ತಪ್ಪು ಕೆಲಸಕ್ಕೆ ಕೈ ಹಾಕಿಲ್ಲ: ಸುರೇಶ್ ರೈನಾ
ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ಉದ್ದಿಮೆದಾರರೊಬ್ಬರ ಬಳಿ ಲಂಚ ಪಡೆದಿರುವುದಾಗಿ ಐಪಿಎಲ್ ನ ಮಾಜಿ ಆಯುಕ್ತ ಲಲಿತ್ ಮೋದಿ ಮಾಡಿರುವ ಆರೋಪವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಅಲ್ಲಗಳೆದಿದ್ದಾರೆ.
ನನ್ನ ಬಗ್ಗೆ ಮಾಧ್ಯಮಗಳಲ್ಲಿ ಲಂಚ ಸ್ವೀಕರಿಸಿರುವ ವರದಿಗಳು ಪ್ರಕಟವಾಗಿರುವುದರಿಂದ ವಿಶ್ವದೆಲ್ಲೆಡೆ ಇರುವ ನನ್ನ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ನಾನು ಕ್ರೀಡೆಯನ್ನು ಎಂದಿಗೂ ಉತ್ತಮ ಸ್ಪೂರ್ತಿಯಿಂದ ಆಡಿದ್ದು, ಪ್ರಾಮಾಣಿಕತೆ ಕಾಪಾಡಿಕೊಂಡಿದ್ದೇನೆ. ನಾನೆಂದೂ ತಪ್ಪು ಕೆಲಸಕ್ಕೆ ಕೈಹಾಕಿಲ್ಲ. ನನ್ನ ಮೇಲೆ ಬಂದಿರುವ ಆರೋಪಗಳು ಸುಳ್ಳು ಮಾಮಿ ಯಾವುದೇ ತಂಡವನ್ನು ಪ್ರತಿನಿಧಿಸಿದರು ಆ ತಂಡಕ್ಕೆ ಉತ್ತಮವಾಗಿ ಆಡುವ ಬಗ್ಗೆ ಯೋಚಿಸುತ್ತೇನೆ.
ಈ ವಿಷಯದಲ್ಲಿ ಮುಂದಿನ ಹೆಜ್ಜೆ ಇಡಲು ಕಾನೂನು ಸಲಹೆಗಾರರ ನೆರವು ಪಡೆಯುತ್ತಿದ್ದೇನೆ ಎಂದು ರೈನಾ ಹೇಳಿದ್ದಾರೆ. ಐಪಿಎಲ್ ನಲ್ಲಿ ಭಾರತದ ಇಬ್ಬರು ಆಟಗಾರರು ಮತ್ತು ವೆಸ್ಟ್ ಇಂಡೀಸ್ ನ ಓರ್ವ ಆಟಗಾರ ರಿಯಲ್ ಎಸ್ಟೇಟ್ ಉದ್ದಿಮೆದಾರ ಹಾಗೂ ಬುಕ್ಕಿಯಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಲಲಿತ್ ಮೋದಿ ಇತ್ತೀಚೆಗಷ್ಟೇ ಆರೋಪಿಸಿದ್ದರು.