ಕಳೆದ ವರ್ಷ ಬ್ಯಾಡ್ಮಿಂಟನ್ ತೊರೆಯಲು ನಿರ್ಧರಿಸಿದ್ದೆ: ಸೈನಾ ನೆಹ್ವಾಲ್

ವೃತ್ತಿಯನ್ನು ತೊರೆಯಲು ಒಮ್ಮೆ ನಿರ್ಧರಿಸಿದ್ದ ನನಗೆ ಗುರುಗಳಾದ ವಿಮಲ್ ಅವರು ಧೈರ್ಯ, ವಿಶ್ವಾಸ ತುಂಬಿಸಿದರು. ನನ್ನ ತರಬೇತಿಯನ್ನು ಬೆಂಗಳೂರಿಗೆ ಬದಲಾಯಿಸಿದ್ದು ಬಹಳ...
ಸೈನಾ ನೆಹ್ವಾಲ್(ಸಂಗ್ರಹ ಚಿತ್ರ)
ಸೈನಾ ನೆಹ್ವಾಲ್(ಸಂಗ್ರಹ ಚಿತ್ರ)

ಹೈದರಾಬಾದ್: ವೃತ್ತಿಯನ್ನು ತೊರೆಯಲು ಒಮ್ಮೆ ನಿರ್ಧರಿಸಿದ್ದ ನನಗೆ ಗುರುಗಳಾದ ವಿಮಲ್ ಕುಮಾರ್ ಅವರು ಧೈರ್ಯ, ವಿಶ್ವಾಸ ತುಂಬಿಸಿದರು. ನನ್ನ ತರಬೇತಿಯನ್ನು ಬೆಂಗಳೂರಿಗೆ ಬದಲಾಯಿಸಿದ್ದು ಬಹಳ ಸಹಾಯವಾಯಿತು ಎಂದು ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ಆಚಗಾರ್ತಿ ಸೈನಾ ನೆಹ್ವಾಲ್ ತಿಳಿಸಿದ್ದಾರೆ.

ನನ್ನ ದುರ್ಬಲ ಪ್ರದರ್ಶನದಿಂದಾಗಿ ಕಳೆದ ವರ್ಷ ಆಟ ತೊರೆಯಲು ನಿರ್ಧರಿಸಿದ್ದೆ. ಆದರೆ ವಿಮಲ್ ಕುಮಾರ್ ಸರ್ ನಾನು ಮತ್ತೆ ಪುಟಿದೇಳುವಂತೆ ಮಾಡಿದರು ಎಂದು ಹೇಳಿದ್ದಾರೆ.
ನನ್ನ ಅಭ್ಯಾಸದ ಸ್ಥಳವನ್ನು ಹೈದರಾಬಾದಿನಿಂದ ಬೆಂಗಳೂರಿಗೆ ಬದಲಾಯಿಸಿದ್ದು ಬಹಳ ಸಹಾಯವಾಯಿತು. ಆ ಬಳಿಕ ನನ್ನಲ್ಲಿ ಹಲವು ಬದಲಾವಣೆಗಳಾದವು. ನಂತರ ಅನೇಕ ಪಂದ್ಯಗಳನ್ನು ಗೆದ್ದುಕೊಂಡೆ ಎಂದು ಜಕಾರ್ತಾದಿಂದ ಮರಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.

ಹೈದರಾಬಾದಿನಿಂದ ಬೆಂಗಳೂರಿಗೆ ನನ್ನ ಅಭ್ಯಾಸದ ಶಿಬಿರವನ್ನು ಬದಲಾಯಿಸಿದ್ದು, ನನ್ನೊಳಗೆ ಸಾಕಷ್ಟು ಬದಲಾವಣೆ ತಂದವು. ವಿಮಲ್ ಕುಮಾರ್ ಅವರು ನನಗೆ ಗುರುಗಳಾಗಿ ಸಿಕ್ಕಿದ್ದು ನನ್ನ ಅದೃಷ್ಟ. ಅವರು ನನ್ನಲ್ಲಿ ಪ್ರತಿದಿನ ಧೈರ್ಯ ತುಂಬುತ್ತಿದ್ದರು. ನಾನು ಅವರಿಗೆ ಧನ್ಯವಾದ ಹೇಳಬೇಕು. ಶಾರೀರಿಕವಾಗಿಯೂ ನಾನೀಗ ಮೊದಲಿಗಿಂತ ಸದೃಢಳಾಗಿದ್ದೇನೆ. ಅವರು ನನಗೆ ವೈಯಕ್ತಿಕವಾಗಿ ಗಮನ ನೀಡಿದರು ಎಂದು ಸೈನಾ ಸಂತೋಷದಿಂದ ನುಡಿಯುತ್ತಾರೆ.

ಕಳೆದ ವರ್ಷ ನಿರಂತರ ಸೋಲಿನಿಂದಾಗಿ ನಾನು ಕಂಗೆಟ್ಟಿದ್ದೆ. ಬ್ಯಾಡ್ಮಿಂಟನ್ ತೊರೆಯುವ ಆಲೋಚನೆಯನ್ನೂ ಮಾಡಿದ್ದೆ. ಆ ಹೊತ್ತಿನಲ್ಲಿ ವಿಮಲ್ ಸರ್ ಅವರು ಉಬರ್ ಕಪ್ ತಂಡದಲ್ಲಿ ಸೇರಿಕೊಂಡು ನನ್ನನ್ನು ಹುರಿದುಂಬಿಸಿದರು. ನನಗೂ ಮನದ ಮೂಲೆಯಲ್ಲಿ ಸೈನಾ ನಿನಗೆ ಸಾಮರ್ಥ್ಯವಿದೆ ಎಂದು ಅನಿಸುತ್ತಿತ್ತು, ಪ್ರೋತ್ಸಾಹ, ದೃಢ ನಿಲುವು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಸೈನಾ ತಾವು ಪಟ್ಟ ಶ್ರಮದ ಬಗ್ಗೆ ವಿವರಿಸುತ್ತಾರೆ.

ಇದೇ ಆತ್ಮವಿಶ್ವಾಸದಲ್ಲಿ ಅವರು ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಗೆ ಸಿದ್ದತೆ ನಡೆಸುವ ತಯಾರಿಯಲ್ಲಿದ್ದಾರೆ. ಮೊನ್ನೆ ಜಕಾರ್ತಾದಲ್ಲಿ ಮುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸೈನಾ ನೆಹ್ವಾಲ್ ಅಂತಿಮ ಹಂತದವರೆಗೆ ಹೋಗಿ ಸ್ಪೇನ್ ಆಟಗಾರ್ತಿ ಕರೊಲಿನಾ ಮರಿನ್ ಎದುರು ಸೋತಿದ್ದರು. ಆದರೆ ಫೈನಲ್ ವರೆಗೆ ಹೋದ ಭಾರತದ ಮೊದಲ ಆಟಗಾರ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಬೆಳ್ಳಿ ಪದಕವನ್ನು ತಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com