ವಿಶ್ವಕಪ್ ಗೆ ತಮ್ಮ ಮಗ ಆಯ್ಕೆಯಾಗದಿರುವ ಕುರಿತಂತೆ ಕೋಪಗೊಂಡಿದ್ದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ದ ಕಿಡಿಕಾರಿದ್ದರ ಕುರಿತಂತೆ ಸ್ಪಷ್ಟನೆ ನೀಡಿರುವ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರು ಅಪ್ಪನ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ಚಾನೆಲೊಂದರಲ್ಲಿ ಸಂದರ್ಶನದ ವೇಳೆ ತಮ್ಮ ತಂದೆಯ ಹೇಳಿಕೆ ಕುರಿತಂತೆ ಮಾತನಾಡಿರುವ ಯುವರಾಜ್ ಸಿಂಗ್ ಅವರು, ತಮ್ಮ ತಂದೆಯ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಧೋನಿಯೊಂದಿಗೆ ನನಗೆ ಯಾವುದೇ ಸಮಸ್ಯೆಯಿಲ್ಲ. ಧೋನಿ ಅವರ ನಾಯಕತ್ವದಲ್ಲಿ ಈಗಲೂ ಆಟವಾಡಲು ಬಯಸುತ್ತೇನೆ ಎಂದಿದ್ದಾರೆ. ಅಲ್ಲದೆ, ಧೋನಿ ತಂದೆಯಾಗಿದ್ದಕ್ಕೆ ಅಭಿನಂದಿಸುವ ಸಲುವಾಗಿ ಅವರನ್ನು ಭೇಟಿಯಾಗಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಶ್ವಕಪ್- 2015 ರಲ್ಲಿ ಯುವರಾಜ್ ಸಿಂಗ್ ಆಯ್ಕೆಯಾಗದಿರುವುದಕ್ಕೆ ಧೋನಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ್ದ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧೋನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಧೋನಿ ಒಬ್ಬ ಅಹಂಕಾರಿ. ರಾವಣನ ಅಹಂಕಾರ ಕೊನೆಯಾದಂತೆ ಒಂದು ದಿನ ಧೋನಿ ಇದಕ್ಕೆಲ್ಲಾ ಬೆಲೆ ತೆರಲೇ ಬೇರಾಗುತ್ತದೆ. ಧೋನಿ ಏನೂ ಆಗಿರಲಿಲ್ಲ. ಧೋನಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಮಾಧ್ಯಮಗಳು. ಮಾಧ್ಯಮಗಳು ಹೊಗಳಿ ಅಟ್ಟಕ್ಕೇರಿಸಿದ ಕಾರಣವೇ ಧೋನಿಗೆ ಪಟ್ಟ ಕಟ್ಟುವಂತಾಯಿತು. ತನಗೆ ನೆರವು ನೀಡಿದ್ದ ಮಾಧ್ಯಮಗಳನ್ನು ಧೋನಿ ತುಚ್ಛವಾಗಿ ನೋಡುತ್ತಾನೆ. ಆತ ಒಂದೊಂದು ರನ್ ಪಡೆಯುವಾಗಲೂ ಪ್ರೋತ್ಸಾಹ ನೀಡುವ ಅಭಿಮಾನಿಗಳನ್ನು ನೋಡಿ ಆತ ವ್ಯಂಗ್ಯವಾಗಿ ನಗುತ್ತಾನೆ. ನಾನೊಬ್ಬ ಪತ್ರಕರ್ತನಾಗಿದ್ದರೆ ಧೋನಿಯ ಕಪಾಳಕ್ಕೆ ಬಾರಿಸುತ್ತಿದ್ದೆ. ಧೋನಿಯಂಥ ಮನುಷ್ಯನನ್ನು ನಾನು ನನ್ನ ಜೀವನದಲ್ಲಿ ನೋಡಿರಲಿಲ್ಲ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ಧ ಕಿಡಿಕಾರಿದ್ದರು ಅಲ್ಲದೆ ಹಿಡಿಶಾಪ ಹಾಕಿದ್ದರು.
Advertisement