ಮಂಗಳೂರು: ಪ್ರತಿಷ್ಟಿತ 19 ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಥತೆಯಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಕ್ರೀಡಾಳುಗಳು ಈಗಾಗಲೇ ಆಗಮಿಸಿದ್ದಾರೆ. ಹಾಗಾಗಿ ಏಪ್ರಿಲ್ 29 ರಿಂದಲೇ ವೆಚ್ಚವನ್ನು ಭರಿಸಲು ಆಯೋಜಕರು ತೀರ್ಮಾನಿಸಿದ್ದಾರೆ. ಕ್ರೀಡಾಳುಗಳಿಗೆ ಉಚಿತ ವಸತಿ, ಚಿಕಿತ್ಸೆ ಜತೆಗೆ ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಳುಗಳಿಗೆ ಉಚಿತ ವಿಮೆ ಕಲ್ಪಿಸಲಾಗಿದೆ.
ಕ್ರೀಡಾಕೂಟದ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಹೇಳಿದೆ. ಆದರೆ ಮಳೆ ಬಂದರೂ ಕ್ರೀಡಾಕೂಟ ಸ್ಥಗಿತವಾಗುವುದಿಲ್ಲ. ಸಿಂಥೆಟಿಕ್ ಟ್ರ್ಯಾಕ್ ಹಾಕಿರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಜೋರು ಮಳೆ ಬರುವ ವೇಳೆಯಲ್ಲಿ ಅಂಗಣದಲ್ಲಿ ಡಿಸ್ಕಸ್, ಜಾವಲಿನ್ ಮುಂತಾದ ಕ್ರೀಡೆ ನಡೆಸುಬಹುದು ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ತಿಳಸಿದ್ದಾರೆ. ಪ್ರಮುಖ ಸಂಘ ಸಂಸ್ಥೆ ನಿಗಮಗಳು ಈಗಾಗಲೇ ಕ್ರೀಡಾಕೂಟಕ್ಕೆ ದೇಣಿಗೆ ಬಿಡುಗಡೆ ಮಾಡಿದ್ದಾರೆ. ಕ್ರೀಡಾಳುಗಳ ಹೊರತಾಗಿ ಜಿಲ್ಲೆಯ 20.000 ಕ್ರೀಡಾಭಿಮಾನಿಗಳು ಬರುವ ನಿರೀಕ್ಷೆ ಇದೆ.
ನಾಡಾ ಘಟಕ ಉದ್ಘಾಟನೆ: ಮಂಗಳಾ ಸ್ಟೆಡಿಯಂನಲ್ಲಿರುವ ಸುಮಾರು ದಶಕಗಳ ಹಿಂದಿನ ಹೆರಿಟೇಜ್ ಕಟ್ಟಡವನ್ನು ನವೀಕೃತಗೊಳಿಸಿ, ಅಲ್ಲಿ ರಾಷ್ಟ್ರೀಯ ಉದ್ದೀಪನಾ ದ್ರವ್ಯ ಪತ್ತೆ ಘಟಕ ನಾಡಾದ ಕಚೇರಿ ಮಾಡಲಾಗಿದೆ. ಇದನ್ನು ಉದ್ಘಾಟಿಸಿದ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕಾಗಿ ಕ್ರೀಡಾಂಗಣದ ಸಿದ್ಧತೆ, ಕ್ರೀಡಾಪಟುಗಳಿಗೆ ವ್ಯವಸ್ಥೆ ಶೇ. 90 ರಷ್ಟು ಪೂರ್ಣಗೊಂಡಿದೆ.
ಮುಖ್ಯಮಂತ್ರಿಗಳು 1 ಕೋಟಿ ರೂ ಘೋಷಿಸಿದ್ದು, ಈಗಾಗಲೇ 50 ಲಕ್ಷ ಬಿಡುಗಡೆ ಮಾಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ 5 ಲಕ್ಷ ರೂ ನೀಡಿದ್ದು ಪರಿಸರ ಇಲಾಖೆಯಿಂದ 10 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕ್ರೀಡಾ ಇಲಾಖೆಯ ರಾಜ್ಯ ಸಚಿವ ಅಭಯ್ ಚಂದ್ರ ಜೈನ್ ಮಾತನಾಡಿ ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕೂಟ ನಮ್ಮ ಕನಸಿನ ಕೂಸು. ಮಂಗಳಾ ಕ್ರೀಡಾಂಗಣದಲ್ಲಿ ಹಿಂದೆ ಇದ್ದ ಕುಂದು ಕೊರತೆಗಳನ್ನು ಸರಿಪಡಿಸಲಾಗುತ್ತಿದೆ. ಕ್ರೀಡಾಂಗಣಕ್ಕೆ ನೂತನ ಕಾಯಕಲ್ಪ ನೀಡಲಾಗಿದೆ ಎಂದರು.
ಕರ್ನಾಟಕದಲ್ಲೇ ಮೊದಲ ಬಾರಿಗೆ ಅದರಲ್ಲೂ ಕರಾವಳಿ ಜಿಲ್ಲೆಯಲ್ಲಿ ನಡೆಯುವಂತಹ ಈ ರಾಷ್ಟ್ರೀಯ ಕ್ರೀಡಾಕೂಟವನ್ನು ಮಾದರಿ ಕ್ರೀಡಾಕೂಟವಾಗಿ ಮಾಡುವುದು ನಮ್ಮೆಲ್ಲರ ಕನಸು. ಅದಕ್ಕಾಗಿ ಹಗಲಿರುಳೆನ್ನದೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು.
Advertisement