾಗುತ್ತದೆ.
ನಾವು ಕಾಡಿನೊಳಗೆ ಹೋಗಿ ಗೂಡಿನಿಂದ ಜೇನು ಸಂಗ್ರಹಿಸುತ್ತೇವೆ. ಇದು ನಮ್ಮ ಪೂರ್ವಿಕರಿಂದ ಬಂದ ಕೆಲಸ. ಅಪಾಯಗಳಿದ್ದರೂ ನಾವು ಅದನ್ನೇ ಜೀವನೋಪಾಯವಾಗಿ ಮುಂದುವರಿಸುತ್ತಿದ್ದೇವೆ ಎಂದು ಕೊರಗ ಸಮುದಾಯದ ಮಹಿಳೆ ಪುಷ್ಪಾ ಅವರು ಹೇಳಿದ್ದಾರೆ.
50 ಅಡಿಗಳಿಗಿಂತ ಹೆಚ್ಚು ಎತ್ತರದ ಮರಗಳನ್ನು ಹತ್ತುವುದು ಅತ್ಯಂತ ಕೌಶಲ್ಯಪೂರ್ಣ ಕೆಲಸ. ಮೊದಲು ಈ ಕಾಡು ಜೇನುತುಪ್ಪಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರಲಿಲ್ಲ. ಆದರೆ, 2023ರಲ್ಲಿ ವನ ಧನ್ ವಿಕಾಸ್ ಕೇಂದ್ರಗಳ (VDVK) ಸ್ಥಾಪನೆಯ ನಂತರ ಪರಿಸ್ಥಿತಿ ಬದಲಾಗಿದೆ. ನಾವು ಇದೀಗ ಇದರಿಂದ ಆದಾಯ ಗಳಿಸುತ್ತಿದ್ದೇವೆ. ಇದು ಶುದ್ಧ, ಕಲಬೆರಕೆಯಿಲ್ಲದ ಜೇನುತುಪ್ಪವಾಗಿದ್ದು, ಗ್ರಾಹಕರಿಂದ ನಿರಂತರ ಆರ್ಡರ್ಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವನ ಧನ್ ವಿಕಾಸ್ ಯೋಜನೆಯಡಿ ಈ ಕುಟುಂಬಗಳಿಗೆ ಬೆಂಬಲ ದೊರಕಿದ್ದು, ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಪರಿಣಾಮವಾಗಿ ಈಗ ಕೊರಗ ಕುಟುಂಬಗಳು ಸ್ಥಿರ ಆದಾಯವನ್ನು ಗಳಿಸುತ್ತಿವೆ. ಕುವೈತ್, ದುಬೈ ಮತ್ತು ಕರ್ನಾಟಕದಾದ್ಯಂತ ಗ್ರಾಹಕರು ಈ ಸಮುದಾಯದಿಂದ ಜೇನುತುಪ್ಪ ಖರೀದಿಸುತ್ತಿದ್ದಾರೆ.
ವನ ಧನ ವಿಕಾಸ ಕೇಂದ್ರದ ಸುಳ್ಯ ಬ್ಲಾಕ್ ವ್ಯವಸ್ಥಾಪಕಿ ಮೇರಿ ಎಸ್ ಅವರು ಮಾತನಾಡಿ, ಒಂಬತ್ತು ಕುಟುಂಬಗಳು ಕಾಡು ಜೇನುತುಪ್ಪ ಸಂಗ್ರಹಣೆಯಲ್ಲಿ ತೊಡಗಿಕೊಂಡಿವೆ. ಪ್ರಸ್ತುತ ಅವರ ಬಳಿ ಒಂದು ಕ್ವಿಂಟಾಲ್ಗಿಂತ ಹೆಚ್ಚು ದಾಸ್ತಾನು ಇದೆ. ಆದರೆ, ಮಧ್ಯಪ್ರಾಚ್ಯ ಬಿಕ್ಕಟ್ಟು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುವದರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಒಂದು ಕ್ವಿಂಟಲ್ಗಿಂತ ಹೆಚ್ಚು ಜೇನುತುಪ್ಪ ಸಂಗ್ರಹವಿದ್ದು, ಇದನ್ನು ಸ್ವಚ್ಛವಾದ ಗಾಜಿನ ಬಾಟಲಿಗಳಲ್ಲಿ ತುಂಬಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತಿದೆ. ಇದುವರೆಗೆ ಸುಮಾರು 60 ಕೆ.ಜಿ. ಜೇನು ಕುವೈತ್ ಮತ್ತು ದುಬೈಗೆ ರಫ್ತು ಮಾಡಲಾಗಿದ್ದು, ಪ್ರತಿ ಕೆ.ಜಿ.ಗೆ ಸುಮಾರು 1,250 ರೂ. ದರ ನಿಗದಿಯಾಗಿದೆ. ಈ ಜೇನು ಸಂಪೂರ್ಣ ಶುದ್ಧ ಮತ್ತು ಕಲಬೆರಕೆಯಿಲ್ಲದ್ದಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರದ ಪ್ರಮಾಣೀಕರಣವನ್ನು ಹೊಂದಿದೆ ಎಂದು ಹೇಳಿದ್ದಾರೆ.
Advertisement