ನವದೆಹಲಿ: ಮೊಣಕೈಗೆ ತಗುಲಿರುವ ಗಾಯವು ಇನ್ನೂ ಮಾಯದ ಹಿನ್ನೆಲೆಯಲ್ಲಿ ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಜನವರಿಯಲ್ಲಿ ನಡೆಯಲಿರುವ ಏರ್ಸೆಲ್ ಚೆನ್ನೈ ಓಪನ್ ಪಂದ್ಯಾವಳಿಯಿಂದ ಹಿಮ್ಮೆಟ್ಟಿದ್ದಾರೆ. ಈ ಋತುವಿನಲ್ಲಿ ಚಾಲೆಂಜರ್ಸ್ ಮಟ್ಟದ ಟೂರ್ನಿಗಳಲ್ಲಿ ಎರಡು ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ಯೂಕಿ, ಕನಿಷ್ಟ ಆರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ದೆಹಲಿ ಮೂಲದ ಅವರ ವೈದ್ಯರು ಸೂಚಿಸಿರುವುದರಿಂದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಸೂಕ್ತ ಸಿದ್ಧತೆ ಪಡೆಯುವ ಅವಕಾಶದಿಂದ ವಂಚಿತ ವಾದಂತಾಗಿದೆ. 'ತರಬೇತಿ ಹಾಗೂ ದೈಹಿಕ ಕಸರತ್ತು ನಡೆಸುತ್ತಿದ್ದರೂ, ಚೆಂಡನ್ನು ಬಲವಾಗಿ ಹಿಟ್ ಮಾಡಲು ವಿಫಲವಾಗಿದ್ದೇನೆ. ಹಾಗಾಗಿ, ಚೆನ್ನೈ ಓಪನ್ನಿಂದ ಹೊರಬೀಳುತ್ತಿದ್ದೇನೆ'' ಎಂದಿದ್ದಾರೆ.
Advertisement