ಇಂದೋರ್: ಅನೌಪಚಾರಿಕ ಎನಿಸಿದ್ದ ಕರ್ನಾಟಕ ಮತ್ತು ಅಸ್ಸಾಂ ತಂಡಗಳ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ದಿನದಾಟದಲ್ಲಿ ವಿಶೇಷತೆ ಏನೂ ಇರಲಿಲ್ಲ. ನಿರೀಕ್ಷೆಯಂತೆ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಸೆಮಿಫೈನಲ್ ಗೆ ಕಾಲಿಟ್ಟಿತು. ಪಂದ್ಯ ಡ್ರಾಗೊಂಡರೂ ಅಸ್ಸಾಂ, ಎಂಟರಘಟ್ಟದೊಂದಿಗೆ ಈ ಬಾರಿಯ ಹೋರಾಟಕ್ಕೆ ತೆರೆ ಎಳೆದುತಕೊಂಡಿತು.
ಹೋಳ್ಕರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುರುವಾರ ನಾಲ್ಕನೇ ದಿನದಾಟದಲ್ಲಿ ಕರ್ನಾಟಕ ತಂಡ ಅಸ್ಸಾಂಗೆ ಗೆಲ್ಲಲು 683 ರನ್ ಗಳ ಅಸಾಧ್ಯ ಗುರಿ ನೀಡಿದಾಗಲೇ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿಕೊಂಡಂತಾಗಿತ್ತು. ಏಕೆಂದರೆ, ಒಂದು ದಿನಕ್ಕಿಂತಲೂ ಸ್ವಲ್ಪ ಹೆಚ್ಚಿನ ಸಮಯದ ಆಟದಲ್ಲಿ ಇಷ್ಟು ಮೊತ್ತದ ಗುರಿಯತ್ತ ಸಾಗಲು ಯಾರಿಗೂ ಸಾಧ್ಯವಿಲ್ಲ. ಉಪಾಂತ್ಯ ದಿನದಾಟ ನಿಂತಾಗ ಅಸ್ಸಾಂ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿತ್ತು. ಹಾಗಾಗಿ, ಶುಕ್ರವಾರ ಅಂತಿಮ ದಿನದಾಟದಲ್ಲಿ ಅಸ್ಸಾಂ ಇನ್ನುಳಿದ 351 ರನ್ ಗಳಿಸುವುದು ಅಸಾಧ್ಯದ ಮಾತಾಗಿತ್ತು. ಕರ್ನಾಟಕದ ಅತ್ಯುತ್ತಮ ಬೌಲಿಂಗ್ ಪಡೆಯ ಮುಂದೆ ಅಸ್ಸಾಂ ಸಾಮರ್ಥ್ಯ ಸಾಲದ್ದಾಗಿತ್ತು.
ಅಂತಿಮ ದಿನದಾಟ ಮುಂದುವರಿಸಿದ ಅಸ್ಸಾಂ ತನ್ನ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಠಕ್ಕೆ 338 ರನ್ ಗಳಿಸಿದಾಗ ಉಭಯ ನಾಯಕರು ಡ್ರಾಗೆ ಸಮ್ಮತಿಸಿದರು. ಅಸ್ಸಾಂ ಬ್ಯಾಟಿಂಗ್ ನಲ್ಲಿ ಮಿಂಚಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗೋಕುಲ್ ಶರ್ಮಾ ಶತಕ ಗಳಿಸಿ (ಅಜೇಯ 127, 191 ಎಸೆತ, 19 ಬೌಂಜರಿ) ಗಮನ ಸೆಳೆದರು. ಕರ್ನಾಟಕದ ಬೌಲಿಂಗ್ ನಲ್ಲಿ ಸಮರ್ಥ್ 2 ಹಾಗೂ ಶ್ರೇಯಸ್ ಗೋಪಾಲ್ ಮತ್ತು ಅರವಿಂದ್ ತಲಾ 1 ವಿಕೆಟ್ ಪಡೆದರು.
Advertisement