ಸರಣಿ ವೈಟ್‍ವಾಷ್‍ಗೆ ಕಿವೀಸ್ ಪಡೆ ಚಿತ್ತ

ಆರಂಭಿಕ ಎರಡು ಟಿ20 ಪಂದ್ಯಗಳಲ್ಲಿ ಸೋಲನುಭವಿಸಿರುವ ಭಾರತ ವನಿತೆಯರ ಕ್ರಿಕೆಟ್ ತಂಡದ ಪಾಲಿಗೆ...
ಭಾರತ ಮಹಿಳಾ ತಂಡ
ಭಾರತ ಮಹಿಳಾ ತಂಡ

ಬೆಂಗಳೂರು: ಆರಂಭಿಕ ಎರಡು ಟಿ20 ಪಂದ್ಯಗಳಲ್ಲಿ ಸೋಲನುಭವಿಸಿರುವ ಭಾರತ ವನಿತೆಯರ ಕ್ರಿಕೆಟ್ ತಂಡದ ಪಾಲಿಗೆ ಇದೀಗ ಬುಧವಾರ ನಡೆಯಲಿರುವ ಮೂರನೇ ಹಾಗೂ ಕೊನೇ ಪಂದ್ಯ ಒತ್ತಡದ ಗೂಡಾಗಿ ಪರಿಣಮಿಸಿದೆ.

ಬುಧವಾರ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಲಿರುವ ಪಂದ್ಯ ನ್ಯೂಜಿಲೆಂಡ್ ಪಾಲಿಗೆ ಅನೌಪಚಾರಿಕವೆ ವೆನಿಸಿದರೆ, ಭಾರತಕ್ಕೆ ಮಾನ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಅನಿವಾರ್ಯತೆಯಾಗಿದೆ.

ಏಕದಿನ ಸರಣಿಯನ್ನು ಗೆದ್ದ ನಂತರ ಭಾರತ ವನಿತೆಯರ ತಂಡ, ಚುಟುಕು ಸರಣಿಯಲ್ಲಿ ಎಡವಿತು. ಆ ಮೂಲಕ ಸರಣಿಯನ್ನು ಪ್ರವಾಸಿ ತಂಡಕ್ಕೆ ಬಿಟ್ಟು ಕೊಟ್ಟಿದ್ದು, ಈಗ ಕ್ಲೀನ್‍ಸ್ವೀಪ್‍ನಿಂದ ಪಾರಾಗುವ ಬಗೆ ಏನೆಂದು ತಡಕಾಡುವಂತಾಗಿದೆ.

 ಆರಂಭಿಕ ಎರಡು ಪಂದ್ಯಗಳಲ್ಲಿ ಮಿಥಾಲಿ ಪಡೆ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಪರಿಣಾಮ ಕಿವೀಸ್ ಪಡೆ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಲು ಎಡವುತ್ತಿದ್ದು, ಎದುರಾಳಿ ತಂಡಕ್ಕೆ ಕಠಿಣ ಸವಾಲು ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಬೌಲರ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ಮತ್ತೊಂದೆಡೆ ಚುಟುಕುಕ್ರಿಕೆಟ್‍ನಲ್ಲಿ ನ್ಯೂಜಿಲೆಂಡ್ ಪಡೆ ಸಾಕಷ್ಟು ನಿಯಂತ್ರಣ ಸಾಧಿಸಿದೆ. ತಂಡದಲ್ಲಿನ ಆಟಗಾರ್ತಿಯರು ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಂತಿದ್ದಾರೆ. ಅಲ್ಲದೆ ಬೌಲರ್‍ಗಳು ಸಂಘಟಿತ ಪ್ರದರ್ಶನ ನೀಡುವ ಮೂಲಕ ಆತಿಥೇಯ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಪಂದ್ಯದಲ್ಲಿ ಸೋಫಿ ಡಿವೈನ್ ಅವರ ಅಬ್ಬರದ ಬ್ಯಾಟಿಂಗ್ ಭಾರತ ತಂಡದಿಂದ ಗೆಲುವನ್ನು ಕಸಿದುಕೊಂಡಿತ್ತು. ನಂತರ ಎರಡನೇ ಪಂದ್ಯದಲ್ಲಿ ರಾಖೇಲ್ ಪ್ರೀಸ್ಟ್ ಅವರ ಜವಾಬ್ದಾರಿಯುತ ಅರ್ಧಶತಕ ಮಿಥಾಲಿ ಪಡೆಗೆ ಮುಳುವಾಗಿ ಪರಿಣಮಿಸಿತು. ಎರಡೂ ಪಂದ್ಯಗಳಲ್ಲಿ ಭಾರತದ ಬೌಲರ್‍ಗಳು ಆರಂಭದಲ್ಲೇ ಎದುರಾಳಿ ತಂಡಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾಗಿತ್ತಾದರೂ, ನಂತರ ದ ಹಂತದಲ್ಲಿ ಒತ್ತಡ ಹೇರುವಲ್ಲಿ ವಿಫಲವಾಗಿತ್ತು.

 ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮಿಥಾಲಿ ರಾಜ್, ವಿ. ವನಿತಾ,ಹರ್ಮನ್‍ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ ಪ್ರಮುಖ ಆಟಗಾರ್ತಿಯರಾಗಿದ್ದಾರೆ. ಇವರು ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸಿದರೆ ಮಾತ್ರ ತಂಡಕ್ಕೆ ಗೆಲುವಿನ ಅವಕಾಶ ಒಲಿದು ಬರುತ್ತದೆ. ಇಲ್ಲವಾದರೆ, ತಂಡ ಮತ್ತೊಂದು ಸೋಲು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಿಥಾಲಿ ಬಳಗಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com